newsics.com/ನ್ಯೂಸಿಕ್ಸ್
ಕಲ್ಪವೃಕ್ಷ ಎಂದು ನಂಬಿ ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ತೆಂಗಿನಕಾಯಿ ದರ ಕೇವಲ ಎರಡು ತಿಂಗಳ ಅಂತರದಲ್ಲಿ ಅರ್ಧದಷ್ಟು ದರ ಇಳಿಕೆ ಕಂಡಿದ್ದು, ಬೆಳೆಗಾರರು ಹತಾಶೆ ಅನುಭವಿಸುವಂತಾಗಿದೆ.ಎರಡು ತಿಂಗಳ ಹಿಂದಷ್ಟೇ ಪ್ರತಿ ಕೆ.ಜಿ.ಗೆ 70ರಿಂದ 72 ರೂಪಾಯಿ ಇದ್ದ ತೆಂಗಿನಕಾಯಿ ಧಾರಣೆ, ಇಂದು ಕೇವಲ 30 ರಿಂದ 32 ರೂಪಾಯಿಗೆ ಕುಸಿದಿದೆ.
ಅಂದರೆ, ಬೆಲೆ ಶೇ.50ಕ್ಕಿಂತಲೂ ಹೆಚ್ಚು ಪಾತಾಳಕ್ಕೆ ಇಳಿದಿದೆ. ಈ ಬೆಲೆ ಇಳಿಕೆಯ ಲಾಭ ಗ್ರಾಹಕರಿಗೂ ಸಿಗುತ್ತಿಲ್ಲ, ಇತ್ತ ಎಳನೀರು-ಕೊಬ್ಬರಿ ಬೆಲೆಯೂ ಕಡಿಮೆಯಾಗಿಲ್ಲ. ತೆಂಗಿನಕಾಯಿ ಬೆಲೆ ಮಾತ್ರ ಅರ್ಧದಷ್ಟು ಕುಸಿದಿದ್ದು, ಮಾರುಕಟ್ಟೆಯ ಕರಾಳ ಮುಖವನ್ನು ಅನಾವರಣಗೊಳಿಸಿದೆ.
ದರ ಕುಸಿತಕ್ಕೆ ಕಾರಣವೇನು?
ತೆಂಗಿನಕಾಯಿ ದರ ದಿಢೀರ್ ಕುಸಿಯಲು ಮಾರುಕಟ್ಟೆಯ ಕೊಂಡಿ ಕಳಚಿರುವುದು ಪ್ರಮುಖ ಕಾರಣ. ದೇಶದಲ್ಲೇ ಪ್ರಮುಖ ತೆಂಗಿನಪುಡಿ ಉತ್ಪಾದನಾ ಕೇಂದ್ರವಾಗಿರುವ ತಮಿಳುನಾಡಿನ ಕಾಂಗೈಂ ಸೇರಿದಂತೆ ಪ್ರಮುಖ ಕಾರ್ಖಾನೆಗಳು ಸದ್ಯಕ್ಕೆ ತೆಂಗು ಖರೀದಿಯನ್ನು ಬಹುತೇಕ ಸ್ಥಗಿತಗೊಳಿಸಿವೆ ಅಥವಾ ಕಡಿತಗೊಳಿಸಿವೆ.
