Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕೊರಾಪುಟ್ (ಒಡಿಶಾ): ಇಲ್ಲಿನ ಹಳ್ಳಿಯೊಂದರಲ್ಲಿ ಬುಡಕಟ್ಟು ಜನಾಂಗದವರು ಸ್ಥಳೀಯ ದೇವತೆಗೆ ಶಾಂತಿ ಪೂಜೆ ಮಾಡಿ, ಊರಿಗೆ ಹಿಡಿದಿರುವ ಶಾಪ ತೊಳೆಯಲು ಹೊರಟಿದ್ದಾರೆ.
ತಮ್ಮ ಗ್ರಾಮದ ಒಳಗೆ ಯಾರೂ ಬರದಂತೆ, ಗ್ರಾಮದಿಂದ ಯಾರೂ ಹೊರಹೋಗದಂತೆ ಬ್ಯಾರಿಕೇಡ್ ಅಳವಡಿಸಿರುವ ಗ್ರಾಮಸ್ಥರು, ಊರಿನ ಹೊರಗೆ ಕಾವಲು ಕಾಯುತ್ತಿದ್ದಾರೆ.
ಇಂದಿನ ಆಧುನಿಕ ಕಾಲದಲ್ಲೂ ಈ ಹಳ್ಳಿಯೂ ಸೇರಿ ಹಲವು ಹಳ್ಳಿಗಳಲ್ಲಿ, ಬುಡಕಟ್ಟು ಜನಾಂಗಗಳಲ್ಲಿ ಮೂಢನಂಬಿಕೆಗಳು ಆಚರಣೆಯಲ್ಲಿವೆ. ಅದು ಅವರವರ ನಂಬಿಕೆ.

ಒಡಿಶಾದ ಕೊರಾಪುಟ್ ಜಿಲ್ಲೆಯ ನಾರಾಯಣಪಟ್ಟಣ ಬ್ಲಾಕ್ನಲ್ಲಿರುವ ಗದಬ ಗುಡ ಎಂಬ ಬುಡಕಟ್ಟು ಗ್ರಾಮದಲ್ಲಿ ಗ್ರಾಮಸ್ಥರು ತಮ್ಮನ್ನು ಹೊರಗಿನ ಪ್ರಪಂಚದಿಂದ ಸಂಪೂರ್ಣವಾಗಿ ದೂರವಿಟ್ಟುಕೊಂಡಿದ್ದಾರೆ. ಯಾರಿಗೂ ಗ್ರಾಮದ ಒಳಗೆ ಹೋಗಲು ಅಥವಾ ಗ್ರಾಮದಿಂದ ಯಾರಿಗೂ ಹೊರ ಹೋಗಲು ಅವಕಾಶವಿಲ್ಲ.
ಸ್ಥಳೀಯ ದೇವತೆ ಗ್ರಾಮದ ಮೇಲೆ ಮುನಿಸಿಕೊಂಡಿದ್ದಾಳೆ. ಕಳೆದ ಎರಡು ವರ್ಷಗಳಿಂದ ಗ್ರಾಮದಲ್ಲಿ ಸಂಭವಿಸುತ್ತಿರುವ ಸರಣಿ ಅಕಾಲಿಕ ಸಾವುಗಳು, ಹೆಚ್ಚಾಗಿ ಯುವಕರು ರಸ್ತೆ ಅಪಘಾತ ಅಥವಾ ಮರ ಬಿದ್ದು ಸಾವನ್ನಪ್ಪುತ್ತಿರುವುದಕ್ಕೆ ದೇವಿ ಮುನಿಸಿಕೊಂಡಿರುವುದೇ ಕಾರಣ. ಪೂಜೆ ಹಾಗೂ ಕೆಲವೊಂದು ಆಚರಣೆಗಳ ಮೂಲಕ ಮಾತ್ರ ದೇವಿಯ ಕೋಪವನ್ನು ತಣಿಸಬಹುದು. ಕೆಲವೊಂದು ಆಚರಣೆಗಳನ್ನು ನಡೆಸಲು, ಗ್ರಾಮಕ್ಕೆ ಯಾವುದೇ ಹೊರಗಿನ ಸಂಪರ್ಕ ಇರಬಾರದು. ಎಲ್ಲವೂ ಸಾಮಾನ್ಯವಾಗುವವರೆಗೆ ಎಲ್ಲ ಜನರು ಗ್ರಾಮದಲ್ಲಿಯೇ ಇರಬೇಕು ಎಂದು ಗ್ರಾಮಸ್ಥ ಪ್ರಲ್ಹಾದ್ ಸಿರ್ಕಾ ಆದೇಶ ಹೊರಡಿಸಿದ್ದಾರೆ.
