Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜೋರ್ಡಾನ್, ಇಥಿಯೋಪಿಯಾ ಮತ್ತು ಓಮನ್ ದೇಶಗಳಿಗೆ ಕೈಗೊಳ್ಳಬೇಕಿದ್ದ ವಿದೇಶ ಪ್ರವಾಸವು ದೆಹಲಿಯಲ್ಲಿ ಕಾಣಿಸಿಕೊಂಡ ದಟ್ಟ ಮಂಜಿನ ಹಿನ್ನೆಲೆಯಲ್ಲಿ ವಿಳಂಬವಾಗಿದೆ.
ಸೋಮವಾರ ಬೆಳಗ್ಗೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೀವ್ರ ಮಂಜು ಆವರಿಸಿದ್ದರಿಂದ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಇದರ ಪರಿಣಾಮವಾಗಿ ಪ್ರಧಾನಿ ಅವರ ಪ್ರಯಾಣ ವೇಳಾಪಟ್ಟಿಯಲ್ಲಿ ಬದಲಾವಣೆ ಆಗಿದೆ. ಪ್ರಧಾನಿ ಮೋದಿ ಬೆಳಗ್ಗೆ 8.30ಕ್ಕೆ ದೆಹಲಿಯಿಂದ ಹೊರಡಬೇಕಾಗಿದ್ದರೂ, ಹವಾಮಾನ ವೈಪರಿತ್ಯದಿಂದಾಗಿ ನಿರ್ಗಮನ ತಡವಾಯಿತು.
ಬೆಳಗಿನ ತಾಪಮಾನವು 12 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ. ಡಿಸೆಂಬರ್ 16-17 ರಂದು ಪ್ರಧಾನಿ ಮೋದಿ ಇಥಿಯೋಪಿಯಾಗೆ ಭೇಟಿ ನೀಡಲಿದ್ದಾರೆ ಮತ್ತು ಅಂತಿಮ ಹಂತದಲ್ಲಿ ಡಿಸೆಂಬರ್ 17-18 ರಂದು ಓಮನ್ಗೆ ಭೇಟಿ ನೀಡಲಿದ್ದಾರೆ. ಡಿಸೆಂಬರ್ 16 ರಂದು ಪ್ರಧಾನಿ ಮೋದಿ ಅವರು ಇಥಿಯೋಪಿಯಾಗೆ ತೆರಳಲಿದ್ದಾರೆ.
ಇದು ಪೂರ್ವ ಆಫ್ರಿಕಾದ ರಾಷ್ಟ್ರಕ್ಕೆ ಪ್ರಧಾನಿ ಮೋದಿ ಅವರ ಮೊದಲ ಭೇಟಿಯಾಗಿದೆ. ಈ ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಅಡಿಸ್ ಅಬಾಬಾದಲ್ಲಿ ಇಥಿಯೋಪಿಯನ್ ಪ್ರಧಾನಿ ಅಬಿ ಅಹ್ಮದ್ ಅಲಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.