ಮತ್ತೊಂದೆಡೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿರುವುದು ಮತ್ತು ಕಾರ್ಖಾನೆಗಳಲ್ಲಿ ಈಗಾಗಲೇ ತೆಂಗಿನಪುಡಿಯ ದಾಸ್ತಾನು ಹೆಚ್ಚಾಗಿರುವುದು ಖರೀದಿದಾರರು ಮಾರುಕಟ್ಟೆಯಿಂದ ಹಿಂದೆ ಸರಿಯಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಕಾರ್ಖಾನೆಗಳು ತೆಂಗಿನಕಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸದ ಕಾರಣ, ಬೆಳೆಗಾರರು ಅನಿವಾರ್ಯವಾಗಿ ಸ್ಥಳೀಯ ಮಾರುಕಟ್ಟೆಗಳಿಗೆ ತೆಂಗನ್ನು ತರುತ್ತಿದ್ದು, ಪೂರೈಕೆ ಹೆಚ್ಚಾಗಿ ಬೆಲೆ ಕುಸಿದಿದೆ ಎನ್ನಲಾಗುತ್ತಿದೆ. ಸದ್ಯ ತೆಂಗಿನ ಮಾರುಕಟ್ಟೆಯಲ್ಲಿ ಕಂಡುಬರುತ್ತಿರುವ ಚಿತ್ರಣ ಅತ್ಯಂತ ಗೊಂದಲಮಯವಾಗಿದೆ. ಕಲ್ಪವೃಕ್ಷದಲ್ಲಿನ ತೆಂಗಿನಕಾಯಿಗೆ ಮಾತ್ರ ದರ ಕುಸಿತವಾಗಿದ್ದರೆ, ಎಳನೀರು ಮತ್ತು ಕೊಬ್ಬರಿಯ ದರ ಸ್ಥಿರವಾಗಿದೆ. ಬೆಳೆಗಾರನಿಗೆ ಸಿಗುತ್ತಿರುವ ಬೆಲೆ ಹಾಗೂ ಗ್ರಾಹಕರು ಮಾರುಕಟ್ಟೆಯಲ್ಲಿ ನೀಡುತ್ತಿರುವ ಬೆಲೆಗೂ ಸಾಕಷ್ಟು ವ್ಯತ್ಯಾಸವಿದೆ. ಇದರ ಲಾಭವನ್ನು ಮಧ್ಯವರ್ತಿಗಳು ಪಡೆಯುತ್ತಿದ್ದಾರೆ ಎಂಬುದು ಗಮನಾರ್ಹ.
ಗ್ರಾಹಕರಿಗಿಲ್ಲ ದರ ಕುಸಿತ ಲಾಭ
ತೋಟದಿಂದ ಹೊರಬರುವ ಕಾಯಿಗೆ ರೈತನಿಗೆ ಸಿಗುವುದು ಕೆ.ಜಿಗೆ ಕೇವಲ 30 ರೂಪಾಯಿ. ಆದರೆ, ಅದೇ ಕಾಯಿ ಗ್ರಾಹಕನ ಕೈ ಸೇರುವಾಗ ಅರ್ಧ, ಮೂಕ್ಕಾಲು ಕೆ.ಜಿ. ತೂಗುವ ಒಂದು ತೆಂಗಿನಕಾಯಿಗೇ 50 ರೂಪಾಯಿ ಆಗುತ್ತಿದೆ. ಲಾಭವೆಲ್ಲವೂ ಮಧ್ಯವರ್ತಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳ ಪಾಲಾಗುತ್ತಿದೆ. ವರ್ಷಪೂರ್ತಿ ಕಷ್ಟಪಟ್ಟು, ಸಾಕಷ್ಟು ಖರ್ಚು ಭರಿಸಿ ಬೆಳೆದ ರೈತನಿಗೂ ಅಷ್ಟೇ ಲಾಭ, ಕೇವಲ ಕೈ ಬದಲಾಯಿಸುವ ಮಧ್ಯವರ್ತಿಗೂ ಅಷ್ಟೇ ಲಾಭ. ಇದೆಂಥ ಮಾರುಕಟ್ಟೆ ವ್ಯವಸ್ಥೆ ಎಂದು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಳನೀರು ದರ ಸ್ಥಿರ
ಬಿರು ಬೇಸಿಗೆಯ ಬಳಿಕವೂ ಎಳನೀರಿಗೆ ನಗರ ಪ್ರದೇಶಗಳಲ್ಲಿ ಬೇಡಿಕೆ ಕಡಿಮೆಯಾಗಿಲ್ಲ. ಹಾಗಾಗಿ ರೈತರ ತೋಟದಲ್ಲಿ ಎಳನೀರುವೊಂದಕ್ಕೆ 40 ರಿಂದ 42 ರೂ.ನಂತೆ ಖರೀದಿಯಾಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಗ್ರಾಹರಿಗೆ 50 ರಿಂದ 60 ರೂ.ಗೆ ಮಾರಾಟವಾಗುತ್ತಿದೆ. ಅಲ್ಲದೇ ಕೊಬ್ಬರಿ ಸಹ ಉತ್ತಮ ಬೆಲೆಯನ್ನೇ ಕಾಣುತ್ತಿದೆ.
ಆದರೆ, ಹೊಡೆತ ಬಿದ್ದಿರುವುದು ತೆಂಗಿನಕಾಯಿಗೆ ಮಾತ್ರ. ಕೂಲಿ ಆಳುಗಳ ವೆಚ್ಚ, ಸಾಗಣೆ ವೆಚ್ಚ, ರಸಗೊಬ್ಬರದ ಬೆಲೆ ಎಲ್ಲವೂ ಗಗನಕ್ಕೇರಿರುವ ಈ ಕಾಲದಲ್ಲಿ ಕೆ.ಜಿ.ಗೆ 30 ರೂಪಾಯಿ ಸಿಕ್ಕರೆ ರೈತನಿಗೆ ಕನಿಷ್ಠ ಹೂಡಿಕೆ ವೆಚ್ಚವೂ ಕೈಗೆ ಸಿಗುವುದಿಲ್ಲ. ಇದರಿಂದಾಗಿ ತೆಂಗು ಬೆಳೆಗಾರರು ತೀವ್ರ ಹತಾಷೆಗೆ ಒಳಗಾಗಿದ್ದಾರೆ.
ಆಗಬೇಕಿರುವುದೇನು ?
* ಸರಕಾರ ತಕ್ಷಣವೇ ಮಧ್ಯಪ್ರವೇಶಿಸಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೇರವಾಗಿ ರೈತರಿಂದ ತೆಂಗು ಖರೀದಿಸಬೇಕು.
* ತೆಂಗಿನಪುಡಿ ಮತ್ತು ತೆಂಗಿನ ಇತರ ಉತ್ಪನ್ನಗಳ ರಫ್ತಿಗೆ ಇರುವ ಅಡೆತಡೆಗಳನ್ನು ನಿವಾರಿಸಬೇಕು.
* ಮಧ್ಯವರ್ತಿಗಳ ಹಾವಳಿ ತಪ್ಪಿಸಲು ರೈತರಿಂದ ಗ್ರಾಹಕರಿಗೆ ನೇರವಾಗಿ ತಲುಪಿಸುವ ‘ರೈತ ಸಂತೆ’ ಮಾದರಿಯ ವ್ಯವಸ್ಥೆಗೆ ಬಲ ನೀಡಬೇಕು.
“ಬೆಳೆಗಾರರಿಗೆ ಯೋಗ್ಯ ಬೆಲೆಯೂ ಸಿಗದೆ, ಗ್ರಾಹಕನಿಗೂ ಕೈಗೆಟುಕುವ ದರದಲ್ಲಿ ಸಿಗದೆ ಇರುವ ಈ ಮಾರುಕಟ್ಟೆ ವ್ಯವಸ್ಥೆಯನ್ನು ಸರಿಪಡಿಸದಿದ್ದರೆ, ಮುಂದಿನ ದಿನಗಳಲ್ಲಿ ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಆದ್ದರಿಂದ ಸರಕಾರ ಮಧ್ಯಪ್ರವೇಶಿಸಿ ಬೆಂಬಲ ಬೆಲೆಯಲ್ಲಿ ತೆಂಗಿನಕಾಯಿ ಖರೀದಿಸುವ ವ್ಯವಸ್ಥೆ ಆಗಬೇಕು.”