https://youtube.com/shorts/11hvM0bsJ2E?si=Q5TtqzkdIZKrnxiz
Subscribe ನ್ಯೂಸಿಕ್ಸ್ ಕನ್ನಡ
newsics.com
ಆಟವಾಡುತ್ತಿದ್ದ 1ನೇ ತರಗತಿ ವಿದ್ಯಾರ್ಥಿನಿಯ ಕೈ ಬೆರಳುಗಳು ಕಬ್ಬಿಣದ ಬಾಗಿಲಿಗೆ ಸಿಲುಕಿ ತುಂಡಾಗಿ, ಗಂಭೀರ ಗಾಯಗೊಂಡರೂ ಆಸ್ಪತ್ರೆಗೆ ಸಾಗಿಸದೆ ನಿರ್ಲಕ್ಷ್ಯ ತೋರಿದ ಶಿಕ್ಷಕರು, ತುಂಡಾದ ಬೆರಳುಗಳನ್ನು ಕಸಕ್ಕೆ ಎಸೆದಿರುವ ಘಟನೆ ತುಮಕೂರು ತಾಲೂಕಿನ ಗೂಳೂರು ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಸೋಮವಾರ ಮಧ್ಯಾಹ್ನ ಸುಮಾರು 1.40ರ ವೇಳೆಗೆ, ಶಾಲೆಯಲ್ಲಿ ಮಕ್ಕಳನ್ನು ಮಧ್ಯಾಹ್ನದ ಊಟಕ್ಕೆ ಬಿಡಲಾಗಿತ್ತು. ಈ ಸಂದರ್ಭ ವಿದ್ಯಾರ್ಥಿನಿ ಚಿನ್ಮಯಿ ದೇವಿ ಶಾಲೆಯ ಕಬ್ಬಿಣದ ಬಾಗಿಲು ಬಳಿ ಕೈ ಇಟ್ಟು ನಿಂತಿದ್ದಾಗ, ಹಿಂದಿನಿಂದ ಯಾರೋ ಬಾಗಿಲನ್ನು ಬಲವಾಗಿ ಮುಚ್ಚಿದ್ದಾರೆ. ಬಾಗಿಲು ಹಾಕಿದ ರಭಸಕ್ಕೆ ಚಿನ್ಮಯಿ ದೇವಿಯ ಕೈಯ ಎರಡು ಬೆರಳುಗಳು ಸಂಪೂರ್ಣವಾಗಿ ತುಂಡಾಗಿ ಬಿದ್ದಿವೆ. ಅಪಘಾತದ ತೀವ್ರತೆಯಿಂದ ವಿದ್ಯಾರ್ಥಿನಿಗೆ ಭಾರೀ ರಕ್ತಸ್ರಾವ ಉಂಟಾಗಿತ್ತು.
ಅಪಘಾತದ ನಂತರವೂ ಶಿಕ್ಷಕರು ವಿದ್ಯಾರ್ಥಿನಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯದೇ, ಶಾಲೆಯಲ್ಲಿಯೇ ಕೇವಲ ಬ್ಯಾಂಡೇಜ್ ಸುತ್ತಿ, ನೀರು ಹಾಕಿ ಅಲ್ಲೇ ಕುಳ್ಳಿರಿಸಿ ನಿರ್ಲಕ್ಷ್ಯ ವಹಿಸಿದ್ದಾರೆ.
ಅಪಘಾತದ ಬಗ್ಗೆ ವಿದ್ಯಾರ್ಥಿನಿಯ ಮೂಲಕವೇ ಪೋಷಕರಿಗೆ ಮಾಹಿತಿ ತಿಳಿಯಿತು. ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಚಿನ್ಮಯಿ ದೇವಿಯ ಪೋಷಕರು ಶಾಲೆಗೆ ಬಂದು ಮಗಳ ಸ್ಥಿತಿ ನೋಡಿ ಬೆಚ್ಚಿಬಿದ್ದು, ಕೂಡಲೇ ಆಕೆಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಜಿಲ್ಲಾಸ್ಪತ್ರೆಯ ವೈದ್ಯರು, ತುಂಡಾದ ಬೆರಳುಗಳು ಇದ್ದರೆ ಜೋಡಿಸಬಹುದು ಎಂದಿದ್ದಾರೆ. ಈ ವೇಳೆ ತುಂಡಾಗಿ ಬಿದ್ದ ಕೈ ಬೆರಳುಗಳನ್ನು ಚಿಕಿತ್ಸೆಗೆ ಸಂರಕ್ಷಿಸುವ ಬದಲು, ಶಿಕ್ಷಕರು ಅದನ್ನು ಕಸಕ್ಕೆ ಎಸೆದಿದ್ದಾರೆ ಎಂದು ತಿಳಿದು ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ, ಶಾಲೆಯ ಮುಖ್ಯ ಶಿಕ್ಷಕ ನಾಗೇಶ್, ಶಿಕ್ಷಕರಾದ ರೇಣುಕಮ್ಮ, ವೆಂಕಟೇಶ್, ಹಾಗೂ ತುಮಕೂರು ತಾಲೂಕು ಬಿಇಓ ಹನುಮಂತಪ್ಪ ಇವರ ವಿರುದ್ಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
https://www.newsics.com/2026/02/14/head-constables-sex-video-with-female-police-officer-leaked/