newsics.com
ಯಲ್ಲಾಪುರ: ಪುರೋಹಿತ ರೊಬ್ಬರಿಗೆ ಮದುವೆ ಮಾಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಬಗ್ಗೆ ನಾಲ್ಕು ಜನರ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉತ್ತರ ಪ್ರದೇಶದ ಮಿರ್ಜಾಪುರದ ಪೂಜಾ ಮಿಶ್ರಾ,ಕಳಚೆಯ ಸೂತ್ರೆಮನೆಯ ಲಕ್ಷ್ಮೀನಾರಾಯಣ ಭಟ್ಟ (ಸೊಂದಾ), ಸೋಂದಾದ ನಾಗರಾಜ ಭಟ್ಟ ಬಕ್ಕಳ ಹಾಗೂ ಉತ್ತರ ಪ್ರದೇಶದ ರೇಣುಕಾ ಕೋಟ್ನ ಮಾಲಾ ತ್ರಿಪಾಠಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳಚೆ ಗ್ರಾಮದ ಕರಿಮನೆಯ ಪುರೋಹಿತ ರಾಮಕೃಷ್ಣ ಅನಂತ ಭಟ್ಟ ಎಂಬವರಿಗೆ ಉತ್ತರ ಪ್ರದೇಶದ ಹೆಣ್ಣಿನೊಂದಿಗೆ ಮದುವೆ ಮಾಡಿಸಿಕೊಡುವುದಾಗಿ ಹೇಳಿ ಉತ್ತರ ಪ್ರದೇಶಕ್ಕೆ ಕರೆದೊಯ್ಯಲಾಗಿತ್ತು.
ಅಲ್ಲಿ ಪೂಜಾ ಮಿಶ್ರಾ ಜೊತೆ ನಿಶ್ಚಿತಾರ್ಥವನ್ನೂ ಮಾಡಲಾಗಿತ್ತು. ಇದೇ ವೇಳೆ ಮದುವೆ ಮಾಡಿಸಿಕೊಡುವ ಕರಾರಿನೊಂದಿಗೆ 6 ಲಕ್ಷ ರೂ. ದೂರುದಾರರಿಂದ ಈಹಣವನ್ನು ನಾಲ್ವರು ಪಡೆದಿದ್ದರು.
ಕಳೆದ ಆಗಸ್ಟ್ 16ರಂದು ಕಳಚೆಯ ರಾಮಕೃಷ್ಣ ಭಟ್ಟರ ಮನೆಗೆ ಬಂದ ಮದುಮಗಳಾದ ಪೂಜಾ ಮಿಶ್ರಾ, ಬೆಳಗ್ಗೆ ವಾಕಿಂಗ್ ಹೋಗುವ ನೆಪದಲ್ಲಿ ನಾಪತ್ತೆಯಾಗಿದ್ದಾಳೆ.
ಮದುವೆಯೂ ಇಲ್ಲ, ಕೊಟ್ಟ ಹಣವೂ ಇಲ್ಲ ಎಂದು ವಂಚನೆಗೊಳಗಾದ ರಾಮಕೃಷ್ಣ ಭಟ್ಟ ದೂರು ನೀಡಿದ್ದು, ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.