Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಭಾರತೀಯ ಮತ್ತು ಬಾಲಿವುಡ್ ಚಿತ್ರೋದ್ಯಮದ ದೊಡ್ಡ ಹೆಸರು, ಹಿರಿಯ ನಟ ಮತ್ತು ಮಾಜಿ ಸಂಸದ ಧರ್ಮೇಂದ್ರ ಇಂದು (ನ. 24) ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಧರ್ಮೇಂದ್ರ, ಒಮ್ಮೆ ಲೋಕಸಭೆಗೂ ಆಯ್ಕೆಯಾಗಿದ್ದರು.
ಹಿಂದಿ ನಟ ಧರ್ಮೇಂದ್ರ ಅವರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಅದರಲ್ಲಿ ಮೂರು ಕನ್ನಡದ ಸೂಪರ್ ಹಿಟ್ ಚಿತ್ರಗಳ ಹಿಂದಿ ರಿಮೇಕ್ ಗಳಿವೆ. ‘ಗಂಧದಗುಡಿ’ಯ ‘ಕರ್ತವ್ಯ’, ‘ತಾಯಿಗೆ ತಕ್ಕ ಮಗ’ನ ‘ಮೈ ಇಂತಕಾಂ ಲೂಂಗಾ’, ಮತ್ತು ‘ಹುಲಿ ಹೆಬ್ಬುಲಿ’ಯ ‘ಗಂಗಾ ತೇರೇ ದೇಶ್ ಮೇ’ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ
ಗಂಧದಗುಡಿ’
ಅಣ್ಣಾವ್ರ ಅಭಿನಯದ ಗಂಧದ ಗುಡಿ ಸಿನಿಮಾದ ಹಿಂದಿ ರಿಮೇಕ್ ನಲ್ಲಿ ಅವರು ಅಭಿನಯಿಸಿದ್ದರು. ಗಂಧದಗುಡಿ ರಿಲೀಸ್ ಆಗಿದ್ದು 1973ರಲ್ಲಿ. ಅದರ ಹಿಂದಿ ರಿಮೇಕ್ ಚಿತ್ರವಾದ ಕರ್ತವ್ಯ ಎಂಬ ಹೆಸರಿನ ಚಿತ್ರದಲ್ಲಿ ಧರ್ಮೇಂದ್ರ ಅವರು ಅಭಿನಯಿಸಿದ್ದರು. ಆ ಚಿತ್ರ ಮೋಹನ್ ಸೆಹಗಲ್ ಎಂಬುವರು ನಿರ್ದೇಶಿಸಿದ್ದರು. ಚಿತ್ರದಲ್ಲಿ ಡಾ. ರಾಜ್ ಕುಮಾರ್ ಪಾತ್ರವನ್ನು ಧರ್ಮೇಂದ್ರ ನಿಭಾಯಿಸಿದ್ದರೆ, ವಿಷ್ಣುವರ್ದನ್ ಅವರ ಪಾತ್ರವನ್ನು ಅಂದಿನ ಹಿಂದಿ ಚಿತ್ರರಂಗದ ಸ್ಟಾರ್ ನಟರಾಗಿದ್ದ ವಿನೋದ್ ಮೆಹ್ರಾ ಅವರು ನಿರ್ವಹಿಸಿದ್ದರು. ನಾಯಕ ನಟಿಯಾಗಿ ರೇಖಾ (ಕನ್ನಡದಲ್ಲಿ ಕಲ್ಪನಾರ ಪಾತ್ರ) ಅಭಿನಯಿಸಿದ್ದರು. ಚಿತ್ರಕ್ಕೆ ಹಿಂದಿಯ ಜನಪ್ರಿಯ ಸಂಗೀತ ನಿರ್ದೇಶಕರಾಗಿದ್ದ ಲಕ್ಷ್ಮೀಕಾಂತ್ ಪ್ಯಾರೇಲಾಲ್ ಅವರು ಸಂಗೀತ ನೀಡಿದ್ದರೆ, ಡಾ. ರಾಜ್ ಕುಮಾರ್ ಅವರ ತಾಯಿಯ ಪಾತ್ರವನ್ನು ನಿರೂಪರಾಯ್ ಅವರು ನಿರ್ವಹಿಸಿದ್ದರು. 1979ರ ಮೇ 11ರಂದು ಬಿಡುಗಡೆಯಾಗಿದ್ದ ಈ ಚಿತ್ರ ಸೂಪರ್ ಹಿಟ್ ಆಗಿತ್ತು.
