newsics.com
ಬೆಂಗಳೂರು: ನನ್ನನ್ನು ಬಂಧಿಸಲು ನೂರು ಸಿದ್ದರಾಮಯ್ಯ ಹುಟ್ಟಿ ಬರಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲೆಸೆದಿದ್ದಾರೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರನ್ನು ಬಂಧಿಸುವ ಅಗತ್ಯಬಿದ್ದರೆ ಮುಲಾಜಿಲ್ಲದೆ ಬಂಧಿಸುತ್ತೇವೆ ಎಂದು ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಕುಮಾರಸ್ವಾಮಿ ಈ ತಿರುಗೇಟು ನೀಡಿದ್ದಾರೆ.
ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿಗೆ ನಿಯಮ ಉಲ್ಲಂಘಿಸಿ ಗಣಿಗಾರಿಕೆ ಗುತ್ತಿಗೆ ಮುಂಜೂರು ಮಾಡಿದ್ದ ಆರೋಪ ಪ್ರಕರಣದಲ್ಲಿ ಲೋಕಾಯುಕ್ತ ದೋಷಾರೋಪ ಪಟ್ಟಿ ಸಲ್ಲಿಕೆಗೆ ಸಿದ್ಧತೆ ನಡೆಸುತ್ತಿರುವ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವರು, ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ಕರ್ನಾಟಕ ಲೋಕಾಯುಕ್ತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ಹೆದರುವುದಿಲ್ಲ. ತಮ್ಮ ವಿರುದ್ಧದ ತನಿಖೆ ಪೂರ್ಣಗೊಂಡಿದ್ದರೆ, ಲೋಕಾಯುಕ್ತ ವಿಶೇಷ ತನಿಖಾ ತಂಡ (ಎಸ್ಐಟಿ) ವರದಿಯನ್ನು ಸುಪ್ರೀಂ ಕೋರ್ಟ್ಗೆ ಏಕೆ ಸಲ್ಲಿಸಿಲ್ಲ ಎಂದು ಪ್ರಶ್ನಿಸಿದರು.
ನನ್ನ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್ಗೆ ಅನುಮೋದನೆಗೆ ಕೋರಿದ್ದಾರೆ. 2023ರ ನವೆಂಬರ್ನಲ್ಲಿ ಅನುಮತಿ ಕೇಳಿದ್ದು, ಸುಮಾರು ಹತ್ತು ತಿಂಗಳಾಗಿದೆ. ಆದರೆ ಮಂಗಳವಾರ ಬೆಳಗ್ಗೆಯಿಂದ ಸಂಜೆವರೆಗೂ ಕುಮಾರಸ್ವಾಮಿಗೆ ಮತ್ತೆ ಗಣಿ ಸಂಕಷ್ಟ ಶುರುವಾಗಿದೆ ಎಂದು ವರದಿಗಳು ಬರುತ್ತಿವೆ.
2023ರ ಜುಲೈನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಬಂದಾಗಲೇ ವರ್ಗಾವಣೆ ದಂಧೆಗೆ ಮುಂದಾದರು. ಅದರ ಬಗ್ಗೆ ನಾನು ವಾಗ್ದಾಳಿ ನಡೆಸಿದೆ. ಇದು ಸರ್ಕಾರಕ್ಕೆ ಮುಜುಗರ ತಂದಿತು. ಆಗ ಕುಮಾರಸ್ವಾಮಿ ಹಿಟ್ ಆ್ಯಂಡ್ ರನ್ ಅಂತೆಲ್ಲಾ ಹೇಳಿದರು ಎಂದು ಟೀಕಿಸಿದರು.
ಹಿರಿಯ ಐಪಿಎಸ್ ಅಧಿಕಾರಿ ಯು.ವಿ.ಸಿಂಗ್ ಅವರು ಸಿದ್ಧಪಡಿಸಿರುವ ಲೋಕಾಯುಕ್ತ ವರದಿಯಲ್ಲಿ ಮೂವರು ಮುಖ್ಯಮಂತ್ರಿಗಳ ಹೆಸರಿದೆ. ಮಾಜಿ ಸಿಎಂ ಎಸ್.ಎಂ.ಕೃಷ್ಣ, ದಿವಂಗತ ಮಾಜಿ ಸಿಎಂ ಎನ್. ಧರಂ ಸಿಂಗ್ ಮತ್ತು ನನ್ನ ಹೆಸರನ್ನು ಉಲ್ಲೇಖಿಸಲಾಗಿತ್ತು. ಆ ವರದಿಯಲ್ಲಿ ಅಂದಿನ ಸಿಎಂ ಪ್ರಕರಣದಲ್ಲಿ ಮಿಸ್ ಕಂಡಕ್ಟ್ ರಿಪೋರ್ಟ್ ಇತ್ತು. ಅವರ ಮೇಲೆ ಯಾವ ರೀತಿಯ ಆಕ್ಷನ್ ಆಗಬೇಕು ಎಂದು ಒತ್ತಾಯ ಮಾಡಲ್ಲ ಎಂದು ಲೋಕಾಯುಕ್ತ ವರದಿ ನೀಡಿದ್ದರು ಎಂದರು.
