newsics.com
ಕರ್ನಾಟಕದಲ್ಲಿ ಬಿಸಿಲಿನ ಬೇಗೆಗೆ ಕೆರೆ, ಜಲಾಶಯ ಖಾಲಿಯಾಗಿದ್ದು, ನೀರಿನ ಕೊರತೆ ಉಂಟಾಗಿದೆ. 42 ಸಾವಿರ ಕೆರೆಗಳ ಪೈಕಿ 17 ಸಾವಿರ ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರು ಶೇಖರಣೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗಿದೆ.
ಕಳೆದ ಮುಂಗಾರು ಅವಧಿಯಲ್ಲಿ ಭಾರೀ ಮಳೆಯಾಗಿ ರಾಜ್ಯದ ಜಲಮೂಲಗಳು ತುಂಬಿದ್ದವು. ಇದರಿಂದ ನೀರಿನ ಸಮಸ್ಯೆ ಎದುರಾಗಲ್ಲ ಅಂದುಕೊಂಡಿತ್ತು. ಅದರೆ, ಏಪ್ರಿಲ್ ಮಧ್ಯಭಾಗದಲ್ಲಿಯೇ ರಾಜ್ಯದ ಒಟ್ಟು ಕೆರೆಗಳ ಪೈಕಿ ಶೇ.35ರಷ್ಟು ಕೆರೆಗಳಲ್ಲಿ ಶೇ. 30ಕ್ಕಿಂತ ಕಡಿಮೆಯಿದೆ.
ರಾಜ್ಯದಲ್ಲಿ ಒಟ್ಟಾರೆ 41,875 ಕೆರೆಗಳಿವೆ. ಅವುಗಳ ಪೈಕಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ನಿರ್ವಹಣೆಯಲ್ಲೇ 32,068 ಕೆರೆಗಳಿವೆ. ಉಳಿದಂತೆ ಸಣ್ಣ ನೀರಾವರಿ ಇಲಾಖೆ ನಿರ್ವಹಣೆಯಲ್ಲಿ 3,778, ಜಲಸಂಪನ್ಮೂಲ ಇಲಾಖೆ ಅಡಿ 2,048, ಬಿಬಿಎಂಪಿ, ಬಿಡಿಎ ಮತ್ತು ನಗರ ಸ್ಥಳೀಯ ಸಂಸ್ಥೆಗಳ ನಿರ್ವಹಣೆಯಲ್ಲಿ 1,285 ಹಾಗೂ ಅರಣ್ಯ, ಕಂದಾಯ ಸೇರಿದಂತೆ ಇನ್ನಿತರ ಇಲಾಖೆಗಳ ಸುಪರ್ದಿಯಲ್ಲಿ 2,696 ಕೆರೆಗಳಿವೆ. ಆ ಕೆರೆಗಳ ಪೈಕಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ನಿರ್ವಹಣೆಯಲ್ಲಿರುವ 14,285 ಕೆರೆಗಳಲ್ಲಿ ಶೇ. 30ಕ್ಕಿಂತ ಕಡಿಮೆ ನೀರು ಶೇಖರಣೆಯಾಗಿದೆ. ಉಳಿದಂತೆ ಸಣ್ಣ ನೀರಾವರಿ ಇಲಾಖೆ ಕೆರೆಗಳಲ್ಲಿ 1,443, ಜಲಸಂಪನ್ಮೂಲ ಇಲಾಖೆ ಕೆರೆಗಳಲ್ಲಿ 344, ಬಿಬಿಎಂಪಿ, ಬಿಡಿಎ ಮತ್ತು ನಗರ ಸ್ಥಳೀಯ ಸಂಸ್ಥೆಗಳ ನಿರ್ವಹಣೆಯ 588 ಕೆರೆಗಳಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಿದೆ. ಒಟ್ಟಾರೆ 16,660 ಕೆರೆಗಳಲ್ಲಿ ಶೇಖರಣೆಯಾಗಿರುವ ನೀರಿನ ಪ್ರಮಾಣ ಶೇ.30ಕ್ಕಿಂತ ಕಡಿಮೆಯಿದೆ.
123 ಟಿಎಂಸಿ ಅಡಿಗಳಷ್ಟು ನೀರು ಶೇಖರಣೆ ಸಾಮರ್ಥ್ಯವಿರುವ ಆಲಮಟ್ಟಿ ಜಲಾಶಯದಲ್ಲಿ ಕೇವಲ 8 ಟಿಎಂಸಿ ಅಡಿ, 105 ಟಿಎಂಸಿ ಅಡಿ ನೀರು ಶೇಖರಣೆ ಮಾಡಬಹುದಾದ ತುಂಗಭದ್ರಾ ಜಲಾಶಯದಲ್ಲಿ 1.39 ಟಿಎಂಸಿ ಅಡಿ, 49.45 ಟಿಎಂಸಿ ಅಡಿಗಳಷ್ಟು ನೀರು ಶೇಖರಣೆ ಸಾಮರ್ಥ್ಯದ ಕೃಷ್ಣರಾಜಸಾಗರ ಜಲಾಶಯದಲ್ಲಿ 11.78 ಟಿಎಂಸಿ ಅಡಿಗಳಷ್ಟು ಮಾತ್ರ ನೀರು ಬಳಕೆ ಮಾಡಬಹುದಾಗಿದೆ.