ಸರ್ಕಾರಿ ನೌಕರರು ಈಗ ವರ್ಗಾವಣೆ ಸಿದ್ದರಾಗಬೇಕು. ಏಕೆಂದರೆ ಕಳೆದ ವರ್ಷದಂತೆಯೇ ಈ ಬಾರಿ ಕೂಡ ಪ್ರಸಕ್ತ ಸಾಲಿನ ಅಂದರೆ 2026-27ನೇ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಇದೇ (2026ರ) ಏಪ್ರಿಲ್ 13ರಿಂದ ವರ್ಗಾವಣೆ ನಿಯಮ ಜಾರಿಗೆ ಬರಲಿದೆ.
ತಂದೆ, ತಾಯಿ ಮತ್ತಿತರ ಮನೆಯವರ ಹಿರಿಯರ ಅನಾರೋಗ್ಯ, ಮಕ್ಕಳ ವಿದ್ಯಾಭಾಸ ಮತ್ತು ಉದ್ಯೋಗದ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ವರ್ಗಾವಣೆ ಬಯಸುತ್ತಾರೆ. ಇವೆಲ್ಲಕ್ಕೂ ಅನುಕೂಲವಾಗಲಿ ಎನ್ನುವ ಹಿನ್ನೆಲೆಯಲ್ಲಿ ಸರ್ಕಾರ ಶೈಕ್ಷಣಿಕ ವರ್ಷ ಆರಂಭದಲ್ಲಿ ವರ್ಗಾವಣೆ ಪ್ರಕ್ರಿಯೆಯನ್ನು ಶುರು ಮಾಡುತ್ತದೆ. ಈ ಬಾರಿಯೂ ಅದೇ ರೀತಿ ಆಗಿದ್ದು ಇದೀಗ ಸರ್ಕಾರಿ ನೌಕರರು ವರ್ಗಾವಣೆಗೆ ಅರ್ಜಿ ಹಾಕಿಕೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವುದು?
ಆಸಕ್ತ ಮತ್ತು ಅರ್ಹ ನೌಕರರು 2026ರ ಮೇ 31ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಡಳಿತಾತ್ಮಕ ದಕ್ಷತೆ ಮತ್ತು ನೌಕರರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ವರ್ಗಾವಣೆ ನಿಯಮಾವಳಿಗಳನ್ನು ರೂಪಿಸಲಾಗಿದೆ. ಈ ಬಾರಿಯ ವರ್ಗಾವಣೆ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಸರ್ಕಾರಿ ನೌಕರರು ಕಡ್ಡಾಯವಾಗಿ ಮಾಡಬೇಕಾದದ್ದು ಏನು?
ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ನೌಕರರು ತಮ್ಮ ಎಲ್ಲಾ ಸೇವಾ ದಾಖಲೆಗಳನ್ನು ಕಡ್ಡಾಯವಾಗಿ ಇಲಾಖೆಗೆ ನಿಖರವಾಗಿ ನೀಡಬೇಕು. ವೈಯಕ್ತಿಕ ಬೇಡಿಕೆಗಳು ಮಾತ್ರವಲ್ಲದೆ ಇಲಾಖೆಯ ಆಡಳಿತಾತ್ಮಕ ಅಗತ್ಯತೆಗಳನ್ನೂ ಪರಿಗಣಿಸಿ ವರ್ಗಾವಣೆ ಆದೇಶ ಹೊರಡಿಸಲಾಗುತ್ತದೆ. ವರ್ಗಾವಣೆ ನಿಯಮದಲ್ಲಿ ವಿಶೇಷಚೇತನ ನೌಕರರಿಗೆ ವಿನಾಯಿತಿ ಸೇರಿದಂತೆ ಕೆಲವು ನಿಯಮಗಳನ್ನು ವಿಧಿಸಲಾಗಿದೆ.
ವಿಶೇಷ ವಿನಾಯಿತಿ ಮತ್ತು ಆದ್ಯತೆಗಳು ಎಂದರೆ ಏನು?
ವರ್ಗಾವಣೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮತ್ತು ಕಟ್ಟುನಿಟ್ಟಿನಿಂದ ಮಾಡಲಾಗುತ್ತದೆ ಎನ್ನುವುದರ ನಡುವೆ ಕೆಲವು ವಿಶೇಷ ಪ್ರಕರಣಗಳಲ್ಲಿ ಮಾನವೀಯ ದ್ರಷ್ಟಿಯಿಂದ ವಿನಾಯಿತಿ ನೀಡಲಾಗುತ್ತದೆ. ಅಂಥ ಪ್ರಕರಣಗಳೆಂದರೆ…
1 ನೌಕರರು ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದರೆ
2 ಮಹಿಳಾ ನೌಕರರು ಗರ್ಭವತಿಯಾಗಿದ್ದರೆ
3 ಮಕ್ಕಳ ಶಿಕ್ಷಣದಂತಹ ಕಾರಣಗಳಿಗೆ