‘2008ರಲ್ಲಿ ನಾನು ಸಿಎಂ ಆಗಿದ್ದಾಗ ಪ್ರಕರಣದಲ್ಲಿ ಕಾಂಗ್ರೆಸ್ ನನ್ನನ್ನು ಸಿಲುಕಿಸಲು ಯತ್ನಿಸಿತ್ತು. ಗಣಿ ಕಂಪನಿಗಳ ಮಾಲೀಕರಿಂದ 150 ಕೋಟಿ ರೂ. ವಸೂಲಿ ಮಾಡಿದ್ದೇನೆ ಎಂದು ಶಾಸಕರೊಬ್ಬರು ಆರೋಪ ಮಾಡಿದ್ದರು. ಆರೋಪದ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸಿದ್ದು ಚರ್ಚೆಗೆ ಕಾರಣವಾಗಿತ್ತು ಎಂದು ಕುಮಾರಸ್ವಾಮಿ ಹೇಳಿದರು.
ಪ್ರಕರಣದಲ್ಲಿ ವಿರೋಧ ಪಕ್ಷದ ನಾಯಕರು ಸೇರಿದಂತೆ ನ್ಯಾಯಾಂಗ ತನಿಖೆ ಕೋರಿ ಯಾರೂ ಅರ್ಜಿ ಸಲ್ಲಿಸಿರಲಿಲ್ಲ, ಆದರೆ ನಂತರ ನಾನು ಈ ಬಗ್ಗೆ ಲೋಕಾಯುಕ್ತ ತನಿಖೆಗೆ ಆದೇಶಿಸಿದ್ದೆ ಎಂದು ಕೇಂದ್ರ ಸಚಿವರು ಹೇಳಿದರು.
ನನ್ನನ್ನು ಟಾರ್ಗೆಟ್ ಮಾಡಲಾಗಿದೆ:
ಸರ್ಕಾರದ ಭ್ರಷ್ಟಾಚಾರ ಬಗ್ಗೆ ವಿರುದ್ಧ ಮಾತನಾಡುತ್ತಿರುವುದಕ್ಕೆ ಸಿದ್ದರಾಮಯ್ಯ ಸರ್ಕಾರ ನನ್ನನ್ನು ಟಾರ್ಗೆಟ್ ಮಾಡಿದೆ. ಒಂದು ದಿನವಾದರೂ ಜೈಲಿಗೆ ಹಾಕಿಸಬೇಕು ಎಂದು ನನ್ನ ಸಹಿ ತಿರುಚಿರುವ ದಾಖಲಾತಿಗಳನ್ನು ಇಟ್ಟುಕೊಂಡು ಪ್ರಯತ್ನ ಮಾಡುತ್ತಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದೆ. ನನ್ನನ್ನು ಒಂದು ದಿನವಾದರೂ ಜೈಲಿಗೆ ಹಾಕಲು ಪ್ಲ್ಯಾನ್ ನಡೆಯುತ್ತಿದೆ. ಸಾಯಿ ವೆಂಕಟೇಶ್ವರ ಮೈನಿಂಗ್ ಕೇಸ್ ನಲ್ಲಿ ನನ್ನ ಸಹಿಯನ್ನೇ ನಕಲು ಮಾಡಿದ್ದಾರೆ. ನಾನು ಸಹಿ ಮಾಡಿದೇ ಹೋದರೂ ನನ್ನ ಸಹಿ ಎಂದು ಕೇಸ್ ನಡೆಯುತ್ತಿದೆ. ಅಧಿಕಾರಿಗಳು ಮಾಡಿರುವ ತಪ್ಪಿಗೆ ನನ್ನ ಮೇಲೆ ಕ್ರಮಕ್ಕೆ ಮುಂದಾಗಿದ್ದು, ಇದು ರಾಜ್ಯ ಸರ್ಕಾರದ ಸೇಡಿನ ರಾಜಕೀಯ ಎಂದು ವಾಗ್ದಾಳಿ ನಡೆಸಿದರು.
ಸಿದ್ದು ರಾಜೀನಾಮೆಗೂ ಮುನ್ನವೇ ಶುರುವಾಯ್ತು ಸಿಎಂ ಕುರ್ಚಿ ಚರ್ಚೆ! ಯಾರಾಗ್ತಾರೆ ಮುಂದಿನ ಮುಖ್ಯಮಂತ್ರಿ?
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೇಳ್ತೀರಾ ರಾಹುಲ್ ಜೀ?: ಕಾಂಗ್ರೆಸ್ಗೆ ದೀದಿ ಆಪ್ತರ ಪ್ರಶ್ನೆ
ಕಾಂಗ್ರೆಸ್ಸಿಗರ ತೀವ್ರ ಆಕ್ರೋಶ: ರಾಜ್ಯಪಾಲರಿಂದ ಬುಲೆಟ್ಪ್ರೂಫ್ ಕಾರು ಬಳಕೆ