newsics.com/ನ್ಯೂಸಿಕ್ಸ್
ಡಿಕೆ ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ, ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿದ್ದ ಸಿದ್ದರಾಮಯ್ಯ ಅವರ ನಾಮಫಲಕವನ್ನು ತೆಗೆದು ಡಿಕೆ ಶಿವಕುಮಾರ್ ಅವರ ಹೊಸ ನಾಮಫಲಕವನ್ನು ಅಳವಡಿಸಲಾಯಿತು.
ರಾಜ್ಯ ರಾಜಕೀಯ ಅತ್ಯಂತ ಮಹತ್ವದ ಕ್ಷಣಕ್ಕೆ ಸಾಕ್ಷಿಯಾಗಿದೆ. ಲೋಕಭವನದಲ್ಲಿ ಮಹೂರ್ತದಂತೆ ನಿಗದಿಯಾಗಿದ್ದ ಪ್ರಮಾಣವಚನ ಕಾರ್ಯಕ್ರಮದಲ್ಲಿ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಂತೆ ವಿಧಾನಸೌಧದ ನಾಮಫಲಕಗಳಲ್ಲೂ ಬದಲಾವಣೆಯಾಗಿದೆ.
ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ, ಡಿಕೆ ಶಿವಕುಮಾರ್ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುವವರೆಗೂ ಹಂಗಾಮಿ ಸಿಎಂ ಆಗಿದ್ದರು. ಇದರಿಂದಾಗಿ ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿ ಅವರ ಹೆಸರೇ ರಾರಾಜಿಸುತ್ತಿತ್ತು.
ಆದರೆ, ಬುಧವಾರ ಹೊಸ ಸಿಎಂ ಆಗಿ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯ ಬಾಗಿಲಲಲ್ಲಿ ಇದ್ದ ನಾಮಫಲಕದಲ್ಲಿ ಸಿದ್ದರಾಮಯ್ಯ ಅವರ ಬೋರ್ಡ್ ಅನ್ನು ತೆಗೆದು ಡಿಕೆ ಶಿವಕುಮಾರ್ ಅವರ ಬೋರ್ಡ್ಅನ್ನು ಸಿಬ್ಬಂದಿ ಹಾಕಿದ್ದಾರೆ.
ಡಿಕೆ ಶಿವಕುಮಾರ್ , ಮುಖ್ಯಮಂತ್ರಿ’ ಎನ್ನುವ ಬೋರ್ಡ್ಅನ್ನು ಹಾಕಿದ ಸಿಬ್ಬಂದಿ ಅದಕ್ಕೆ ಹೂವಿನ ಹಾರ ಹಾಕಿ ಶೃಂಗರಿಸಿದ್ದಾರೆ. ಇನ್ನು ಮುಖ್ಯಮಂತ್ರಿಯ ಕಚೇರಿಯ ಬಾಗಿಲುಗಳನ್ನೂ ಹೂವುಗಳಿಂದ ಶೃಂಗಾರ ಮಾಡಲಾಗಿತ್ತು.
ಡಿಕೆ ಶಿವಕುಮಾರ್ ಲೋಕಭವನದಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡುವ ಮುನ್ನ ಅಜ್ಜಯ್ಯನ ಫೋಟೋಗೆ ನಮಸ್ಕರಿಸಿ ಬಳಿಕ ಸಂವಿಧಾನದ ಪುಸ್ತಕವನ್ನು ಕೈಯಲ್ಲಿ ಹಿಡಿದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.