newsics.com
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ಪ್ರವಾಸಿ ತಾಣದ ಮುಕಟವೊಂದು ಸೇರ್ಪಡೆಯಾಗಲಿದ್ದು, ಸೋಮವಾರ (ಜು. 14) ಐತಿಹಾಸಿಕ ಕ್ಷೇತ್ರ ಸಿಗಂದೂರು ಸೇತುವೆ ಲೋಕಾರ್ಪಣೆಗೊಂಡಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸಿಗಂದೂರು ಸೇತುವೆ ಉದ್ಘಾಟನೆ ಮಾಡಿದ್ದಾರೆ. 60 ವರ್ಷಗಳ ಹೋರಾಟ, ಸಾಗರದ ಜನರ ಬಹುದೊಡ್ಡ ಕನಸು ಈಗ ನನಸಾಗಿದೆ. ಇದರೊಂದಿಗೆ ಇದೀಗ ಶರಾವತಿ ಹಿನ್ನೀರಿನಲ್ಲಿ ದಶಕಗಳಿಂದ ಗ್ರಾಮಸ್ಥರ ವನವಾಸ ಅಂತ್ಯವಾಗಿದ್ದು, ಸೇತುವೆ ಬಳಿಕ ಈ ಭಾಗದ ಚಿತ್ರಣವೇ ಬದಲಾಗಲಿದೆ.
ಸುಮಾರು 423 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಮಹಾಸೇತುವೆ ಕೇವಲ ಕಾಂಕ್ರೀಟ್ ಮತ್ತು ಉಕ್ಕಿನ ಕಟ್ಟಡವಲ್ಲ, ಬದಲಿಗೆ ಈ ಭಾಗದ ಜನರ ಬದುಕಿಗೆ ಹೊಸ ಭರವಸೆಯ ಸೇತುವೆಯಾಗಿದೆ. ಇಷ್ಟು ದಿನಗಳ ಕಾಲ ಲಾಂಚ್ ಒಂದನ್ನೇ ಅವಲಂಬಿಸಿ, ದಿನನಿತ್ಯದ ಓಡಾಟಕ್ಕೆ, ತುರ್ತು ಸಂದರ್ಭಗಳಲ್ಲಿ ಪರದಾಡುತ್ತಿದ್ದ ಹಿನ್ನೀರಿನ ಜನರಿಗೆ ಈ ಸೇತುವೆ ಹೊಸ ಜೀವನಾಡಿಯಾಗಲಿದೆ. ಕರ್ನಾಟಕದ ಅತಿ ಉದ್ದದ ಒಳನಾಡು ಕೇಬಲ್-ಸ್ಟೇಯ್ಡ್ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇದರ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಲೋಡ್ ಪರೀಕ್ಷೆಯಂತಹ ಅಂತಿಮ ಹಂತದ ಪ್ರಕ್ರಿಯೆಗಳು ಯಶಸ್ವಿಯಾಗಿ ನಡೆದಿವೆ.
ಸಿಗಂದೂರು ಸೇತುವೆಯ ವಿಶೇಷತೆಗಳೇನು?
- ಕರ್ನಾಟಕದ ಅತಿ ದೊಡ್ಡ ಒಳನಾಡು ಸೇತುವೆ ಇದಾಗಿದೆ.
- ಈ ಸೇತುವೆಯನ್ನು 423 ಕೋಟಿ ರೂಪಾಯಿಗೂ ಹೆಚ್ಚು ಹಣ ಬಿಡುಗಡೆ ಮಾಡುವ ಮೂಲಕ ನಿರ್ಮಿಸಲಾಗಿದೆ.
- ಶರಾವತಿ ಹಿನ್ನೀರಿನ ಈ ಸೇತುವ 2.1 ಕಿಲೋಮೀಟರ್ ಉದ್ದವಿದೆ. ಈ ಸೇತುವೆ ದೇಶದ ಎರಡನೇ ಅತಿದೊಡ್ಡ ಕೇಬಲ್ ಆಧಾರಿತ ಸೇತುವೆ ಆಗಿದೆ.
- ಶರಾವತಿ ನದಿಯ ಪ್ರವಾಹವನ್ನು ತಡೆದುಕೊಳ್ಳುವ ಸಾಮರ್ಥ್ಯ ಇರುವಂತೆ ಸೇತುವೆಯನ್ನ ವಿನ್ಯಾಸಗೊಳಿಸಲಾಗಿದೆ.
- ಸಿಗಂದೂರು ಸೇತುವೆಯು ಸಾಗರ ಮತ್ತು ಸಿಗಂದೂರು ನಡುವಿನ ಪ್ರಯಾಣದ ಅವಧಿಯನ್ನ ಸುಮಾರು 2 ಗಂಟೆಗಷ್ಟು ಕಡಿಮೆ ಮಾಡಲಿದೆ.
- ಈ ಸೇತುವೆಯು ಕರ್ನಾಟಕದ ಎರಡು ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಕೊಲ್ಲೂರು ಮತ್ತು ಸಿಗಂದೂರು ದೇವಸ್ಥಾನಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ.
- ಈ ಸೇತುವೆಯು ಸಾಗರ ತಾಲೂಕಿನ ಅಂಬಾರಗೋಡ್ಲು ಮತ್ತು ಕಳಸವಳ್ಳಿ (ತುಮರಿ) ಗ್ರಾಮಗಳನ್ನು ಸಂಪರ್ಕಿಸಲಿದೆ.
- ಸೇತುವೆಯು, ಆರು ದಶಕಗಳಿಂದ ಸಂಚಾರದ ಮೂಲಭೂತ ಸೌಕರ್ಯಗಳನ್ನೇ ಕಾಣದೆ ಬದುಕುತ್ತಿದ್ದ ಶರಾವತಿ ಹಿನ್ನೀರು ಭಾಗದ 40ಕ್ಕೂ ಹೆಚ್ಚು ಗ್ರಾಮಗಳ ಜನರಿಗೆ ಇತರ ಊರುಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ.
https://www.newsics.com/2025/07/14/auto-driver-slaps-girl-selling-roses/