newsics.com
ಬೆಂಗಳೂರು: ಗುರುವಾರ ರಾತ್ರಿ (ಜು.11) ನಿಧನರಾದ ಖ್ಯಾತ ನಿರೂಪಕಿ ಅಪರ್ಣಾ ಅವರ ಅಂತ್ಯಕ್ರಿಯೆ ಇಂದು(ಶುಕ್ರವಾರ) ಮಧ್ಯಾಹ್ನ 1 ಗಂಟೆ ಹೊತ್ತಿಗೆ ನಡೆಯಲಿದೆ.
‘ಮಧ್ಯಾಹ್ನ 12ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಮನೆಯ ಬಳಿಯೇ ವ್ಯವಸ್ಥೆ ಮಾಡಲಾಗಿದೆ. ನಂತರ ಕುಟುಂಬದಿಂದ ಅಂತಿಮ ವಿಧಿವಿಧಾನ ಕಾರ್ಯ ನಡೆಯಲಿದೆ. ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ’ ಎಂದು ಅಪರ್ಣಾ ಅವರ ಪತಿ ನಾಗರಾಜ ವಸ್ತಾರೆ ಮಾಹಿತಿ ನೀಡಿದ್ದಾರೆ.
ಬನಶಂಕರಿ ಸುಚಿತ್ರಾ ಫಿಲ್ಮ್ ಸೊಸೈಟಿ ಬಳಿ ಇರುವ ಅಪರ್ಣಾ ಅವರ ಮನೆಯಲ್ಲೀಗ ನೀರವ ಮೌನ ಆವರಿಸಿದೆ. ಬೆಳಗಿನಿಂದ ಅಪರ್ಣಾ ಅವರ ಸ್ನೇಹಿತರು, ಅಭಿಮಾನಿಗಳು ಸೇರಿ ಹಲವರು ಅಂತಿಮ ದರ್ಶನ ಪಡೆದಿದ್ದು, ಕಂಬನಿ ಮಿಡಿದಿದ್ದಾರೆ.
ಅಪರ್ಣಾ ಅವರಿಲ್ಲ ಎನ್ನುವ ನೋವು ಅಭಿಮಾನಿಗಳನ್ನು ಅತಿಯಾಗಿ ಕಾಡುತ್ತಿದೆ. ಅಪರ್ಣಾ ಅವರನ್ನು ಕಳೆದುಕೊಂಡ ಕುಟುಂಬ ಕೂಡ ತೀವ್ರ ದುಃಖಕ್ಕೆ ಒಳಗಾಗಿದೆ. 2005ರಲ್ಲಿ ವಾಸ್ತುಶಿಲ್ಪಿ ಹಾಗೂ ಕವಿ ನಾಗರಾಜ್ ವಸ್ತಾರೆ ಅವರನ್ನು ಅಪರ್ಣಾ ಮದುವೆ ಆದರು. ಈಗ ಪತ್ನಿಯನ್ನು ಕಳೆದುಕೊಂಡು ನಾಗರಾಜ್ ಕುಗ್ಗಿ ಹೋಗಿದ್ದಾರೆ.
ಅಪರ್ಣಾ ಪಾರ್ಥಿವ ಶರೀರದ ಬಳಿ ನಿಂತು ನಾಗರಾಜ್ ವಸ್ತಾರೆ ಭಾವುಕರಾದರು. ಕಣ್ಣೀರಿಟ್ಟರು.
ಎರಡು ವರ್ಷದಿಂದ ಶ್ವಾಸಕೋಶ ಕ್ಯಾನ್ಸರ್ ಜತೆ ಹೋರಾಡಿದ್ದ ಅಪರ್ಣಾ ಧೀರೆ… ಪತಿ ನಾಗರಾಜ್ ವಸ್ತಾರೆ ಕಂಬನಿ