newsics.com
ಕೆಜಿಎಫ್ʼ ಮತ್ತು ʻಓಂʼ ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾದ ಹರೀಶ್ ರಾಯ್ ಅವರ ಚಿಕಿತ್ಸೆಗೆ ನಟ ಧ್ರುವ ಸರ್ಜಾ 11 ಲಕ್ಷ ರೂ. ನೀಡಿದ್ದಾರೆ.
ಥೈರಾಯ್ಡ್ ಕ್ಯಾನ್ಸರ್ನಿಂದ ಬಳಲುತ್ತಿರುವ ಹರೀಶ್ ರಾಯ್ ಅವರ ಚಿಕಿತ್ಸೆ ದುಬಾರಿಯಾಗಿದ್ದು, ಒಂದು ಇಂಜೆಕ್ಷನ್ಗೆ ಸುಮಾರು 3.55 ಲಕ್ಷ ರೂಪಾಯಿಗಳ ವೆಚ್ಚವಾಗಲಿದೆ. ಸಹಾಯಕ್ಕಾಗಿ ಮನವಿ ಮಾಡಿದ ಹರೀಶ್ ರಾಯ್ ಅವರಿಗೆ ಧ್ರುವ ಸರ್ಜಾ ಅವರು ನೆರವಾಗಿದ್ದಾರೆ ಎಂದು ಕಲಾವಿದೆ ಶಶಿಕಲಾ ಅವರು ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಎಲ್ಲರಿಗೂ ನಮಸ್ಕಾರ.. ನಾನು ನಿಮ್ಮ ಕಲಾವಿದೆ ಶಶಿಕಲಾ. ಅಮ್ಮನ ಮಡಿಲು ಟ್ರಸ್ಟ್ ಆಶ್ರಮದಿಂದ. ನಾನೊಂದು ಪುಟ್ಟ ಕಲಾವಿದೆ. ಹರೀಶ್ ರಾಯ್ ಅನಾರೋಗ್ಯದ ಬಗ್ಗೆ ಒಂದು ವಿಡಿಯೋ ಮಾಡುತ್ತಿದ್ದೇನೆ. ಹರೀಶ್ ರಾಯ್, ನಮ್ಮ ಕಲಾವಿದರು. ಇತ್ತೀಚೆಗೆ ಹುಷಾರು ತಪ್ಪಿದ್ದಾರೆ. ಅವರಿಗೆ ಆರೋಗ್ಯ ಸಮಸ್ಯೆ ಇದೆ ಅನ್ನೋದು ನಿಮ್ಮೆಲ್ಲರಿಗೂ ಗೊತ್ತಿದೆ. ಅವರನ್ನ ನೋಡಲು ನಾವು ಅವರ ಮನೆಯ ಬಳಿ ಹೋಗಿದ್ದೆವು. ಆಗ ಅವರು ಆಸ್ಪತ್ರೆಗೆ ಹೋಗಿದ್ದರು. ಆ ಸಮಯದಲ್ಲಿ, ಅವರ ಮನೆಗೆ ಧ್ರವ ಸರ್ಜಾ ಸರ್ ಒಂದು ಚೆಕ್ ಅನ್ನು ಕಳುಹಿಸಿಕೊಟ್ಟರು” ಎಂದಿದ್ದಾರೆ ಶಶಿಕಲಾ.
ಅದು ಚಿಕ್ಕ ಅಮೌಂಟ್ ಅಲ್ಲ, ದೊಡ್ಡ ಅಮೌಂಟ್. 11 ಲಕ್ಷ ರೂ. ಚೆಕ್ ಅನ್ನು ಕಳುಹಿಸಿ ಕೊಟ್ಟಿರುತ್ತಾರೆ ನಮ್ಮ ಧ್ರುವ ಸರ್ಜಾ ಸರ್. ಅದನ್ನು ನೋಡಿ ನನಗೂ ಶಾಕ್ ಆಯ್ತು, ಜತೆಗೆ ಖುಷಿ ಆಯ್ತು. ನಮ್ಮ ಕಲಾವಿದರು ಎಂದು ಹೆಮ್ಮೆ ಅನಿಸಿತು. ಅವರ ಜತೆ ನಾನು ಕೂಡ ಕೆಲಸ ಮಾಡಿದ್ದೇನೆ. ಒಂದು ಹೇಳೋಕೆ ಇಷ್ಟಪಡುತ್ತೇನೆ, ತಂದೆ-ತಾಯಿ ಸತ್ತರೆ ಒಂದು ಕರ್ಪೂರ ಹಚ್ಚುವುದಕ್ಕೆ ಬಾರದೇ ಇರುವಂಥ ಪ್ರಪಂಚ ಇದು. ಅಣ್ಣ ಸತ್ತರೆ ತಮ್ಮ ಬರಲ್ಲ, ತಮ್ಮ ಸತ್ತರೆ ಅಣ್ಣ ಬರಲ್ಲ. ಯಾಕೆಂದರೆ, ನನ್ನ ಆಶ್ರಮದಲ್ಲೇ ನಾನು ದಿನ ಬೆಳಗಾದರೆ ನಾನು ಇದನ್ನು ನೋಡುತ್ತಿರುತ್ತೇನೆ” ಎಂದರು ಶಶಿಕಲಾ.
“ಧ್ರುವ ಸರ್ಜಾ ಅವರ ಬಗ್ಗೆ ತುಂಬಾ ಹೆಮ್ಮೆ ಅಂತೆನಿಸಿತು, ಅಲ್ಲದೇ ಖುಷಿಯಾಯ್ತು. ಯಾಕೆಂದರೆ, ಒಂದು ಜೀವವನ್ನು ಉಳಿಸುವುದಕ್ಕೆ, ಕಾಪಾಡುವುದಕ್ಕೆ, ನಮ್ಮ ಕಲಾವಿದರು ಎನ್ನುವ ಮನಸ್ಥಿತಿಯಲ್ಲಿ ಅವರು 11 ಲಕ್ಷ ರೂಪಾಯಿ ಚೆಕ್ ಅನ್ನು ಕೊಟ್ಟು ಕಳುಹಿಸಿದ್ದಾರೆ. ಅವರ ತಂದೆ-ತಾಯಿ ಮಾಡಿದ ಒಳ್ಳೆ ಕಾರ್ಯ ಇವತ್ತು ಅವರನ್ನ ಕಾಪಾಡುತ್ತಿದೆ. ಧ್ರುವ ಸರ್ಜಾ ಸರ್ ಅವರು ಮಾಡುತ್ತಿರುವ ಇಂತಹ ಒಳ್ಳೆ ಕಾರ್ಯ ಅವರ ಕುಟುಂಬ ಮತ್ತು ಮಕ್ಕಳನ್ನು ಮುಂದಿನ ದಿನಗಳಲ್ಲಿ ಕಾಪಾಡುತ್ತದೆ ಎಂದು ಶಶಿಕಲಾ ಹೇಳಿಕೊಂಡಿದ್ದಾರೆ.