newsics.com/ನ್ಯೂಸಿಕ್ಸ್
ರಾಜ್ಯದಲ್ಲಿ ಜನಸಂಖ್ಯೆ ಕುಸಿತವನ್ನು ತಡೆಯುವ ಪ್ರಯತ್ನದ ಭಾಗವಾಗಿ, ಮೂರನೇ ಮಗುವಿನ ಜನನಕ್ಕೆ ₹30,000 ಮತ್ತು ನಾಲ್ಕನೇ ಮಗುವಿಗೆ ₹40,000 ಪ್ರೋತ್ಸಾಹ ಧನ ನೀಡುವುದಾಗಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಶನಿವಾರ ಘೋಷಿಸಿದ್ದಾರೆ.
ಈ ಕುರಿತು ಮಾತನಾಡಿದ ನಾಯ್ಡು, ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಒಂದು ತಿಂಗಳೊಳಗೆ ಹೆಚ್ಚಿನ ವಿವರಗಳನ್ನು ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ..
‘ರಾಜ್ಯದಲ್ಲಿ ಜನಸಂಖ್ಯೆ ಇಳಿಯುತ್ತಿರುವುದನ್ನು ತಡೆಯಲು ನಾವು ಒಂದು ನಿರ್ಧಾರ ಮಾಡಿದ್ದೇವೆ. ಮೂರನೇ ಮಗು ಪಡೆದ ದಂಪತಿಗೆ ಕೂಡಲೇ ₹30,000, ನಾಲ್ಕನೇ ನಗುವಿಗೆ ₹40,000 ಪ್ರೋತ್ಸಾಹ ಧನ ನೀಡಲಿದ್ದೇವೆ’ ಎಂದು ಸ್ವರ್ಣ ಆಂಧ್ರ -ಸ್ವಚ್ಛ ಆಂಧ್ರ ಅಭಿಯಾನದ ಸಂದರ್ಭ ಹೇಳಿದ್ದಾರೆ.
ಒಂದೊಮ್ಮೆ, ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಪ್ರತಿಪಾದಿಸಿದ್ದ ಅವರು, ಜನನ ಪ್ರಮಾಣವನ್ನು ಹೆಚ್ಚಿಸಲು ಸಮಾಜವು ಒಟ್ಟಾಗಿ ಕೆಲಸ ಮಾಡುವ ಸಮಯ ಈಗ ಬಂದಿದೆ ಎಂದು ಹೇಳಿದ್ದಾರೆ.
ಎರಡನೇ ಮಗುವಿನ ಜನನಕ್ಕೆ ₹25,000 ಪ್ರೋತ್ಸಾಹ ಧನ ನೀಡುವ ನಾಯ್ಡು ಅವರ ಹಿಂದಿನ ಘೋಷಣೆಯ ಮುಂದುವರಿದ ಭಾಗ ಇದಾಗಿದೆ.
ಎರಡನೇ ಮಗುವನ್ನು ಹೊಂದುವ ದಂಪತಿಗೆ ₹25,000 ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ಸಿಎಂ ನಾಯ್ಡು ಮಾರ್ಚ್ 5 ರಂದು ವಿಧಾನಸಭೆಯಲ್ಲಿ ಘೋಷಿಸಿದ್ದರು.
ಬಳಿಕ, ಮಾತನಾಡಿದ್ದ ಆರೋಗ್ಯ ಸಚಿವ ಸತ್ಯ ಕುಮಾರ್ ಯಾದವ್, ಸರ್ಕಾರವು ಮೂರನೇ ಮಗು ಮತ್ತು ಅದಕ್ಕಿಂತ ಹೆಚ್ಚಿನ ಮಕ್ಕಳನ್ನ ಹೊಂದುವ ದಂಪತಿಗೂ ಪ್ರೋತ್ಸಾಹ ಧನ ವಿಸ್ತರಿಸಲು ನಿರ್ಧರಿಸಿದೆ ಎಂದಿದ್ದರು.
ಕೆಲ ದಂಪತಿ ಒಂದೇ ಒಂದು ಮಗುವನ್ನು ಪಡೆಯುತ್ತಿದ್ದಾರೆ. ಮತ್ತೆ ಕೆಲವರು ಮೊದಲನೇ ಮಗು ಗಂಡಾಗದಿದ್ದರೆ ಮಾತ್ರ ಎರಡನೇ ಮಗುವಿಗೆ ಚಿಂತಿಸುತ್ತಿದ್ದಾರೆ ಎಂದು ನಾಯ್ಡು ಹೇಳಿದ್ದಾರೆ.