ಡಾ. ರಾಜ್ ಕುಮಾರ್ ಅಭಿನಯದ ಮತ್ತೊಂದು ಸರ್ವಕಾಲಿಕ ಸೂಪರ್ ಡೂಪರ್ ಹಿಟ್ ಚಿತ್ರಾದ ತಾಯಿಗೆ ತಕ್ಕ ಮಗ ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡಲಾಗಿತ್ತು. ಆ ಚಿತ್ರದ ಹೆಸರು ‘ಮೈ ಇಂತಕಾಂ ಲೂಂಗಾ’. ಚಿತ್ರವು ಒಬ್ಬ ನಿವೃತ್ತ ಬಾಕ್ಸರ್ ತನ್ನ ತಂದೆಯ ಸಾವಿಗೆ ಕಾರಣರಾದರವನ್ನು ಹುಡುಕಿ ಕೊಲ್ಲುವ ಕಥೆಯನ್ನು ಹೊಂದಿದೆ. ಕನ್ನಡದಲ್ಲಿ ಡಾ. ರಾಜ್ – ಪದ್ಮಪ್ರಿಯಾ ಅವರ ಜೋಡಿ. ಹಿಂದಿಯಲ್ಲಿ ಧರ್ಮೇಂದ್ರ – ರೀನಾ ರಾಯ್.
ಚಿತ್ರದ ನಿರ್ದೇಶಕರು ಎನ್. ರಾಮರಾವ್ (ಎನ್.ಟಿ. ರಾಮರಾವ್ ಅಲ್ಲ) ಹಾಗೂ ನಿರ್ಮಾಪಕರು (ವಿ. ನಾಗಿರೆಡ್ಡಿ) ತೆಲುಗಿನವರು. ಅಸಲಿಗೆ, ತಾಯಿಗೆ ತಕ್ಕ ಮಗ ಚಿತ್ರ ಮೊದಲು ರಿಮೇಕ್ ಆಗಿದ್ದು ತೆಲುಗಿಗೆ. ತೆಲುಗು ಭಾಷೆಯಲ್ಲಿ ಅಂದಿನ ಸೂಪರ್ ಸ್ಟಾರ್ ಹಾಗೂ ಆ್ಯಕ್ಷನ್ ಹೀರೋ ಕೃಷ್ಣಂ ರಾಜು ಅವರು ಹೀರೋ ಆಭಿನಯಿಸಿದ್ದರು. ಅಲ್ಲಿ ಆ ಚಿತ್ರ ಸೂಪರ್ ಹಿಟ್ ಆಗಿದ್ದನ್ನು ಗಮನಿಸಿದ ನಾಗಿರೆಡ್ಡಿ ಅವರು ಆ ಚಿತ್ರವನ್ನು ಹಿಂದಿಯಲ್ಲಿ ಮಾಡಿದರು. 1982ರ ಮೇ 21ರಂದು ಬಿಡುಗಡೆಯಾಗಿದ್ದ ಮೈ ಇಂತಕಾಂ ಲೂಂಗಾ ಸಿನಿಮಾದಲ್ಲಿ ಧರ್ಮೇಂದ್ರ ಅವರ ಪುತ್ರ ಸನ್ನಿ ಡಿಯೋಲ್ ಅವರು ಚಿತ್ರ ಪಾತ್ರವೊಂದನ್ನು ನಿರ್ವಹಿಸಿದ್ದರು. ಮುಂದೆ ಅವರು ಬೇತಾಬ್ (1983) ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.
