newsics.com| ನ್ಯೂಸಿಕ್ಸ್
ರಾಜ್ಯದಲ್ಲಿ ಸದ್ಯ ಗೃಹಜ್ಯೋತಿ ನಕಲಿ ಫಲಾನುಭವಿಗಳ ಪತ್ತೆಗೆ ರಾಜ್ಯ ಸರ್ಕಾರ ಗಂಭೀರ ಕ್ರಮ ಕೈಗೊಂಡಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ನಕಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಪತ್ತೆಗೆ ಡಿ.ಕೆ ಶಿವಕುಮಾರ್ ಮುಂದಾಗಿದ್ದಾರೆ.
ಇಂದಿನಿಂದ ಗೃಹ ಜ್ಯೋತಿ ಅನರ್ಹ ಫಲಾನುಭವಿಗಳ ಪತ್ತೆ ಕಾರ್ಯ ರಾಜ್ಯದಲ್ಲಿ ಅಧಿಕೃತ ಚಾಲನೆ ಪಡೆದುಕೊಂಡ ಬೆನ್ನಲ್ಲೇ, ಎಸ್ಕಾಂನಿಂದ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕರೆಂಟ್ ಬಿಲ್ ನೀಡಲು ಎಸ್ಕಾಂ ಸಿಬ್ಬಂದಿ ಮನೆ ಬಾಗಿಲಿಗೆ ಬರುತ್ತಿಲ್ಲ. ಮೀಟರ್ ರೀಡರ್ ಪರಿಶೀಲನೆ ಮಾಡುವ ಸಿಬ್ಬಂದಿಗಳು ಗೃಹಜ್ಯೋತಿ ಅನರ್ಹ ಫಲಾನುಭವಿಗಳ ಪತ್ತೆ ಕಾರ್ಯದ ಡ್ಯೂಟಿಗೆ ನಿಯೋಜನೆಗೊಂಡಿರುವ ಹಿನ್ನೆಲೆಯಲ್ಲಿ, ಜುಲೈ ತಿಂಗಳ ಕರೆಂಟ್ ಬಿಲ್ ಮನೆ ಬಾಗಿಲಿಗೆ ಬರುವುದಿಲ್ಲ. ಇದಕ್ಕಾಗಿ ಎಸ್ಕಾಂ ಇಲಾಖೆ ಮಾಸ್ಟರ್ ಪ್ಲಾನ್ ಮಾಡಿದ್ದು, ಗ್ರಾಹಕರ ನೊಂದಾಯಿತ ಮೊಬೈಲ್ ನಂಬರ್ಗೆ ಎಸ್ಎಂಎಸ್ ಮೂಲಕ ಜುಲೈ ತಿಂಗಳ ಕರೆಂಟ್ ಬಿಲ್ ಕಳುಹಿಸಲಿದ್ದಾರೆ.
ಪ್ರತಿ ಮನೆಯ ಮೂರು ತಿಂಗಳ ಕರೆಂಟ್ ಬಳಕೆಯನ್ನು ಗಮನದಲ್ಲಿಟ್ಟುಕೊಂಡು, ಸರಾಸರಿ ಕರೆಂಟ್ ಬಿಲ್ನ್ನು ರಾಜ್ಯದ ಜನತೆಗೆ ನೀಡಲು ಎಸ್ಕಾಂ ನಿರ್ಧರಿಸಿದೆ. ಒಂದು ವೇಳೆ ಸರಾಸರಿ ಕರೆಂಟ್ ಬಿಲ್ನಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಆಗಸ್ಟ್ ತಿಂಗಳ ಬಿಲ್ನೊಂದಿಗೆ ಆ ಮೊತ್ತವನ್ನು ಹೊಂದಾಣಿಕೆ ಮಾಡಿಕೊಡುವುದಾಗಿ ಬೆಸ್ಕಾಂ ಮಾಹಿತಿ ನೀಡಿದೆ.
ಆದರೆ ಎಚ್ಟಿ ಗ್ರಾಹಕರು, 40 HP ಹಾಗೂ ಅದಕ್ಕಿಂತ ಹೆಚ್ಚಿನ ಲೋಡ್ ಹೊಂದಿರುವ ಎಲ್ಟಿ ಗ್ರಾಹಕರು, ಸೋಲಾರ್ ರೂಫ್ಟಾಪ್ ಗ್ರಾಹಕರು ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕ ಹೊಂದಿರುವವರಿಗೆ ಎಂದಿನಂತೆ ನೈಜ ಮೀಟರ್ ರೀಡಿಂಗ್ ಆಧಾರದ ಮೇಲೆಯೇ ಬಿಲ್ ನೀಡಲಾಗುತ್ತದೆ ಎಂದು ಇಂಧನ ಇಲಾಖೆ ತಿಳಿಸಿದೆ.
ಬೆಸ್ಕಾಂ ಸಿಬ್ಬಂದಿ ಹಾಗೂ ಮೀಟರ್ ರೀಡರ್ಗಳ ಪರಿಶೀಲನಾ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಬೇಕು. ಈ ಸಂದರ್ಭದಲ್ಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್, ಪಡಿತರ ಚೀಟಿ, ಜಾತಿ ಪ್ರಮಾಣ ಪತ್ರ ತೋರಿಸಬೇಕಾಗುತ್ತದೆ.