newsics.com
ಬೆಂಗಳೂರು: ಹಿರಿಯ ಸಾಹಿತಿ, ವಿದ್ವಾಂಸ ಡಾ.ಪಿ.ವಿ.ನಾರಾಯಣ ಬೆಂಗಳೂರಿನಲ್ಲಿ ಗುರುವಾರ ಬೆಳಗ್ಗೆ ವಯೋಸಹಜ ಅಸ್ವಸ್ಥತೆಯಿಂದ ನಿಧನರಾಗಿದರು.
ಪಿ.ವಿ.ನಾರಾಯಣ ಅವರು 1942ರ ಡಿಸೆಂಬರ್ 18 ರಂದು ಬೆಂಗಳೂರಿನಲ್ಲಿ ಜನಿಸಿದ್ದರು. ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ವಿಭಾಗದಲ್ಲಿ ಅವರು ಪ್ರವಾಚಕರಾಗಿದ್ದರು. ಬಳ್ಳಿಗಾವೆ, ವಚನ ಚಳವಳಿ, ವಚನ ಸಾಹಿತ್ಯ-ಒಂದು ಸಾಂಸ್ಕೃತಿಕ ಅಧ್ಯಯನ ಮೊದಲಾದ ವಿಮರ್ಶಾ ಗ್ರಂಥಗಳನ್ನಲ್ಲದೆ ಮೂರು ಸಂಪಾದಿತ, ಆರು ಅನುವಾದಿತ ಕೃತಿ ಹಾಗೂ ಎಂಟು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.
ವಿಮರ್ಶೆ/ಸಂಶೋಧನೆ-ಬಳ್ಳಿಗಾವೆ, ಕಾಯತತ್ತ್ವ, ಚಂಪೂಕವಿಗಳು, ವಚನ ಚಳವಳಿ, ವಚನ ವ್ಯಾಸಂಗ ಮೊದಲಾದ 16 ಕೃತಿಗಳು. ಸಂಪಾದಿತ-ಬಸವ ಪುರಾಣ ಸಂಗ್ರಹ, ಪದ್ಮಿನೀ ಪರಿಣಯ ಮೊದಲಾದ 5 ಕೃತಿಗಳು. ಅನುವಾದ-ಮದುವೆ ಮತ್ತು ನೀತಿ, ಹನ್ನೆರಡನೇ ರಾತ್ರಿ, ಅಶ್ವತ್ಥಾಮನ್, ಬುವಿಯ ಬಸಿರಿಗೆ ಪಯಣ, ಪಂಪ ರಾಮಾಯಣ ಮುಂತಾದ 12 ಕೃತಿಗಳು ಪ್ರಕಟಗೊಂಡಿವೆ.
ಕಾದಂಬರಿಗಳು-ಸಾಮಾನ್ಯ, ಅಂತರ, ವಿಕಾಸ, ಶೋಧನೆ ನಿರ್ಧಾರ, ಧರ್ಮಕಾರಣ ಸೇರಿ ಒಟ್ಟು 45ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
ವಚನ ವ್ಯಾಸಂಗ ಕೃತಿಗೆ ಇಳಕಲ್ಲಿನ ಶ್ರೀವಿಜಯ ಮಹಾಂತೇಶ ಮಠ ಪುರಸ್ಕಾರ ಲಭಿಸಿದೆ. ಸಮಾಜದ ಮೇಲೆ ವಿಜ್ಞಾನದ ಪ್ರಭಾವ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ‘ಶೋಧನೆ’ ಸುಧಾ ವಾರ ಪತ್ರಿಕೆಯ ಕಾದಂಬರಿ ಸ್ಪರ್ಧೆ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.
ಬಸವಣ್ಣನವರನ್ನು ಕುರಿತು ತೀವ್ರ ವಿವಾದ ಉಂಟುಮಾಡಿದ್ದ ಇವರ ಕೃತಿ ‘ಧರ್ಮಕಾರಣ’ವನ್ನು ಸಾರ್ವಜನಿಕರ ಒತ್ತಾಯದ ಮೇರೆಗೆ ಕರ್ನಾಟಕ ಸರ್ಕಾರ ನಿಷೇಧಿಸಿತ್ತು.