https://youtube.com/shorts/lXpfR5AMayg?si=7veIYlHbfMC24bIz
Subscribe ನ್ಯೂಸಿಕ್ಸ್ ಕನ್ನಡ
newsics.com
ದೇವಿ ಜಾತ್ರೆ ನಡೆಯಬೇಕಾದ್ರೆ ಐದು ದಿನ ಜನರು ಮನೆ ಖಾಲಿ ಮಾಡುವಂತಹ ಸಂಪ್ರದಾಯ ಧಾರವಾಡ ಜಿಲ್ಲೆಯ ಕಲಘಟಗಿಪಟ್ಟಣದಲ್ಲಿ ನಡೆದಿದೆ. ಹಿಂದೂಗಳು ಮಾತ್ರವಲ್ಲದೆ ಮುಸ್ಲಿಂ, ಕ್ರಿಶ್ಚಿಯನ್ ಸೇರಿ ಸರ್ವ ಧರ್ಮದವರು ಇಲ್ಲಿ ಇಂತಹದೊಂದು ಆಚರಣೆಯನ್ನು ಪಾಲನೆ ಮಾಡ್ತಿದ್ದಾರೆ.
ಕಲಘಟಗಿಯ ಗ್ರಾಮದೇವಿ ಜಾತ್ರೆ ಉತ್ತರ ಕರ್ನಾಟಕದ ಅತಿದೊಡ್ಡ ಜಾತ್ರೆಗಳಲ್ಲಿ ಒಂದು. ರಾಜ್ಯ ಮತ್ತು ಹೊರರಾಜ್ಯಗಳಿಂದ ಲಕ್ಷಾಂತರ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ ಮತ್ತು ಜಾತ್ರೆಯ ವೈಭವಕ್ಕೆ ಸಾಕ್ಷಿಯಾಗುತ್ತಾರೆ. ಮೂರು ವರ್ಷಗಳಿಗೊಮ್ಮೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಗ್ರಾಮದೇವಿಯ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತೆ. ಈ ಬಾರಿ ಇದೇ ಫೆಬ್ರವರಿ 25ರಿಂದ ಜಾತ್ರೆ ಆರಂಭವಾಗಲಿದೆ. ಜಾತ್ರೆ ಹಿನ್ನೆಲೆ ಕಲಘಟಗಿ ಸೇರಿದಂತೆ ಸುತ್ತಲಿನ ಐದು ಹಳ್ಳಿಗಳ ಜನರು ವಿಶಿಷ್ಟವಾದ ಪದ್ಧತಿಯನ್ನು ಆಚರಿಸುತ್ತಾರೆ. ಸಾವಿರಾರು ಜನರು ಕುಟುಂಬ ಸಮೇತ ತಮ್ಮ ಮನೆಗಳಿಗೆ ಬೀಗ ಹಾಕಿ ಪಟ್ಟಣದಿಂದ ಹೊರ ಹೋಗುತ್ತಾರೆ. ಕಲಘಟಗಿ, ದಾಸ್ತಿಕೊಪ್ಪ ಕಲಕುಂಡಿ, ಬೆಂಡಿಗೇರಿ, ಮಾಚಾಪುರ ಗ್ರಾಮಗಳಲ್ಲಿ ಹೊರವಾರ ಪದ್ಧತಿಯನ್ನು ಆಚರಿಸುತ್ತಾರೆ. ಈ ಐದು ಹಳ್ಳಿಗಳಲ್ಲಿ ಬರುವ ಯುಗಾದಿಯವರೆಗೆ ಮದುವೆ, ನಿಶ್ಚಿತಾರ್ಥ, ನಾಮಕರಣ ಸೇರಿದಂತೆ ಯಾವುದೇ ಶುಭ ಕಾರ್ಯಗಳನ್ನೂ ಮಾಡುವುದಿಲ್ಲ. ಈ ವರ್ಷದ ಹೋಳಿ ಹುಣ್ಣಿಮೆಯಂದು ಬಣ್ಣದೋಕುಳಿಯನ್ನು ಸಹ ಆಚರಿಸುವುದಿಲ್ಲ. ಜನರು ಮೂರು ಮಂಗಳವಾರ, ಎರಡು ಶುಕ್ರವಾರ ಸೇರಿ ಐದು ದಿನಗಳ ಕಾಲ ಮನೆಗಳನ್ನು ಖಾಲಿ ಮಾಡುತ್ತಾರೆ. ಬೆಳಿಗ್ಗೆ 10ರಿಂದ ಸಂಜೆ 5 ರವರೆಗೆ ಮನೆಯಿಂದ ದೂರವಿರುತ್ತಾರೆ. ಜಾತ್ರೆಗೆ ಮೊದಲು ಐದು ವಾರಗಳ ಆಚರಣೆ ನಡೆಯುತ್ತೆ.
