ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ಮುಂದುವರೆದಿದೆ. ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿ ಹೆಚ್ಚಾಗುತ್ತಲೇ ಇದೆ. ಇದೀಗ ಮತ್ತೋರ್ವ ಹಿಂದೂ ಯುವಕನ ಹತ್ಯೆಯಾಗಿದೆ.
28 ವರ್ಷದ ಹಿಂದೂ ಆಟೋರಿಕ್ಷಾ ಚಾಲಕ ಸಮೀರ್ ದಾಸ್ ಎಂಬಾತನನ್ನು ಕ್ರೂರವಾಗಿ ಥಳಿಸಿ ಇರಿದು ಕೊಂದ ಘಟನೆ ನಡೆದಿದೆ.
ಚಿತ್ತಗಾಂಗ್ ಬಳಿಯ ಫೆನಿ ಜಿಲ್ಲೆಯ ದಗನ್ ಭುಯಿಯಾನ್ ಎಂಬ ಪ್ರದೇಶದಲ್ಲಿ ಈ ದಾಳಿ ನಡೆದಿದ್ದು, ದೇಶಾದ್ಯಂತ ಆಕ್ರೋಶವನ್ನು ಹುಟ್ಟುಹಾಕಿದೆ.
ಫೆನಿ ಜಿಲ್ಲೆಯ ನಿವಾಸಿ ಸಮೀರ್ ಕುಮಾರ್ ದಾಸ್ ಅವರು ದೀರ್ಘಕಾಲದಿಂದ ಬ್ಯಾಟರಿ ಚಾಲಿತ ಆಟೋರಿಕ್ಷಾ ಓಡಿಸುತ್ತಾ ಜೀವನ ಸಾಗಿಸುತ್ತಿದ್ದರು. ಭಾನುವಾರ ರಾತ್ರಿ ಕೆಲಸಕ್ಕೆ ಹೋದವರು ಮನೆಗೆ ಹಿಂತಿರುಗದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸೋಮವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ದಕ್ಷಿಣ ಕರಿಂಪುರದ ಮುಹುರಿ ಬಾರಿ ಬಳಿ ಸಮೀರ್ ಅವರ ಶವ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ದುಷ್ಕರ್ಮಿಗಳು ಸಮೀರ್ನನ್ನು ಕೊಂದ ಬಳಿಕ ಅವರ ಆಟೋರಿಕ್ಷಾದೊಂದಿಗೆ ಪರಾರಿಯಾಗಿದ್ದಾರೆ.