ಇದು 1987ರಲ್ಲಿ ತೆರೆಕಂಡಿದ್ದ ಕನ್ನಡದ ಹುಲಿ ಹೆಬ್ಬುಲಿ ಚಿತ್ರದ ರೀಮೇಕ್. ಶಂಕರ್ ನಾಗ್, ಭವ್ಯಾ, ಟೈಗರ್ ಪ್ರಭಾಕರ್ ಅವರು ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರವನ್ನು ಕನ್ನಡದಲ್ಲಿ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದ ವಿಜಯ್ ಅವರು ನಿರ್ದೇಶಿಸಿದ್ದರು. ಹಿಂದಿಯಲ್ಲೂ ಅವರದ್ದೇ ನಿರ್ದೇಶನ. ಹಿಂದಿ ಅವತರಣಿಕೆಯಲ್ಲಿ ಧರ್ಮೇಂದ್ರ, ಶತ್ರುಘ್ನ ಸಿನ್ಹಾ ಅವರು ಅಭಿನಯಿಸಿದ್ದರು. ಚಿತ್ರದ ನಾಯಕಿಯಾಗಿ ಜಯಪ್ರದ ಅಭಿನಯಿಸಿದ್ದರು. ಆ ಚಿತ್ರ ಅಲ್ಲಿಯೂ ಸೂಪರ್ ಹಿಟ್ ಆಗಿತ್ತು.
ಕರ್ನಾಟಕ ಹಲವಾರು ನಟರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು ಧರ್ಮೇಂದ್ರ. ಸಿನಿಮಾ ಕಾರ್ಯಕ್ರಮಗಳಲ್ಲಿ ಸಿಕ್ಕಾಗ ಡಾ.ರಾಜ್ ಕುಮಾರ್, ವಿಷ್ಣುವರ್ದನ್, ಅಂಬರೀಶ್ ಜೊತೆಗೆ ಅವರು ಹರಟೆ ಹೊಡೆಯುತ್ತಿದ್ದರು. ಅವರ ಜೀವನದಲ್ಲಿ ಬೆಂಗಳೂರು ಬಳಿಯ ರಾಮನಗರದ ಬಳಿ ಶೋಲೆ ಸಿನಿಮಾಕ್ಕಾಗಿ ನಡೆಸಲಾಗಿದ್ದ ಶೂಟಿಂಗ್ ದಿನಗಳನ್ನು ಅವರು ಎಂದಿಗೂ ಮರೆತಿರಲಿಲ್ಲ. ಅಂದಿನ ಬೆಂಗಳೂರಿನ ಹವಾಮಾನ, ಸೌಂದರ್ಯವನ್ನು ಅವರು ತಮ್ಮ ಹಲವಾರು ಸಂದರ್ಶನಗಳಲ್ಲಿ ನೆನಪು ಮಾಡಿಕೊಂಡಿದ್ದರು.
ಭಾರತೀಯ ಚಿತ್ರೋದ್ಯಮದ ಹೆಸರಾಂತ ನಟರಾಗಿದ್ದ ಧರ್ಮೇಂದ್ರ ಅವರು ಇಂದು (ನವೆಂಬರ್ 11) ನಿಧನರಾಗಿದ್ದಾರೆ. ಸಿನಿಮಾರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಧರ್ಮೇಂದ್ರ ಅವರು ರಾಜಕೀಯದಲ್ಲೂ ಸಕ್ರಿಯರಾಗಿದ್ದು, ಒಂದು ಅವಧಿಗೆ ಲೋಕಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ನಂತರದ ದಿನಗಳಲ್ಲಿ ಅವರು ತಮ್ಮ ಪತ್ನಿ ಹೇಮಾ ಮಾಲಿನಿ ಅವರು ಮೂರು ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದರು.