newsics.com
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಆದರೆ ಯುವತಿಯೊಬ್ಬಳು ಸತತ 5 ಗಂಟೆ ಕಾಲ ಮಣ್ಣಿನಡಿ ಸಿಲುಕಿ ಸಾವು, ಬದುಕಿನ ಹೋರಾಟ ಮಾಡಿ ಪವಾಡಸದೃಶ್ಯ ರೀತಿಯಲ್ಲಿ ಬದುಕಿ ಬಂದಿದ್ದಾಳೆ.
ಜುಲೈ 1, ಮಂಡಿ ಜಿಲ್ಲೆಯ ಸೆರಾಜ್ ವಿಧಾನಸಭಾ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಅದರಂತೆ ಬಗ್ಸ್ಯಾದ್ ಕಣಿಯ ಶರಣ ಎಂಬ ಕುಗ್ರಾಮದಲ್ಲಿ ದೊಡ್ಡ ಅನಾಹುತವೇ ಸಂಭವಿಸಿಬಿಟ್ಟಿತ್ತು. ಘೋರ ಗಾಳಿ, ಮಳೆಯ ಹೊಡೆತಕ್ಕೆ ಗ್ರಾಮದಲ್ಲಿ ಭೂಕುಸಿತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 22 ವರ್ಷದ ತನುಜಾ ಟಾಕೂರ್ ಎಂಬ ಯುವತಿ ಸಿಲುಕಿಕೊಂಡಿದ್ದಳು..
ಅಂದು ಸೆರಾಜ್ ಕಣಿವೆಯಲ್ಲಿ ನಿರಂತರ ಮಳೆ ಸುರಿಯುತ್ತಿತ್ತು. ಕತ್ತಲೆಯಾಗಿತ್ತು. ಜನ ಕೂಗುವುದು ಕೇಳುತ್ತಿತ್ತು. ಕೆಲವೇ ಸೆಕೆಂಡುಗಳಲ್ಲಿ ನಾನು ನಿಂತಿದ್ದ ಭೂಮಿ ಜಾರಿತು. ನನ್ನ ಸುತ್ತ ಎಲ್ಲವೂ ಕುಸಿದಂತೆ ಅನಿಸಿತು. ಏನು ಆಗ್ತಿದೆ ಅನ್ನುವಷ್ಟರಲ್ಲಿ ನಾನು ಭೂಮಿಯ ಆಳಕ್ಕೆ ಹೋಗಿಬಿಟ್ಟೆ. ನಾನು ಅಲುಗಾಡುತ್ತಿದ್ದೆ. ಆದರೆ ಅದರಿಂದ ಹೊರ ಬರಲು ನನಗೆ ಯಾವುದೇ ಆಯ್ಕೆಗಳಿರಲಿಲ್ಲ. ಬೆಳಕಿಲ್ಲ ಮತ್ತು ಗಾಳಿಯೂ ಬರುತ್ತಿರಲಿಲ್ಲ. ಬರೀ ಕತ್ತಲೆ..
ನನ್ನದು ಬದುಕುಳಿಯಲು ಕರುಳು ಹಿಂಡುವ ಹೋರಾಟ. ಜಾರುವಾಗ ನನ್ನ ಕೈಗಳು ಮೇಲಿದ್ದರಿಂದ ಅನುಕೂಲ ಆಯಿತು. ಮಣ್ಣಿನಡಿ ನುಸುಳಿ ಬರುತ್ತಿದ್ದ ಗಾಳಿ, ನನ್ನ ಉಳಿವಿಗೆ ಸಹಕಾರ ನೀಡಿತು. ಎರಡೂ ಕೈಗಳಿಂದ ಆದಷ್ಟು ಮಣ್ಣನ್ನು ಜಾರಿಸುತ್ತಿದ್ದೆ. ಆಗ ಉಸಿರಾಡಲು ಅವಕಾಶ ಆಗುತ್ತಿತ್ತು. ಮತ್ತೆ ಮತ್ತೆ ಮಣ್ಣು ಜಾರಿದಾಗಲೂ ಮಣ್ಣನ್ನು ಸರಿಸಿ ಉಸಿರಾಟಕ್ಕೆ ಅನುಕೂಲ ಮಾಡಿಕೊಳ್ಳುತ್ತಿದ್ದೆ ಎಂದು ತನುಜಾ ಟಾಕೂರ್ ಹೇಳಿದ್ದಾರೆ.