newsics.com
ಹೊಸದಿಲ್ಲಿ: ವಿದೇಶಿ ವಲಸಿಗರೆಲ್ಲರಿಗೂ ಆತಿಥ್ಯ ನೀಡಲು ಭಾರತ ಏನು ಧರ್ಮಶಾಲೆಯೇ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್ ಸೋಮವಾರ ಶ್ರೀಲಂಕಾ ತಮಿಳು ವಲಸಿಗನ ಅರ್ಜಿ ತಿರಸ್ಕರಿಸಿದೆ.
ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ)ಯಡಿ ದಾಖಲಾದ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆ ಮುಗಿಸಿದ ನಂತರ ಶ್ರೀಲಂಕಾ ಪ್ರಜೆಯಾದ ಅರ್ಜಿದಾರನನ್ನು ದೇಶ ತೊರೆಯುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಕೆ.ವಿನೋದ್ ಚಂದ್ರನ್ ಅವರಿದ್ದ ಪೀಠ ಇಂದು ವಿಚಾರಣೆ ನಡೆಸಿತು.
“ಭಾರತ ಜಗತ್ತಿನೆಲ್ಲೆಡೆಯ ನಿರಾಶ್ರಿತರಿಗೆ ಆಶ್ರಯ ನೀಡಬೇಕೇ? ನಾವು 140 ಕೋಟಿ ಜನರೊಂದಿಗೆ ಕಷ್ಟಪಡುತ್ತಿದ್ದೇವೆ. ಇದು ಪ್ರಪಂಚದ ವಿದೇಶಿ ಪ್ರಜೆಗಳಿಗೆ ಮನರಂಜನೆ ನೀಡುವ ಧರ್ಮಶಾಲೆಯಲ್ಲ” ಎಂದು ನ್ಯಾಯಪೀಠ ಹೇಳಿತು.
ಶ್ರೀಲಂಕಾ ತಮಿಳು ‘ಭಯೋತ್ಪಾದಕ ಸಂಘಟನೆ ಎಲ್ಟಿಟಿಇ ಸಂಪರ್ಕ ಹೊಂದಿದ್ದ ಆರೋಪದಲ್ಲಿ ೨೦೧೫ರಲ್ಲಿ ಬಂಧಿಸಲ್ಪಟ್ಟಿದ್ದ ಶ್ರೀಲಂಕಾ ತಮಿಳಿಗನ ವಲಸೆ ಅರ್ಜಿ ಸಲ್ಲಿಸಿದ್ದ.
ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಕೆ. ವಿನೋದ್ ಚಂದ್ರನ್ ಅವರ ದ್ವಿಸದಸ್ಯ ಪೀಠ ತಿರಸ್ಕರಿಸಿದೆ.
ಅರ್ಜಿದಾರ ಶ್ರೀಲಂಕಾ ಪ್ರಜೆಯ ಪರ ವಕೀಲರು ವಿಚಾರಣೆಯ ವೇಳೆ ವಾದಿಸಿ, ನಮ್ಮ ಕಕ್ಷಿದಾರರು ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (ಎಲ್ಟಿಟಿಇ)ನ ಮಾಜಿ ಸದಸ್ಯರು. ಹಾಗಾಗಿ ಅವರ ದೇಶದಲ್ಲಿ ಬಂಧನ ಮತ್ತು ಚಿತ್ರಹಿಂಸೆ ಭೀತಿ ಎದುರಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ಅವರ ಪತ್ನಿ ಮತ್ತು ಮಕ್ಕಳು ಭಾರತದಲ್ಲಿ ನೆಲೆಸಿದ್ದಾರೆ ಎಂದು ತಿಳಿಸಿದರು
ವಲಸಿಗನ ಅರ್ಜಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ದತ್ತ, ವಿಶ್ವದ ವಲಸಿಗರೆಲ್ಲರಿಗೂ ಭಾರತ ಆತಿಥ್ಯ ನೀಡಬೇಕೆ? ನಾವು ಈಗಾಗಲೇ ೧೪೦ ಕೋಟಿ ಜನಸಂಖ್ಯೆಯೊಂದಿಗೆ ಪರದಾಡುತ್ತಿದ್ದೇವೆ. ವಿದೇಶಿ ವಲಸಿಗರೆಲ್ಲರಿಗೂ ಆತಿಥ್ಯ ನೀಡಿ ಸತ್ಕರಿಸಲು ಭಾರತ ಏನು ಧರ್ಮಛತ್ರವೇ ಎಂದಿದ್ದಾರೆ. ವಿಧಿ ೨೧ ಮತ್ತು ವಿಧಿ ೧೯ರ ಅಡಿ ಭಾರತದಲ್ಲಿ ನೆಲೆಸಲು ಅವಕಾಶ ಕಲ್ಪಿಸಬೇಕು ಎಂಬ ಅರ್ಜಿದಾರನ ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಭಾರತದಲ್ಲಿ ನೆಲೆಸಲು ನಿಮಗೆ ಯಾವ ಹಕ್ಕಿದೆ ಎಂದು ಪ್ರಶ್ನಿಸಿದೆ. ಬೇರೆ ದೇಶಕ್ಕೆ ವಲಸೆ ಹೋಗಿ ಎಂದು ಖಡಕ್ ಸೂಚನೆ ನೀಡಿದೆ.