ಹೀಗಾಗಿ ಊರಿಗೆ ಮುಖ್ಯ ಸಂಪರ್ಕ ಕಲ್ಪಿಸುವ ಗದಬ ಗುಡ ಪ್ರವೇಶದ್ವಾರವನ್ನು ಮುಚ್ಚಲಾಗಿದೆ. ಬಿದಿರಿನಿಂದ ರಚಿಸಿದ ತಡೆಗೋಡೆ ಹಾಕಲಾಗಿದೆ. ಪ್ರತಿ ಮನೆಯವರು ಶುದ್ಧೀಕರಣದ ಭಾಗವಾಗಿ, ಮನೆಯನ್ನು ಸ್ವಚ್ಛಗೊಳಿಸಿ ಬಾಗಿಲಿಗೆ ಮಾವಿನ ತೋರಣಗಳನ್ನು ಕಟ್ಟಿದ್ದಾರೆ.
ಅಷ್ಟೇ ಅಲ್ಲ, ಗ್ರಾಮಸ್ಥರೆಲ್ಲರೂ ಹತ್ತಿರದ ನದಿಯಲ್ಲಿ ಹಲವು ಬಾರಿ ಸ್ನಾನ ಮಾಡಿ, ಪುರೋಹಿತರ ಮೇಲ್ವಿಚಾರಣೆಯಲ್ಲಿ ಶುದ್ಧಾಚಾರದಿಂದ ಪೂಜೆ ಸಲ್ಲಿಸುತ್ತಿದ್ದಾರೆ. ಮಹಿಳೆಯರು ದಿನಿವಿಡೀ ದೇವಿಯನ್ನು ಶಾಂತಗೊಳಿಸಲು ಹಾಡುವುದು ಹಾಗೂ ನೃತ್ಯ ಮಾಡುವುದನ್ನು ಮಾಡುತ್ತಿದ್ದಾರೆ.
ಭಾನುವಾರದಿಂದ ಆಚರಣೆಗಳು ಆರಂಭವಾಗಿದ್ದು, ಮುಂದಿನ ಸೋಮವಾರದಂದು ಇನ್ನೊಂದು ಆಚರಣೆ ನಡೆಯಲಿದೆ. ವಾರಪೂರ್ತಿ, ಪೂಜೆ, ಆಚರಣೆಗಳು ನಡೆಯಲಿದ್ದು, ಅವುಗಳು ಮುಗಿಯುವವರೆಗೆ ಯಾರಿಗೂ ಗ್ರಾಮ ಪ್ರವೇಶಿಸಲು ಅಥವಾ ಗ್ರಾಮದಿಂದ ಹೊರಹೋಗಲು ಅವಕಾಶವಿಲ್ಲ. ದೈನಂದಿನ ಅಗತ್ಯ ವಸ್ತುಗಳನ್ನು ಸಹ ಆಂತರಿಕವಾಗಿ ವಿನಿಮಯ ಮಾಡುವ ವ್ಯವಸ್ಥೆಗಳನ್ನು ಗ್ರಾಮಸ್ಥರು ಮಾಡಿಕೊಂಡಿದ್ದಾರೆ.
ನಾಗರಹೊಳೆ ಮತ್ತು ಬಂಡೀಪುರದಲ್ಲಿ ಸಫಾರಿ ಬಂದ್ – ಹುಲಿ ಸೆರೆ ಹಿಡಿಯಲು ಸಚಿವ ಈಶ್ವರ್ ಖಂಡ್ರೆ ಸೂಚನೆ
ಸಾರ್ವಜನಿಕ ಸ್ಥಳದಲ್ಲಿರುವ ಬೀದಿ ನಾಯಿಗಳನ್ನ ಹಿಡಿದು ಆಶ್ರಯ ತಾಣಗಳಿಗೆ ಬಿಡಿ : ಸುಪ್ರೀಂಕೋರ್ಟ್ ಆದೇಶ
ನಟಿ ರನ್ಯಾ ರಾವ್ ವಿರುದ್ಧ 123 ಕೋಟಿಯ ಗೋಲ್ಡ್ ಸ್ಮಗ್ಲಿಂಗ್ ಸಾಬೀತು : ಚಾರ್ಜ್ ಶೀಟ್ ಸಲ್ಲಿಸಲು DRI ಸಿದ್ಧತೆ