newsics.com/ನ್ಯೂಸಿಕ್ಸ್
ಭೋಪಾಲ್: ಕೊಲೆಯಾಗಿದ್ದಾಳೆ ಎಂದು ಭಾವಿಸಲಾಗಿದ್ದ ಯುವತಿಯೊಬ್ಬಳು ಬರೋಬ್ಬರಿ 22 ದಿನಗಳ ನಂತರ ಜೀವಂತವಾಗಿ ಪತ್ತೆಯಾಗಿದ್ದಾಳೆರುವ ಘಟನೆ ಮಧ್ಯಪ್ರದೇಶದ ಬುರ್ಹಾನ್ಪುರ ಜಿಲ್ಲೆಯಲ್ಲಿ ನಡೆದಿದೆ.
ಈಕೆಯ ಕೊಲೆ ಆರೋಪದ ಮೇಲೆ ಈಕೆಯ ತಂದೆ ಮತ್ತು ಸಹೋದರ ಈಗಾಗಲೇ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಮಹಾರಾಷ್ಟ್ರ ದಲ್ಲಿ ಪತ್ತೆಯಾಗಿದ್ದ ತಲೆಯಿಲ್ಲದ, ಸುಟ್ಟ ದೇಹವು ಈ ಯುವತಿಯದ್ದೇ ಎಂದು ಯಾವುದೇ ಖಚಿತ ಪುರಾವೆಗಳಿಲ್ಲದೆ ತನಿಖಾಧಿಕಾರಿಗಳು ಹೇಗೆ ತೀರ್ಮಾನಕ್ಕೆ ಬಂದರು ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ.
ಶಿವಾನಿ ಎಂಬ ಯುವತಿ ಏಪ್ರಿಲ್ನಲ್ಲಿ ನಾಪತ್ತೆಯಾಗಿದ್ದಳು. ವಾರಗಳ ನಂತರ, ಮಹಾರಾಷ್ಟ್ರದ ಜಲಗಾಂವ್ ಜಾಮೋದ್ನಲ್ಲಿ ಪತ್ತೆಯಾದ ಸುಟ್ಟ ಶವ ಶಿವಾನಿಯದ್ದೇ ಎಂದು ಪೊಲೀಸರು ಪ್ರತಿಪಾದಿಸಿದ ಹಿನ್ನೆಲೆಯಲ್ಲಿ ಆಕೆಯ ತಂದೆ ಬಾಪುರಾವ್ ಮತ್ತು ಸಹೋದರ ಅಜಯ್ ಜೈಲು ಪಾಲಾಗಿದ್ದರು. ಆದರೆ ಈಗ ಶಿವಾನಿ ಜೀವಂತವಾಗಿ ಮರಳಿ ಬಂದಿದ್ದಾಳೆ.
ತನಿಖೆಯ ವೇಳೆ ಅರ್ಜುನ್ ಎಂಬ ಸ್ಥಳೀಯ ಯುವಕನೂ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತು. ಇವರಿಬ್ಬರೂ ಒಟ್ಟಿಗೆ ಹೋಗಿ ಬೇರೆಡೆ ವಾಸಿಸುತ್ತಿದ್ದರು.
ಕೊಲೆ ಪ್ರಕರಣದಲ್ಲಿ ತಂದೆ ಮತ್ತು ಸಹೋದರ ಜೈಲು ಸೇರಿರುವ ವಿಷಯ ತಿಳಿದ ಶಿವಾನಿ, ತಕ್ಷಣ ತನ್ನ ಸಂಬಂಧಿಕರನ್ನು ಸಂಪರ್ಕಿಸಿ ತಾನು ಜೀವಂತವಾಗಿರುವುದನ್ನು ತಿಳಿಸಿದ್ದಾಳೆ. ಪೊಲೀಸರು ಆಕೆಯನ್ನು ಪತ್ತೆಹಚ್ಚಿದಾಗ, ನಾನು ಅರ್ಜುನ್ ಜೊತೆ ಹೋಗಿದ್ದೆ. ನಾವಿಬ್ಬರೂ ಬದುಕಿದ್ದೇವೆ, ನನ್ನ ತಂದೆ-ಸಹೋದರನನ್ನು ಬಿಡುಗಡೆ ಮಾಡಿ,” ಎಂದು ಕೇಳಿಕೊಂಡಿದ್ದಾಳೆ. ಸಂಬಂಧಿಕರ ಸಮ್ಮುಖದಲ್ಲಿ ಹೆಬ್ಬೆರಳ ಗುರುತು ಮತ್ತು ಸರ್ಕಾರದ ಗುರುತಿನ ಚೀಟಿಗಳ ಮೂಲಕ ಆಕೆಯ ಗುರುತನ್ನು ಪೊಲೀಸರು ಪರಿಶೀಲಿಸಿ ಖಚಿತಪಡಿಸಿಕೊಂಡಿದ್ದಾರೆ.