https://youtube.com/shorts/2gi1iB6d4H0?si=CNONE5w7sxEdw2CR
newsics.com
ರಾಜಕಾರಣ, ಪ್ರಕೃತಿ ವಿಕೋಪ, ರಾಜ್ಯ ರಾಜಕಾರಣ, ದೇಶದ ರಾಜಕಾರಣ, ದೇಶ ವಿದೇಶದ ಸಂಘರ್ಷಗಳು, ಬಾಂಬ್ ಸ್ಫೋಟ ಇತ್ಯಾದಿಗಳ ಬಗ್ಗೆ ಸ್ಫೋಟಕ ಭವಿಷ್ಯ ನುಡಿಯುವ ಕೋಡಿಮಠದ ಡಾ. ಶಿವಯೋಗಿ ಶಿವಾನಂದ ಸ್ವಾಮೀಜಿ ಇದೀಗ ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಅಡವಿಯಲ್ಲಿ ಕಂಡದ್ದು ಕೇಳದ್ದು ಕುರುಹೀನ ರಟ್ಟು ಎನ್ನುವ ಗೂಢಾರ್ಥದ ಮಾತಿನ ಮೂಲಕ ಭವಿಷ್ಯ ನುಡಿದಿರುವ ಶ್ರೀಗಳು, ಇದುವರೆಗೂ ಯಾರು ಕಂಡಿರದ ಮತ್ತು ಕೇಳಿರದ ವಿಚಿತ್ರ ಸಂಗತಿಗಳು ನಡೆಯಲಿವೆ.
ವಿಶ್ವದ ಪ್ರಮುಖ ದೇಶಗಳ ನಾಯಕರ ತಲೆದಂಡ. ಜಾಗತಿಕ ಮಟ್ಟದಲ್ಲಿ ದೊಡ್ಡ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಪ್ರಾಣಾಪಾಯ ಅಥವಾ ಅಧಿಕಾರ ಚ್ಯುತಿ ಅನುಭವಿಸಲಿದ್ದಾರೆ. ಇದು ಕೇವಲ ಒಂದು ದೇಶಕ್ಕೆ ಸೀಮಿತವಾಗಿರದೆ ಅಂತರಾಷ್ಟ್ರೀಯ ರಾಜಕೀಯದಲ್ಲಿ ದೊಡ್ಡ ಸಂಚಲನ ಮೂಡಿಸಲಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿಯೂ ಆಡಳಿತಾರೂಢರಿಗೆ ಸೋಲಾಗುವ ಅಥವಾ ಹಿನ್ನಡೆಯಾಗುವ ಲಕ್ಷಣಗಳಿವೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಸಾರಿಗೆ ಕ್ಷೇತ್ರದಲ್ಲಿ ದೊಡ್ಡ ಅವಘಡಗಳು ಸಂಭವಿಸಲಿವೆ. ವಾಯುಮಾರ್ಗ ಮತ್ತು ಭೂಮಾರ್ಗ ಎರಡರಲ್ಲೂ ಅಪಘಾತಗಳ ಪ್ರಮಾಣ ಏರಿಕೆಯಾಗಲಿದೆ. ಅಂದರೆ ವಿಮಾನ ದುರಂತಗಳು ಮತ್ತು ರೈಲು ಅಪಘಾತಗಳು ಸಂಭವಿಸುವ ಮೂಲಕ ಜನಸಾಮಾನ್ಯರಲ್ಲಿ ಆತಂಕ ಸೃಷ್ಟಿಯಾಗಲಿದೆ. ವಾಯು ಮಂಡಲದಲ್ಲಿನ ಏರುಪೇರಿನಿಂದಾಗಿ ಕೆಲವೆಡೆ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿ ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಶ್ರೀಗಳು ಎಚ್ಚರಿಸಿದ್ದಾರೆ.
ಈ ಬಾರಿ ಉತ್ತಮ ಮಳೆಯಾಗಿ ಅಣೆಕಟ್ಟುಗಳು ಭರ್ತಿಯಾಗಲಿವೆ ಎನ್ನುವ ಸಮಾಧಾನಕರ ಸುದ್ದಿಯ ನಡುವೆಯೇ ಗಾಳಿ ಮತ್ತು ಮಳೆಯ ಆರ್ಭಟ ವಿಪರೀತವಾಗಲಿದೆ ಎಂದು ಹೇಳಿದ್ದಾರೆ. ವಾಯು ತತ್ವದ ಪ್ರಭಾವದಿಂದಾಗಿ ಪ್ರಕೃತಿ ವಿಕೋಪಗಳು ಹೆಚ್ಚಾಗಲಿದ್ದು, ಇದರಿಂದ ಜನಜೀವನ ಅಸ್ತವ್ಯಸ್ತಗೊಳ್ಳಲಿದೆ. ಅಕಾಲಿಕ ಮೃತ್ಯುವಿನ ಸಂಖ್ಯೆಯೂ ಹೆಚ್ಚಾಗಲಿದ್ದು, ಸಾವು ನೋವುಗಳು ಸಂಭವಿಸುವ ಸಾಧ್ಯತೆಯಿದೆ.
ದೇಶದಲ್ಲಿ ಮತೀಯ ಗಲಭೆಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಜನರಲ್ಲಿ ಅಶಾಂತಿ ಮೂಡಲಿದೆ. ಇದರೊಂದಿಗೆ ಸಾಂಕ್ರಾಮಿಕ ರೋಗಗಳಂತೆ ಮನುಷ್ಯನ ಆರೋಗ್ಯದ ಮೇಲೆ ಹೊಸ ರೀತಿಯ ದುಷ್ಪರಿಣಾಮಗಳು ಬೀರುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಬದಲಾವಣೆಯ ವಿಚಾರದಲ್ಲಿ ಈ ಹಿಂದೆ ಅವರು ನುಡಿದಿದ್ದ ಹಾಲು ಕೆಟ್ಟರೂ ಹಾಲುಮತ ಸಮಾಜ ಕೆಡದು ಎನ್ನುವ ಭವಿಷ್ಯ ಈಗಾಗಲೇ ದೊಡ್ಡ ಚರ್ಚೆಗೆ ಕಾರಣವಾಗಿತ್ತು.