Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕಾಠ್ಮಂಡು: ಭಾರತದ ಗಡಿಯಲ್ಲಿರುವ ನೇಪಾಳದ ಕೆಲವು ಭಾಗಗಳಲ್ಲಿ ಕೋಮು ಗಲಭೆ ಉಂಟಾಗಿದ್ದು, ಹೆಚ್ಚಿನ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ.
ಧಾರ್ಮಿಕ ವಿಚಾರದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ನೇಪಾಳದ ಪರ್ಸಾ ಜಿಲ್ಲೆಯ ಬಿರ್ಗುಂಜ್ ಪಟ್ಟಣದಲ್ಲಿ ಆರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪಾರ್ಸಾ ಜಿಲ್ಲಾಡಳಿತವು ಬಿಹಾರದ ರಕ್ಸೌಲ್ ಜಿಲ್ಲೆಯ ಬಿರ್ಗುಂಜ್ ನಗರದಲ್ಲಿ ಕರ್ಫ್ಯೂ ಜಾರಿಗೊಳಿಸಿದೆ. ನೇಪಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಭಾರತ ಗಡಿ ಭಾಗದಲ್ಲಿನ ಎಲ್ಲಾ ಸಂಚಾರ, ಸಾಗಾಟವನ್ನು ಸ್ಥಗಿತಗೊಳಿಸಿರುವುದಾಗಿ ವರದಿ ತಿಳಿಸಿದೆ.
ಧನುಷಾ ಜಿಲ್ಲೆಯ ಕಮಲಾ ಪುರಸಭೆಯ ಹೈದರ್ ಅನ್ಸಾರಿ ಮತ್ತು ಅಮಾನತ್ ಅನ್ಸಾರಿ ಎಂದು ಗುರುತಿಸಲಾದ ಇಬ್ಬರು ಮುಸ್ಲಿಂ ಯುವಕರು ಸಾಮಾಜಿಕ ಮಾಧ್ಯಮದಲ್ಲಿ ಹಿಂದೂ ಸಮುದಾಯವನ್ನು ಅವಮಾನಿಸುವ ಹೇಳಿಕೆಗಳನ್ನು ಒಳಗೊಂಡ ವೀಡಿಯೊವನ್ನು ಪೋಸ್ಟ್ ಮಾಡಿದ ನಂತರ ನೇಪಾಳದಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದ ಇಬ್ಬರನ್ನೂ ಸ್ಥಳೀಯರು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಉದ್ವಿಗ್ನತೆ ನಡುವೆಯೇ ಕಮಲಾದ ಸಖುವಾ ಮಾರನ್ ಪ್ರದೇಶದಲ್ಲಿ ಮಸೀದಿಯನ್ನು ಧ್ವಂಸಗೊಳಿಸಿರುವ ಘಟನೆ ದೊಡ್ಡ ಗಲಭೆಗೆ ಎಡೆಮಾಡಿಕೊಟ್ಟಿರುವುದಾಗಿ ನೇಪಾಳದ ಮಾಧ್ಯಮಗಳು ವರದಿ ಮಾಡಿವೆ.
ವೈರಲ್ ವಿಡಿಯೋದ ವಿರುದ್ಧ ಬೀದಿಗಿಳಿದಿದ್ದ ಹಿಂದೂ ಸಮುದಾಯ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಸ್ಥಳೀಯ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದು, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿರುವುದಾಗಿ ವರದಿ ತಿಳಿಸಿದೆ.