newsics.com | ನ್ಯೂಸಿಕ್ಸ್
ರಾಮನಗರ: ಬಿಡದಿ ಸ್ಮಾರ್ಟ್ ಸಿಟಿ ಟೌನ್ಶಿಪ್ ನಿರ್ಮಾಣದ ವಿಚಾರದಲ್ಲಿ ದಿನದಿಂದ ದಿನಕ್ಕೆ ಪ್ರತಿಭಟನೆಯ ಕಿಚ್ಚು ಜೋರಾಗುತ್ತಿದ್ದು, ಸರ್ಕಾರದ ಜಮೀನು ಒತ್ತುವರಿ ನಿರ್ಧಾರದ ವಿರುದ್ಧ ತಿರುಗಿಬಿದ್ದಿರುವ ರೈತರು, ಇದೀಗ ಸರ್ವೆಗೆ ಬಂದ ಅಧಿಕಾರಿಗಳಿಗೆ ಮಹಿಳೆಯರು ಪೊರಕೆಯಿಂದ ಹೊಡೆದಿದ್ದಾರೆ.
ಬಿಡದಿ ತಾಲೂಕಿನ ಮಂಡಲಹಳ್ಳಿ ಗ್ರಾಮದಲ್ಲಿ ರೈತರ ತೀವ್ರ ವಿರೋಧದ ನಡುವೆಯೂ ಜೆಎಂಸಿ (JMC) ಸರ್ವೆಗೆ ಮುಂದಾದ ಜಿಬಿಡಿಎ (GBDA) ಅಧಿಕಾರಿಗಳಿಗೆ ರೈತ ಮಹಿಳೆಯರು ಪೊರಕೆ ಏಟು ನೀಡಿರುವ ಘಟನೆ ನಡೆದಿದೆ.
ಯಾವುದೇ ಕಾರಣಕ್ಕೂ ಜಮೀನು ಸರ್ವೇ ನಡೆಸದಂತೆ ಮಂಡಲಹಳ್ಳಿ ಗ್ರಾಮದ ರೈತರು ಪಟ್ಟು ಹಿಡಿದಿದ್ದರು. “ಬಲವಂತವಾಗಿ ಸರ್ವೇ ಮಾಡಲು ಮುಂದಾದರೆ ಪೊರಕೆಯಿಂದ ಹೊಡೆಯಬೇಕಾಗುತ್ತದೆ” ಎಂದು ಅಧಿಕಾರಿಗಳಿಗೆ ಮೊದಲೇ ಎಚ್ಚರಿಕೆ ನೀಡಿದ್ದರು. ಆದಾಗ್ಯೂ ಅಧಿಕಾರಿಗಳು ಸರ್ವೆ ಕಾರ್ಯ ಆರಂಭಿಸಲು ಮುಂದಾದಾಗ, ಆಕ್ರೋಶಗೊಂಡ ರೈತ ಮಹಿಳೆಯರು ಪೊಲೀಸರ ಸಮ್ಮುಖದಲ್ಲೇ ಅಧಿಕಾರಿಗಳ ಕಾರನ್ನು ಸುತ್ತುವರಿದು ಪೊರಕೆಯಿಂದ ಹೊಡೆದು ರೌದ್ರಾವತಾರ ತಾಳಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಎಷ್ಟೇ ತಡೆಯಲು ಯತ್ನಿಸಿದರೂ ರೈತರ ಆಕ್ರೋಶದ ಕಟ್ಟೆ ಮುಗಿಸಲು ಸಾಧ್ಯವಾಗಲಿಲ್ಲ.
ಇನ್ನು, ಈ ಘಟನೆ ಬೆನ್ನಲ್ಲೇ ಬಿಡದಿಯ ಮಂಡಲಹಳ್ಳಿಗೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶ್ರೀನಿವಾಸ ಗೌಡ ಅವರು ಭೇಟಿ ನೀಡಿ, ಉದ್ರಿಕ್ತ ರೈತರ ಜೊತೆ ಮಾತುಕತೆ ನಡೆಸಿದ್ದಾರೆ. ಎಎಸ್ಪಿ ರಾಮಚಂದ್ರಯ್ಯ, ಡಿವೈಎಸ್ಪಿ ಗಿರೀಶ್ ಹಾಗೂ ಶ್ರೀನಿವಾಸ್ ಅವರಿಂದ ಘಟನೆಯ ಸಂಪೂರ್ಣ ಮಾಹಿತಿ ಪಡೆದಿರುವ ಎಸ್ಪಿ, ಸದ್ಯ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.
ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು. ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವರ ಮೇಲೆ ಹಲ್ಲೆ ನಡೆಸಿದರೆ ಪೊಲೀಸರು ಸುಮ್ಮನೆ ಕೂರುವುದಿಲ್ಲ. ನಿಮ್ಮ ಸಮಸ್ಯೆ ಏನೇ ಇದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ” ಎಂದು ಎಸ್ಪಿ ಶ್ರೀನಿವಾಸ ಗೌಡ ರೈತರಿಗೆ ಮನವಿ ಮಾಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
Pocso Case ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮೀಜಿಗೆ ಬಿಗ್ ರಿಲೀಫ್