newsics.com
ಬಳ್ಳಾರಿ: ಹಲವು ದಿನಗಳ ಜೈಲುವಾಸದ ಬಳಿಕವೂ ನಟ ದರ್ಶನ್ ಜೀವನಶೈಲಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅದೇ ನಡೆ, ಅದೇ ಖದರ್, ಅದೇ ಸ್ಟೈಲ್ ಕಾಣಿಸಿತು.
ಬಳ್ಳಾರಿ ಜೈಲು ಪ್ರವೇಶಿಸುವಾಗ ಪುಮಾ ಕಂಪನಿಯ ಬ್ಲ್ಯಾಕ್ ಟಿ-ಶರ್ಟ್ ಜೀನ್ಸ್ ಧರಿಸಿದ್ದ ದರ್ಶನ್ ಬಲಗೈಯಲ್ಲಿ ಬ್ಯಾಂಡೇಜ್ ಕಟ್ಟಿಕೊಂಡಿದ್ದರು.
ಪೊಲೀಸ್ ವಾಹನದಿಂದ ಇಳಿದ ದರ್ಶನ್ ಜೈಲು ಪ್ರವೇಶದ್ವಾರದ ಎಂಟ್ರಿ ಪುಸ್ತಕದಲ್ಲಿ ಸಹಿ ಮಾಡಿದರು.
ಆಂತರಿಕ ಭದ್ರತಾ ವಿಭಾಗದಲ್ಲಿ ತಪಾಸಣೆ, ನಂತರ ಜೈಲು ವೈದ್ಯಾಧಿಕಾರಿಗಳು ಅವರ ಆರೋಗ್ಯ ತಪಾಸಣೆ ನಡೆಸಿದ್ದು, ಬಳಿಕ ಹೈ-ಸೆಕ್ಯೂರಿಟಿ ಸೆಲ್ ಗೆ ಕಳುಹಿಸಲಾಯಿತು.
ಯಾರೊಬ್ಬರೂ ಎಂಟ್ರಿಯಾಗದಂತೆ ಹೈ-ಸೆಕ್ಯೂರಿಟಿ ಸೆಲ್ ನಿರ್ಮಾಣ ಮಾಡಲಾಗಿದೆ ಎಂದು ಬಳ್ಳಾರಿ ಜೈಲಿನ ಮೂಲಗಳು ತಿಳಿಸಿವೆ.
ದರ್ಶನ್ಗೆ 6106 ನಂಬರನ್ನು ಕೈದಿ ಸಂಖ್ಯೆಯಾಗಿ ನೀಡಲಾಗಿದೆ. ದಚ್ಚು ಅಭಿಮಾನಿಗಳು ಈ ನಂಬರನ್ನೂ ಹಚ್ಚೆ ಹಾಕಿಸಿಕೊಳ್ಳುತ್ತಾರಾ ಎಂಬುದನ್ನು ಕಾದುನೋಡಬೇಕು.
ಇನ್ನು, ಹೈ-ಸೆಕ್ಯೂರಿಟಿ ಸೆಲ್ಗಳನ್ನು ಮೂರು ದಶಕಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ಎರಡೂ ಬದಿಯಲ್ಲಿ ಕನಿಷ್ಟ 30 ಸೆಲ್ಗಳಿವೆ. ಒಂದು ಕಡೆ 15 ಸೆಲ್ಗಳಿದ್ದು ಅಲ್ಲಿ ದರ್ಶನ್ ಅವರನ್ನು ಇರಿಸಲಾಗುತ್ತದೆ.
ಪಂಜಾಬ್ ಸಿಎಂ ಹತ್ಯೆ ಮಾಡಿದ ಉಗ್ರಗಾಮಿಗಳನ್ನು ಬಂಧಿಸಿಡಲು ಸಿದ್ಧಪಡಿಸಿದ್ದ ಸೆಲ್ ನಲ್ಲಿ ದರ್ಶನ್ ಅವರನ್ನು ಬಂಧಿಸಿಡಲಾಗುತ್ತದೆ. ಈಗಾಗಲೇ ವಿವಿಧ ಆರೋಪ ಮತ್ತು ಅಪರಾಧಗಳ ಅಡಿ ಬಂಧಿತ 11 ಜನರನ್ನು ಈ ಸೆಲ್ ಗಳಲ್ಲಿ ಇಡಲಾಗಿದೆ.
ಮಂಗಳೂರು, ಶಿವಮೊಗ್ಗ, ಬೆಂಗಳೂರಿನ 11 ಜನರು ಈ ಸೆಲ್ ಗಳಲ್ಲಿ ಇದ್ದಾರೆ.
