https://youtube.com/shorts/kv9in5qxZnE?si=PN7byw9veLqq499c
Subscribe ನ್ಯೂಸಿಕ್ಸ್ ಕನ್ನಡ
newsics.com
ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಒಬ್ಬ ಧೈರ್ಯಶಾಲಿ ಯುವಕನ ಮೇಲೆ ನರರಾಕ್ಷಸರ ಗುಂಪೊಂದು ಮೃಗೀಯವಾಗಿ ಹಲ್ಲೆ ನಡೆಸಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಮೂವರು ಮಹಿಳೆಯರ ಮಾನ ಉಳಿಸಲು ಹೋದ 26 ವರ್ಷದ ಸಾರಿಗೆ ಉದ್ಯಮಿ ಮುಖೇಶ್ ಕುಮಾರ್ ಅವರನ್ನು ನಾಲ್ವರು ದುರುಳರು ರಸ್ತೆಯಲ್ಲೇ ರಕ್ತಸಿಕ್ತವಾಗಿ ಬಡಿದು ಪ್ರಾಣಕ್ಕೇ ಸಂಚಕಾರ ತಂದೊಡ್ಡಿದ ಘಟನೆ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ ನಡೆದಿದೆ.
ಘಟನೆಯ ವಿವರ:
ಸಂಗಮ್ ವಿಹಾರ್ ನಿವಾಸಿಯಾದ ಮುಖೇಶ್ ಕುಮಾರ್ ಸಾರಿಗೆ ಉದ್ಯಮ ನಡೆಸುತ್ತಿದ್ದಾರೆ. ಸೋಮವಾರ ಮುಂಜಾನೆ ಸುಮಾರು 5:30ರ ಸಮಯದಲ್ಲಿ ಮದುವೆ ಸಮಾರಂಭವೊಂದನ್ನು ಮುಗಿಸಿಕೊಂಡು ಅವರು ಮನೆಗೆ ಮರಳುತ್ತಿದ್ದರು. ದಾರಿಯಲ್ಲಿ ಚಹಾ ಕುಡಿಯಲೆಂದು ಕಾರನ್ನು ನಿಲ್ಲಿಸಿದಾಗ, ಅಲ್ಲಿ ನಾಲ್ವರು ಯುವಕರ ಗುಂಪು ಮೂವರು ಮಹಿಳೆಯರಿಗೆ ಅಸಭ್ಯವಾಗಿ ವರ್ತಿಸುತ್ತಾ, ಚುಡಾಯಿಸುತ್ತಿರುವುದು ಅವರ ಗಮನಕ್ಕೆ ಬಂದಿದೆ. ಅನ್ಯಾಯವನ್ನು ಸಹಿಸದ ಮುಖೇಶ್, ಕೂಡಲೇ ಆ ಮಹಿಳೆಯರ ರಕ್ಷಣೆಗೆ ಧಾವಿಸಿದ್ದಾರೆ.
“ಮಹಿಳೆಯರ ಜೊತೆ ಈ ರೀತಿ ವರ್ತಿಸುವುದು ಸರಿಯಲ್ಲ, ಸುಮ್ಮನೆ ಇಲ್ಲಿಂದ ಹೊರಡಿ” ಎಂದು ಮುಖೇಶ್ ಬುದ್ಧಿ ಹೇಳಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಮುಖೇಶ್ ಅವರ ಧೈರ್ಯವನ್ನು ಸಹಿಸದ ಆ ನಾಲ್ವರು ಕಾಮುಕರು, ಅವರ ಮೇಲೆ ಏಕಾಏಕಿ ಮುಗಿಬಿದ್ದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದರೆ ಎದೆ ನಡುಗುತ್ತದೆ. ಮುಖೇಶ್ ಅವರನ್ನು ಕೆಳಕ್ಕೆ ಬೀಳಿಸಿದ ದುರುಳರು, ಅವರ ಮೇಲೆ ಕಲ್ಲು ಮತ್ತು ಇಟ್ಟಿಗೆಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಮುಖೇಶ್ ಪ್ರಜ್ಞೆ ತಪ್ಪಿ ಬಿದ್ದರೂ ಬಿಡದ ಆ ನರರಾಕ್ಷಸರು, ಅವರ ಬಟ್ಟೆಗಳನ್ನು ಹರಿದು ಹಾಕಿ ಸತತವಾಗಿ ಒದೆಯುತ್ತಾ ವಿಕೃತಿ ಮೆರೆದಿದ್ದಾರೆ. ಅಲ್ಲಿಯೇ ಇದ್ದ ಹಿರಿಯ ವ್ಯಕ್ತಿಯೊಬ್ಬರು ರಕ್ಷಿಸಲು ಬಂದರೂ, ದಾಳಿಕೋರರು ಕಿಂಚಿತ್ತೂ ಕರುಣೆ ತೋರದೆ ಕ್ರೌರ್ಯ ಮೆರೆದಿದ್ದಾರೆ.
ಈ ಘಟನೆ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಮೆಹ್ರೌಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