newsics.com/ನ್ಯೂಸಿಕ್ಸ್
ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಮಾಡೆಲ್ ಕಂ ನಟಿ ಟ್ವಿಶಾ ಶರ್ಮಾ ನಿಗೂಢ ಸಾವು ಪ್ರಕರಣಕ್ಕೆ ಭಾರಿ ತಿರುವು ಸಿಕ್ಕಿದೆ. ಕಳೆದ 10 ದಿನಗಳಿಂದ ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದ ಆಕೆಯ ಪತಿ, ವಕೀಲ ಸಮರ್ಥ್ ಸಿಂಗ್ ಶುಕ್ರವಾರ ಸಂಜೆ ಜಬಲ್ಪುರ ಜಿಲ್ಲಾ ನ್ಯಾಯಾಲಯಕ್ಕೆ ಬಂದು ದಿಢೀರ್ ಶರಣಾಗಿದ್ದಾನೆ.
ಪೊಲೀಸ್ ಬಂಧನದ ಭೀತಿಯಲ್ಲಿದ್ದ ಸಮರ್ಥ್ ಸಿಂಗ್, ಯಾರಿಗೂ ಗುರುತು ಸಿಗದಂತೆ ತಲೆಗೆ ಕ್ಯಾಪ್ (ಟೋಪಿ), ಮುಖಕ್ಕೆ ಮಾಸ್ಕ್, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಗೂ ಹೆಗಲಿಗೆ ಗಮ್ಚಾ (ಸರಳು ವಸ್ತ್ರ) ಧರಿಸಿ ಕೋರ್ಟ್ ಆವರಣಕ್ಕೆ ಪ್ರವೇಶಿಸಿದ್ದಾನೆ. ಈ ಹೈಡ್ರಾಮಾ ದೃಶ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಮಧ್ಯಪ್ರದೇಶ ಹೈಕೋರ್ಟ್ನಲ್ಲಿ ತಾನು ಸಲ್ಲಿಸಿದ್ದ ಮುಂಗಡ ಜಾಮೀನು ಅರ್ಜಿಯನ್ನು ಹಿಂಪಡೆದ ಕೇವಲ ಒಂದು ಗಂಟೆಯಲ್ಲೇ ಸಮರ್ಥ್ ಸಿಂಗ್ ಈ ನಿರ್ಧಾರ ಕೈಗೊಂಡಿದ್ದಾನೆ. ಹೈಕೋರ್ಟ್ ಪೀಠವು ಆತನಿಗೆ ಜಾಮೀನು ನೀಡಲು ನಿರಾಕರಿಸಿ, ತಕ್ಷಣವೇ ವಿಚಾರಣಾ ನ್ಯಾಯಾಲಯ ಅಥವಾ ಭೋಪಾಲ್ನ ಕಟಾರಾ ಪೊಲೀಸ್ ಠಾಣೆಯ ಮುಂದೆ ಶರಣಾಗುವಂತೆ ಸೂಚಿಸಿತ್ತು. ಜಾಮೀನು ಸಿಗುವುದು ಅಸಾಧ್ಯ ಎಂದು ಮನಗಂಡ ಆರೋಪಿ ಬೇರೆ ದಾರಿಯಿಲ್ಲದೆ ಜಬಲ್ಪುರ ಕೋರ್ಟ್ಗೆ ಶರಣಾಗಿದ್ದಾನೆ.
33 ವರ್ಷದ ಟ್ವಿಶಾ ಶರ್ಮಾ ಮೇ 12 ರಂದು ಭೋಪಾಲ್ನ ಕಟಾರಾ ಹಿಲ್ಸ್ನಲ್ಲಿರುವ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಮದುವೆಯಾಗಿ ಕೇವಲ ಐದೇ ತಿಂಗಳಲ್ಲಿ ನಡೆದ ಈ ಘಟನೆಗೆ ವರದಕ್ಷಿಣೆ ಕಿರುಕುಳ ಮತ್ತು ಪತಿಯ ದೈಹಿಕ ದೌರ್ಜನ್ಯವೇ ಕಾರಣ ಎಂದು ಟ್ವಿಶಾ ಪೋಷಕರು ಗಂಭೀರ ಆರೋಪ ಮಾಡಿದ್ದರು. ಈ ಸಂಬಂಧ ಸಮರ್ಥ್ ಸಿಂಗ್ ಹಾಗೂ ಆತನ ತಾಯಿ (ನಿವೃತ್ತ ಜಿಲ್ಲಾ ನ್ಯಾಯಾಧೀಶೆ ಗಿರಿಬಾಲಾ ಸಿಂಗ್) ವಿರುದ್ಧ ಎಫ್ಐಆರ್ ದಾಖಲಾಗಿತ್ತು. ತಲೆಮರೆಸಿಕೊಂಡಿದ್ದ ಸಮರ್ಥ್ ಪತ್ತೆಗೆ ಪೊಲೀಸರು 30,000 ರೂ. ಬಹುಮಾನವನ್ನೂ ಘೋಷಿಸಿದ್ದರು.