newsics.com
ಇಂದೋರ್: ಹನಿಮೂನ್ಗೆಂದು ಹೋಗಿ ಪತಿಯ ಕತೆ ಮುಗಿಸಿದ ಪತ್ನಿ ಸೋನಂಳ ಕರಾಳ ಮುಖಗಳು ಒಂದೊಂದೇ ಬಯಲಾಗುತ್ತಿದೆ. ತನ್ನ ಪತಿ ರಾಜಾ ರಘುವಂಶಿ ಹತ್ಯೆಗೆ ಸೋನಮ್ ರಘುವಂಶಿ ಬಾಡಿಗೆ ಹಂತಕರಿಗೆ ಮೊದಲಿಗೆ 4 ಲಕ್ಷ ರೂ. ನೀಡುವುದಾಗಿ ಹೇಳಿದ್ದಳು. ನಂತರದಲ್ಲಿ ಆ ಮೊತ್ತವನ್ನು 20 ಲಕ್ಷ ರೂ.ಗೆ ಹೆಚ್ಚಿಸಿದ್ದಳು ಎಂದು ಮೂಲಗಳು ತಿಳಿಸಿವೆ.
ಬರಿ ಇಷ್ಟೇ ಅಲ್ಲ ಆಕೆ ರಘುವಂಶಿಯವರು ಮೃತದೇಹವನ್ನು ಮೇಘಾಲಯದಲ್ಲಿ ಕಂದಕಕ್ಕೆ ತಳ್ಳುವಲ್ಲಿ ಇತರ ಆರೋಪಿಗಳಿಗೆ ಸಹಾಯ ಮಾಡಿದ್ದಾಳೆ ಎಂದು ಉನ್ನತ ಪೊಲೀಸ್ ಮೂಲಗಳು ಹೇಳಿವೆ.
ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೊಹ್ರಾ ಪ್ರದೇಶದ ಜಲಪಾತದ ಬಳಿಯ ಕಮರಿಯಲ್ಲಿ ಜೂನ್ 2 ರಂದು ರಾಜಾ ರಘುವಂಶಿ ಅವರ ದೇಹವು ಪತ್ತೆಯಾಗಿತ್ತು. ರಾಜ ರಘುವಂಶಿ ಅವರು ತಮ್ಮ ಪತ್ನಿ ಸೋನಂ ಜೊತೆ ಹನಿಮೂನ್ಗಾಗಿ ಮೇಘಾಲಯ ತಲುಪಿದ ಕೆಲವು ದಿನಗಳ ನಂತರ ಅವರ ಕೊಲೆಯಾಗಿತ್ತು.
ಸೋನಂ ತನ್ನ ಪತಿಯ ಕೊಲೆಗಾಗಿ ನೇಮಕ ಮಾಡಿಕೊಂಡಿದ್ದ ಕೊಲೆಗಾರರು ಮೊದಲು ಬೆಂಗಳೂರಿನಲ್ಲಿ ಈ ನವವಿವಾಹಿತ ದಂಪತಿಯನ್ನು ಭೇಟಿಯಾಗಿದ್ದರು.
ಮೂಲಗಳ ಪ್ರಕಾರ, ಮೇ 11 ರಂದು ಇಂದೋರ್ನಲ್ಲಿ ನಡೆದ ವಿವಾಹದ ಕೆಲವೇ ದಿನಗಳ ನಂತರ ಸೋನಮ್ ತನ್ನ ಪ್ರಿಯಕರ ರಾಜ್ ಕುಶ್ವಾಹ ಜೊತೆ ಗಂಡ ರಾಜಾ ರಘುವಂಶಿ ಕೊಲೆಗೆ ಯೋಜನೆ ರೂಪಿಸಿದ್ದಳು. ಇದಕ್ಕಾಗಿ ಹನಿಮೂನ್ ಸ್ಥಳವನ್ನೇ ಬದಲಿಸಿದ್ದಳು. ಅಸ್ಸಾಂನ ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಬೇಕಾದ ನವದಂಪತಿ ಇತ್ತ ಮೇಘಾಲಯಕ್ಕೆ ಹೊರಟಿದ್ದರು. ಸೋನಂ ಪ್ರಿಯಕರ ರಾಜ್ ಕುಶ್ವಾಹ ಮೇಘಾಲಯಕ್ಕೆ ಪ್ರಯಾಣಿಸದಿದ್ದರೂ ಆತ ತೆರೆಮರೆಯಲ್ಲಿ ಯೋಜನೆ ರೂಪಿಸಿದ್ದ ಹಾಗೂ ಸೋನಮ್ ಜೊತೆ ಸಂಪರ್ಕದಲ್ಲಿದ್ದ ಎಂದು ಶಿಲ್ಲಾಂಗ್ ಪೊಲೀಸ್ ಮೂಲಗಳು ಹೇಳಿವೆ.