newsics.com/ನ್ಯೂಸಿಕ್ಸ್
ನವದೆಹಲಿ: ಕರ್ನಾಟಕದ 8 ಮಂದಿ ಸೇರಿ 66 ಸಾಧಕರಿಗೆ ರಾಷ್ಟ್ರಪತಿ ಭವನದಲ್ಲಿ 2026 ಸಾಲಿನ ಪದ್ಮ ಪ್ರಶಸ್ತಿಗಳನ್ನು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸುವ ಮುನ್ನ ಪುದುಚೇರಿಯ ಮಾರ್ಷಲ್ ಆರ್ಟ್ಸ್ ಸಾಧಕ ಕೆ.ಪಜನಿವೇಲ್ ಅವರು ಪ್ರಧಾನಿ ಮೋದಿ ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕಿದ ವಿಡಿಯೋ ಇದೀಗ ವೈರಲ್ ಆಗಿದೆ.
ಮೊದಲ ಹಂತದಲ್ಲಿ ಇವತ್ತು 2 ಪದ್ಮವಿಭೂಷಣ, 6 ಪದ್ಮಭೂಷಣ ಹಾಗೂ 58 ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. ದಿವಂಗತ ನಟ ಧರ್ಮೇಂದ್ರಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದ್ದು, ಪತ್ನಿ ಹೇಮಾ ಮಾಲಿನಿ ಸ್ವೀಕರಿಸಿದರು. ಕಲಾ ವಿಭಾಗದಲ್ಲಿ ಶತಾವಧಾನಿ ಆರ್. ಗಣೇಶ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೊಡಲಾಯಿತು. ಮಂಡ್ಯದ ಪುಸ್ತಕ ಪ್ರೇಮಿ ಅಂಕೇಗೌಡ, ಸಮಾಜ ಸೇವೆಯಲ್ಲಿ ಎಸ್ಜಿ ಸುಶೀಲಮ್ಮ ಅವರಿಗೆ ಪದ್ಮಶ್ರೀ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮೋದಿಗೆ ಸಾಷ್ಟಾಂಗ ನಮಸ್ಕಾರ
ಪದ್ಮಪ್ರಶಸ್ತಿ ಸ್ವೀಕರಿಸುವ ಮುನ್ನ ವೇದಿಕೆಯ ಕೆಳಗೆ ಕುಳಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಧಕರು ನಮಸ್ಕರಿಸಿ ತೆರಳುವ ದೃಶ್ಯಗಳು ಪ್ರತಿವರ್ಷವೂ ಸಾಮಾನ್ಯವಾಗಿ ಕಾಣುತ್ತೇವೆ. ಆದರೆ ಸಾಂಪ್ರದಾಯಿಕ ಸಮರ ಕಲೆಗೆ ನೀಡಿದ ಕೊಡುಗೆಗಾಗಿ ಪದ್ಮಶ್ರೀ ಪುರಸ್ಕಾರವನ್ನು ಪಡೆದ ಪುದುಚೇರಿಯ ಸಿಲಂಬಂ ಪ್ರತಿಪಾದಕ ಕೆ.ಪಜನಿವೇಲ್ ಅವರು ಪ್ರಧಾನಿ ಮೋದಿ ಅವರಿಗೆ ಉದ್ದಂಡ ನಮಸ್ಕಾರ ಹಾಕಿದರು.
ತಕ್ಷಣವೇ ಪ್ರಧಾನಿ ಕುಳಿತಲ್ಲಿಂದ ಎದ್ದು ಅವರ ಕೈ ಹಿಡಿದು ಪ್ರತಿ ನಮಸ್ಕರಿಸಿದರು. ಈ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೀಡಾಗಿದೆ. ಕೆಲವರು ಇದು ಪ್ರಧಾನಿಗೆ ಸಲ್ಲಿಸಿದ ಗೌರವ ಎಂದರೆ, ಮತ್ತೆ ಕೆಲವರು ಇದರ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.