ಇನ್ನು ಮನೆ ಬಿಟ್ಟು ತೆರಳುವ ಜನರು ಉದ್ಯಾನ, ಗದ್ದೆಗಳಲ್ಲಿ ಮತ್ತು ಪಟ್ಟಣದ ಹೊರಗಿನ ಮರಗಳ ಕೆಳಗೆ ದಿನ ಕಳೆಯುತ್ತಾರೆ. ಆಹಾರದ ಬುತ್ತಿಗಳನ್ನು ಕಟ್ಟಿಕೊಂಡು ಹೋಗಿ ಒಟ್ಟಾಗಿ ಊಟ ಮಾಡುತ್ತಾರೆ. ಈ ಐದು ದಿನ ಅಂಗಡಿ- ಮುಂಗಟ್ಟು ಮುಚ್ಚಿರುತ್ತೆ. ವ್ಯಾಪಾರ ವಹಿವಾಟುಗಳು ಸ್ಥಗಿತವಾಗುತ್ತವೆ. ಗ್ರಾಮದೇವಿ ಈ ಸಂದರ್ಭದಲ್ಲಿ ಊರಲ್ಲಿ ಸಂಚರಿಸುತ್ತಾಳೆ. ಅವಳು ದುಷ್ಟ ಶಕ್ತಿಗಳನ್ನು ಕೊಲ್ಲುತ್ತಾಳೆ ಎಂಬುದು ಜನರ ನಂಬಿಕೆ. ಹೊರವಾರ ಆಚರಣೆ ಮಾಡೋ ದಿನದಲ್ಲಿ ಮುಂಜಾನೆ ಹತ್ತು ಗಂಟೆಗೆ ಮನೆಯ ಹೊರಗಡೆ ಒಂದು ಚೊಂಬು ನೀರು ತುಂಬಿ ಇಟ್ಟು ಬರೋ ಜನರು, ಸಂಜೆ ಮನೆಗೆ ಹೋಗಿ ನೀರನ್ನು ಪೂಜೆ ಮಾಡಿ ಮನೆಯೊಳಗೆ ಇಡ್ತಾರೆ. ಜಾತ್ರೆ ಸಮಯದಲ್ಲಿ ಒಟ್ಟು ಐದು ದಿನಗಳ ಕಾಲ ಇಂತಹದೊಂದು ಸಂಪ್ರದಾಯವನ್ನು ನೂರಾರು ವರ್ಷಗಳಿಂದ ಆಚರಣೆ ಮಾಡಿಕೊಂಡು ಬರಲಾಗ್ತಿದೆ. ಹೊರವಾರದ ದಿನ ಮನೆಯಲ್ಲಿದ್ದರೆ ಕೆಡಕಾಗುತ್ತೆ ಅನ್ನೋ ನಂಬಿಕೆ ಜನರಲ್ಲಿದ್ದು, ಹೀಗಾಗಿ ಎಲ್ಲಾ ಧರ್ಮೀಯರು ಇಂತಹದೊಂದು ಆಚರಣೆಯನ್ನು ಕಟ್ಟುನಿಟ್ಟಾಗಿ ಮಾಡುತ್ತಾರೆ.
ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣವಚನ ಸ್ವೀಕಾರ