newsics.com
ಮೈಸೂರು: ಮುಡಾದ 48 ನಿವೇಶನಗಳ ಹಂಚಿಕೆಯನ್ನು ರಾಜ್ಯ ಸರಕಾರ ದಿಢೀರನೆ ರದ್ದುಪಡಿಸಿದೆ. ಮುಡಾ ಹಿಂದಿನ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ನಿವೇಶನಗಳ ಹಂಚಿಕೆ ಮಾಡಿದ ಆರೋಪ ಕೇಳಿ ಬಂದಿತ್ತು.
ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಆರೋಪದಲ್ಲಿ ತನಿಖೆ ನಡೆಸುತ್ತಿರುವ ಇಡಿಗೆ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿದೆ ಎನ್ನಲಾಗಿದ್ದು, ಇದರ ನಡುವೆಯೇ ಸರ್ಕಾರದ ಈ ನಡೆ ಬಂದಿದೆ. ಸುಮಾರು 1095 ಸೈಟುಗಳನ್ನು ಈ ಹಿಂದೆ ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎನ್ನಲಾಗಿದ್ದು, ಇದರಲ್ಲಿ ದಟ್ಟಗಳ್ಳಿಯ 48 ನಿವೇಶನಗಳೂ ಸೇರಿವೆ. ಈ 48 ನಿವೇಶನಗಳ ಹಂಚಿಕೆಯನ್ನು ನಗರಾಭಿವೃದ್ದಿ ಇಲಾಖೆ ರದ್ದು ಪಡಿಸಿದೆ. ಕಳೆದ ವರ್ಷದ ಮಾರ್ಚ್ 21ರಂದು ಈ ನಿವೇಶಗಳ ಹಂಚಿಕೆಗೆ ಮುಡಾದ ಸಾಮಾನ್ಯ ಸಭೆ ನಿರ್ಣಯ ಕೈಗೊಂಡಿತ್ತು.
ಮುಡಾ ಹಗರಣ ಸಂಬಂಧ ನಡೆಯುತ್ತಿರುವ ವಿವಿಧ ತನಿಖಾ ವರದಿಗಳು ಹೊರಬೀಳುವ ಮೊದಲೇ ಈ ಹಂಚಿಕೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಸರಕಾರದ ಅನುಮತಿಗೆ ಮುನ್ನವೇ ಮುಡಾ ಆಯುಕ್ತರು ನಿವೇಶನಗಳನ್ನು ಮಂಜೂರು ಮಾಡಿದ್ದರು. ಈ ವೇಳೆ ಕೆಲವು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ವಿಚಾರದಲ್ಲಿ ಆಯುಕ್ತರು ಸರಧಿಕಾರಕ್ಕೆ ನೀಡಿದ್ದ ಸ್ಪಷ್ಟನೆಯನ್ನು ಒಪ್ಪದ ಇಲಾಖೆ, ನ.30ರಂದು ಮುಡಾ ನಿರ್ಣಯವನ್ನು ರದ್ದುಗೊಳಿಸಿದೆ.