newsics.com
ಬೆಂಗಳೂರು: ಉಗ್ರ ಕೃತ್ಯಕ್ಕೆ ಜೈಲಿನಿಂದಲೇ ಸಂಚು ರೂಪಿಸಿದ ಗಂಭೀರ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್ ಐಎ)ದ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ, ಎಎಸ್ಐ ಸೇರಿ ಮೂವರನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದಲೇ ಕರ್ನಾಟಕ ಸೇರಿ ರಾಷ್ಟ್ರದಾದ್ಯಂತ ಉಗ್ರ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಕೋಲಾರದ ಐದು ಕಡೆ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ದಳ(ಎನ್ಐಎ)ದ ಅಧಿಕಾರಿಗಳು ಜೈಲಿನ ಮನೋವೈದ್ಯ, ಸಿಎಆರ್ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಪರಪ್ಪನ ಅಗ್ರಹಾರ ಕಾರಾಗೃಹದ ಮನೋವೈದ್ಯ ಡಾ.ನಾಗರಾಜ್, ನಗರ ಸಶಸ್ತ್ರ ಮೀಸಲು ಪಡೆಯ ಎಎಸ್ಐ ಚಾಂದ್ ಪಾಷಾ ಮತ್ತು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಅಹ್ಮದ್ ಎಂಬಾತನ ತಾಯಿ ಅನೀಸ್ ಫಾತೀಮಾ ಎಂಬುವರನ್ನು ಬಂಧಿಸಲಾಗಿದೆ.
ದಾಳಿ ವೇಳೆ ಆರೋಪಿಗಳ ಮನೆಯಲ್ಲಿದ್ದ ಡಿಜಿಟಲ್ ದಾಖಲೆಗಳು, ನಗದು, ಚಿನ್ನಾಭರಣ ಹಾಗೂ ಕೃತ್ಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಎನ್ಐಎ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರಿನ ನಾಗನಾಥಪುರದಲ್ಲಿರುವ ವೈದ್ಯ ನಾಗರಾಜ್ ಮನೆ, ಸಿಎಆರ್ ಉತ್ತರ ವಿಭಾಗದಲ್ಲಿರುವ ಚಾಂದ್ ಪಾಷಾ ವಾಸವಾಗಿರುವ ಸಿಎಆರ್ ಕ್ವಾಟ್ರರ್ಸ್, ಕೋಲಾರದಲ್ಲಿರುವ ಮನೆ, ಆರ್.ಟಿ.ನಗರದಲ್ಲಿರುವ ಜುನೈದ್ ಅಹ್ಮದ್ ಮನೆ, ವೈದ್ಯ ನಾಗರಾಜ್ಗೆ ಸಹಾಯಕಿಯಾಗಿದ್ದ ಪವಿತ್ರಾ ಎಂಬಾಕೆಯ ಮನೆ ಸೇರಿ ಐದು ಕಡೆ ದಾಳಿ ನಡೆಸಲಾಗಿದೆ.
ಆರೋಪಿಗಳ ಪೈಕಿ ಮನೋವೈದ್ಯ ನಾಗರಾಜ್, ಕಳೆದ ನಾಲ್ಕೈದು ವರ್ಷಗಳಿಂದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮನೋವೈದ್ಯನಾಗಿ ಹೆಚ್ಚುವರಿ ಕೆಲಸ ಮಾಡುತ್ತಿದ್ದ. ಈತ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಲಷ್ಕರ್-ಎ-ತೊಯ್ಬಾ ಸಂಘಟನೆಯ ದಕ್ಷಿಣ ಭಾರತದ ಮುಖ್ಯಸ್ಥ ಟಿ.