newsics.com/ನ್ಯೂಸಿಕ್ಸ್
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಬಾಲಿವುಡ್ ನಟಿ ಜಾನ್ವಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ತೆಲುಗು ಚಿತ್ರ ‘ಪೆದ್ದಿ’ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈ ಕ್ರೀಡಾ ಆಧಾರಿತ ಆ್ಯಕ್ಷನ್ ಡ್ರಾಮಾ ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಸೋಮವಾರ (ಜೂನ್ 1) ಆಂಧ್ರಪ್ರದೇಶದ ವಿಜಯವಾಡದಲ್ಲಿ ಭರ್ಜರಿ ಪ್ರಚಾರ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆದರೆ, ಈ ಈವೆಂಟ್ನಲ್ಲಿ ನಡೆದ ಒಂದು ಅನಿರೀಕ್ಷಿತ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಕಾರ್ಯಕ್ರಮದಲ್ಲಿ ರಾಮ್ ಚರಣ್, ಜಾನ್ವಿ ಕಪೂರ್ ಮತ್ತು ನಿರ್ದೇಶಕ ಬುಚ್ಚಿ ಬಾಬು ಸನಾ ವೇದಿಕೆಯ ಮೇಲಿದ್ದಾಗ, ಅಭಿಮಾನಿಯೊಬ್ಬ ಭದ್ರತಾ ವಲಯವನ್ನು ದಾಟಿ ಒಮ್ಮೆಗೆ ವೇದಿಕೆಯತ್ತ ನುಗ್ಗಿದ್ದಾನೆ. ರಾಮ್ ಚರಣ್ ಅವರಂತೆಯೇ ಹೇರ್ಸ್ಟೈಲ್ ಮಾಡಿಕೊಂಡಿದ್ದ ಈ ಅಭಿಮಾನಿ, ನೇರವಾಗಿ ನಟನ ಬಳಿಗೆ ಓಡಿ ಬಂದಿದ್ದಾನೆ. ಅವನು ವೇದಿಕೆಗೆ ನುಗ್ಗಿದ ರಭಸಕ್ಕೆ ರಾಮ್ ಚರಣ್ ಪಕ್ಕದಲ್ಲೇ ಕುಳಿತಿದ್ದ ಜಾನ್ವಿ ಕಪೂರ್ ಒಂದು ಕ್ಷಣ ತೀವ್ರವಾಗಿ ಬೆಚ್ಚಿಬಿದ್ದಿದ್ದಾರೆ.
ಜಾನ್ವಿ ಕಪೂರ್ ಅವರ ಮುಖದಲ್ಲಿ ಅಸಹಜತೆ ಎದ್ದು ಕಾಣುತ್ತಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಹಾಗೂ ರಾಮ್ ಚರಣ್ ಅವರ ವೈಯಕ್ತಿಕ ಬಾಡಿಗಾರ್ಡ್, ಅಂತಾರಾಷ್ಟ್ರೀಯ ಎಂಎಂಎ ಫೈಟರ್ ಆಗಿರುವ ಕೆವಿನ್ ಕುಂಟ, ಆ ಅಭಿಮಾನಿಯನ್ನು ಹಿಡಿದು ಹಿಂದಕ್ಕೆ ಎಳೆದಿದ್ದಾರೆ. ಈ ವೇಳೆ ವೇದಿಕೆಯ ಮೇಲೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಆದಾಗ್ಯೂ, ಪರಿಸ್ಥಿತಿ ತಿಳಿಯಾದ ನಂತರ ಆ ಅಭಿಮಾನಿಗೆ ರಾಮ್ ಚರಣ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಯಿತು. ಮತ್ತೊಂದು ವಿಡಿಯೋದಲ್ಲಿ, ಆತ ರಾಮ್ ಚರಣ್ ಕಾಲಿಗೆ ಬಿದ್ದು ಕೃತಜ್ಞತೆ ಸಲ್ಲಿಸುತ್ತಿರುವುದು ಕಂಡುಬಂದಿದೆ. ಇಷ್ಟು ದೊಡ್ಡ ಜನಸಂದಣಿಯ ನಡುವೆಯೂ ಪರಿಸ್ಥಿತಿಯನ್ನು ಅತ್ಯಂತ ಜಾಣ್ಮೆಯಿಂದ ನಿಭಾಯಿಸಿದ ಬಾಡಿಗಾರ್ಡ್ ಕೆವಿನ್ ಕುಂಟ ಅವರ ಸಮಯಪ್ರಜ್ಞೆಯನ್ನು ನೆಟ್ಟಿಗರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.
ಡಿಕೆಶಿ ಕುರ್ಚಿಯ ದಿಕ್ಕು ಬದಲಾವಣೆ; CM ಕಚೇರಿಗೆ ಅಜ್ಜಯ್ಯನ ಚಿತ್ರ ಅಳವಡಿಕೆ!