ಕಾರಾಗೃಹದ ಒಳಗಡೆ ಯೋಗ ಕೇಂದ್ರ ಇದೆ. ಆದರೆ ಹೈ-ಸೆಕ್ಯೂರಿಟಿ ಸೆಲ್ನಲ್ಲಿ ಇಲ್ಲ. ಕೇಂದ್ರ ಕಾರಾಗೃಹ ಹಾಗೂ ಈ ಹೈ-ಸೆಕ್ಯೂರಿಟಿ ಸೆಲ್ ಗೆ ಸಂಪರ್ಕ ಇಲ್ಲ. ಜೈಲ್ ಸಿಬ್ಬಂದಿಗೂ ಸೆಲ್ ನಲ್ಲಿ ಮೊಬೈಲ್ ಬಳಕೆ ನಿಷಿದ್ಧ. ಏನಿದ್ದರೂ ವೈಯರ್ ಲೆಸ್ ವ್ಯವಸ್ಥೆ ಮಾತ್ರ ಇದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಾದ ಘಟನೆ ಹಿನ್ನೆಲೆಯಲ್ಲಿ ಜೈಲ್ ಅಧಿಕಾರಿಗಳು ಹೈ ಅಲರ್ಟ್ ಆಗಿದ್ದಾರೆ. ಸಿಬ್ಬಂದಿ ಮೊಬೈಲ್ ಬಳಕೆ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕೆಲ ಸಿಬ್ಬಂದಿ ಮನೆಯಲ್ಲಿಯೇ ಮೊಬೈಲ್ ಬಿಟ್ಟುಹೋಗುವ ಸ್ಥಿತಿ ಎದುರಾಗಿದೆ.
ಆಂಧ್ರದ ಅನಂತಪುರ ಮಾರ್ಗವಾಗಿ ದರ್ಶನ್ ಅವರನ್ನು ಬಳ್ಳಾರಿಗೆ ಕರೆತರಲಾಯಿತು. ಗಡಿಗ್ರಾಮ ಜೋಳದ ರಾಶಿ ಮೂಲಕ ಆಗಮಿಸಿದ ದರ್ಶನ್ ವಾಹನಕ್ಕೆ ಸ್ಥಳೀಯ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಎಸ್ಪಿ ಶೋಭಾರಾಣಿ, ಜೈಲು ಅಧೀಕ್ಷಕಿ ಲತಾ ನೇತೃತ್ವದಲ್ಲಿ ಪೊಲೀಸರು ಜೈಲಿನೊಳಗಿನ ಎಲ್ಲಾ ಪರಿಸ್ಥಿತಿ ವೀಕ್ಷಿಸಿದರು.
ನಟ ದರ್ಶನ್ ಅವರನ್ನು ನೋಡಲು ಕ್ಯಾತಸಂದ್ರ ಮಾರ್ಗದಲ್ಲಿ ಅಭಿಮಾನಿಗಳು ಸೇರಿದ್ದರು. ದರ್ಶನ್ ಅಭಿಮಾನಿಗಳನ್ನು ಜೈಲು ಬಳಿಗೆ ಬಿಡದಂತೆ ದುರ್ಗಮ್ಮಗುಡಿ ಬಳಿಯೇ ಬ್ಯಾರಿಕೇಡ್ ಅಳವಡಿಸಿ, ತಡೆಹಿಡಿಯಲಾಯಿತು. ದರ್ಶನ್ ಬರುತ್ತಿದ್ದಂತೆ ದುರ್ಗಮ್ಮ ಗುಡಿ ಬಳಿ ಜಮಾಯಿಸಿದ್ದ ಅಭಿಮಾನಿಗಳು ಕೇಕೆ ಹಾಕಿದರು.
ಪರಪ್ಪನ ಅಗ್ರಹಾರದಲ್ಲಿದ್ದ ಆರೋಪಿ ದರ್ಶನ್ ಅವರಿಗೆ ರಾಜಾತಿಥ್ಯ ಸಿಗುತ್ತಿದೆ ಎನ್ನುವ ಫೋಟೋ ವೈರಲ್ ಆದ ಬೆನ್ನಲ್ಲೇ ಆರೋಪಿಗಳನ್ನು ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡಲು ಬೆಂಗಳೂರು ನಗರದ 24ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿತ್ತು. ನ್ಯಾಯಾಲಯದ ಆದೇಶದಂತೆ ಆರೋಪಿ ನಟ ದರ್ಶನ್ ಅವರನ್ನು ಬಳ್ಳಾರಿಯ ಜೈಲ್ಗೆ ಶಿಫ್ಟ್ ಮಾಡಲಾಗಿದೆ.