ನಾಸೀರ್, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಅಹ್ಮದ್ ಹಾಗೂ ಇತರೆ ಕೈದಿಗಳಿಗೆ ಮೊಬೈಲ್ಗಳನ್ನು ಕಳ್ಳಸಾಗಣೆ ಮೂಲಕ ನೀಡುತ್ತಿದ್ದ. ಈತನಿಗೆ ಸಹಾಯಕಿ ಪವಿತ್ರಾ ಎಂಬಾಕೆ ಸಹಾಯ ಮಾಡುತ್ತಿದ್ದಳು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಜುನೈದ್ ಅಹ್ಮದ್ನ ತಾಯಿ ಅನೀಸ್ ಫಾತೀಮಾ, ಜೈಲಲ್ಲಿರುವ ಟಿ. ನಾಸೀರ್ ಎಲ್ಇಟಿಗೆ ಸಂಘಟನೆ ಮಾಡಲು ನಿಧಿ ಸಂಗ್ರಹ ಹಾಗೂ ಇತರೆ ವಿಚಾರಗಳ ಬಗ್ಗೆ ನೀಡುತ್ತಿದ್ದ ಮಾಹಿತಿಯನ್ನು ವಿದೇಶದಲ್ಲಿರುವ ತನ್ನ ಮಗನಿಗೆ ನೀಡುತ್ತಿದ್ದರು. ಅದರಂತೆ ಆತ ವಿಧ್ವಂಸಕ ಕೃತ್ಯಗಳಿಗೆ ಸಂಚು ಹಾಗೂ ಸಂಘಟನೆಗಾಗಿ ನಿಧಿ ಸಂಗ್ರಹಿಸುವ ಕೆಲಸದಲ್ಲಿ ಭಾಗಿಯಾಗುತ್ತಿದ್ದ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಮತ್ತೊಬ್ಬ ಶಂಕಿತ ಸಿಎಆರ್ನ ಎಎಸ್ಐ ಚಾಂದ್ ಪಾಷಾ, 2022ರಿಂದ ಟಿ.ನಾಸೀರ್ ಪರವಾಗಿ ಕೆಲಸ ಮಾಡುತ್ತಿದ್ದಾನೆ. ಪ್ರಕರಣ ಸಂಬಂಧ ಆಗಾಗ ಬೆಂಗಳೂರು, ಕೇರಳ ಹಾಗೂ ಇತರೆ ರಾಜ್ಯಗಳ ಕೋರ್ಟ್ಗೆ ಕರೆದೊಯ್ಯುವ ಮಾಹಿತಿಯನ್ನು ಸಂಘಟನೆಯ ಕೆಲ ವ್ಯಕ್ತಿಗಳು ಹಾಗೂ ಮುಂಚಿತವಾಗಿ ಟಿ.ನಾಸೀರ್ಗೂ ನೀಡುತ್ತಿದ್ದ. ಅದಕ್ಕಾಗಿ ಸಂಘಟನೆಯಿಂದ ಹಣ ಪಡೆಯುತ್ತಿದ್ದ ಎಂದು ಎನ್ಐಎ ಮೂಲಗಳು ಹೇಳಿವೆ.
ಇದೇ ಪ್ರಕರಣದಲ್ಲಿ ಎನ್ಐಎ ಅಧಿಕಾರಿಗಳು ತಲೆಮರೆಸಿಕೊಂಡಿರುವ ಜುನೈದ್ ಅಹ್ಮದ್ ಸೇರಿ 9 ಶಂಕಿತರ ವಿರುದ್ಧ ಕೋರ್ಟ್ಗೆ ಆರೋಪಪಟ್ಟಿ ಸಲ್ಲಿಸಿದೆ.
ಬೆಂಗಳೂರು, ಉತ್ತರ ಕರ್ನಾಟಕ ಸೇರಿ ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ನಾಲ್ಕು ಗ್ರೆನೈಡ್, ಮದ್ದು ಗುಂಡುಗಳು, ಪಿಸ್ತೂಲ್, ಜೀವಂತ ಗುಂಡುಗಳನ್ನು ಸಂಗ್ರಹಿಸಿದ್ದ ಆರೋಪದ ಮೇರೆಗೆ ಕೇಂದ್ರ ಅಪರಾಧ ವಿಭಾಗದ ಅಂದಿನ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ನೇತೃತ್ವದ ತಂಡ ಆರ್.ಟಿ.ನಗರ ಸೇರಿ ನಗರದ ವಿವಿಧೆಡೆ 2023ರ ಜುಲೈ 18ರಂದು ದಾಳಿ ನಡೆಸಿ ಆರು ಮಂದಿ ಶಂಕಿತ ಉಗ್ರರನ್ನು ಬಂಧಿಸಿತ್ತು.
adhar problem 12 ವರ್ಷದ ಈ ಬಾಲಕಿಗೆ ಆಧಾರ್ ಕಾರ್ಡೇ ಇಲ್ಲ! ಶಾಲೆಗೆ ಹೋಗಲು ನಿತ್ಯ 30 ರೂ. ಬಸ್ ಚಾರ್ಜ್, ಏನು ಕಾರಣ?