™ಭ್ರಷ್ಟಾಚಾರಕ್ಕೆ ಅಂತ್ಯ ಹಾಡಲು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಒಬ್ಬ ರೈತ ಧೈರ್ಯದ ನಿರ್ಧಾರ ತೆಗೆದುಕೊಂಡಿದ್ದಾರೆ. ರವಿ ಎಂಬ ರೈತ, ಇಂದು ವ್ಯವಸ್ಥೆಯನ್ನೇ ಪ್ರಶ್ನಿಸುತ್ತಿದ್ದಾರೆ.
ಅರಕಲಗೂಡು ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಅತ್ತಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ನಡೆದ ಅಭಿವೃದ್ಧಿ ಕೆಲಸಗಳಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ರವಿ ಸಂಶಯ ಪಟ್ಟಿದ್ದರು.
ಹೌದು, ಈ ವೇಳೆ ರವಿ ಮಾಹಿತಿ ಕೇಳಿದಾಗ ಪಂಚಾಯಿತಿಯಿಂದ ಬಂದ ಉತ್ತರ ದಿಗಿಲು ಹುಟ್ಟಿಸುವಂತಿತ್ತು. “ನೀವು ಕೇಳಿದ ಮಾಹಿತಿ ಸುಮಾರು 16,000 ಪುಟಗಳಷ್ಟಿದೆ, ಅದಕ್ಕೆ ಜೆರಾಕ್ಸ್ ಮತ್ತು ಇತರ ಶುಲ್ಕ ಸೇರಿ ನೀವು 32,000 ರೂಪಾಯಿ ಪಾವತಿಸಬೇಕು” ಎಂದು ಅಧಿಕಾರಿಗಳು ತಿಳಿಸಿದರು.
ಬಹುಶಃ ಅಧಿಕಾರಿಗಳು, “ಒಬ್ಬ ಸಾಮಾನ್ಯ ರೈತನಿಗೆ 32 ಸಾವಿರ ಎಲ್ಲಿಂದ ಬರುತ್ತದೆ? ಹಣವಿಲ್ಲ ಎಂದು ಸುಮ್ಮನೆ ಕೂರುತ್ತಾನೆ” ಎಂದು ಭಾವಿಸಿದ್ದರು. ಆದರೆ ರವಿ ಅಂತಹವರಲ್ಲ. ಅವರು ತಮ್ಮ ಮನೆಯಲ್ಲಿದ್ದ, ತಮ್ಮ ಜೀವನಕ್ಕೆ ಆಧಾರವಾಗಿದ್ದ ಹಸುವನ್ನೇ ಮಾರಾಟ ಮಾಡಿದರು! ಹಸು ಮಾರಿ ಬಂದ ಹಣವನ್ನು ಪಂಚಾಯಿತಿಗೆ ಪಾವತಿಸಿ, ಆ 16,000 ಪುಟಗಳ ದಾಖಲೆಯನ್ನು ಮನೆಗೆ ಹೊತ್ತೊಯ್ದಿದ್ದಾರೆ.
16,000 ಪುಟಗಳ ರಹಸ್ಯವೇನು?
ಈಗ ರವಿ ಬಳಿ 16,000 ಪುಟಗಳ ದೊಡ್ಡ ರಾಶಿಯೇ ಇದೆ. ಅವರು ದಿನವಿಡೀ ಕುಳಿತು ಒಂದೊಂದೇ ಪುಟವನ್ನು ಓದುತ್ತಿದ್ದಾರೆ. ಮಣ್ಣು ಹಾಕದೆಯೇ ಬಿಲ್ ಎಲ್ಲಿ ಪಾವತಿಸಲಾಗಿದೆ? ಹಳೆಯ ರಸ್ತೆಗೆ ಹೊಸ ಬಣ್ಣ ಬಳಿದು ಹಣ ಎಲ್ಲಿ ಲೂಟಿ ಮಾಡಲಾಗಿದೆ? ಇವೆಲ್ಲವನ್ನೂ ಪತ್ತೆಹಚ್ಚಿ ಲೋಕಾಯುಕ್ತಕ್ಕೆ ದೂರು ನೀಡಲು ಅವರು ಸಿದ್ಧತೆ ನಡೆಸುತ್ತಿದ್ದಾರೆ.
ಅವರು ಇದನ್ನು ತಮ್ಮ ಸ್ವಾರ್ಥಕ್ಕಾಗಿ ಮಾಡುತ್ತಿಲ್ಲ. ಪಂಚಾಯಿತಿಗೆ ಬಂದ ಹಣವು ಹಳ್ಳಿಯ ಅಭಿವೃದ್ಧಿಗೆ ಬಳಕೆಯಾಗಬೇಕು ಎನ್ನುವುದು ಅವರ ಉದ್ದೇಶ. ರವಿಯಂತಹ ಒಬ್ಬ ರೈತ ಸಿಕ್ಕರೂ ಸಾಕು, ಎಷ್ಟೋ ಭ್ರಷ್ಟ ಅಧಿಕಾರಿಗಳ ಬಣ್ಣ ಬಯಲಾಗುತ್ತದೆ. ದೇಶದಲ್ಲಿ ಭ್ರಷ್ಟಾಚಾರ ಇಂದು ಕ್ಯಾನ್ಸರ್ನಂತೆ ಹರಡಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಇಂತಹ ಲೂಟಿ ನಡೆಯುತ್ತಿದ್ದರೆ, ಹಳ್ಳಿಯನ್ನು ಉಳಿಸುವುದು ಹೇಗೆ? ಯಾರೂ ಪ್ರಶ್ನಿಸುವುದಿಲ್ಲ ಎಂದು ತಿಳಿಯಬೇಡಿ, ಕನಿಷ್ಠ ಒಬ್ಬ ರೈತನಾದರೂ ಪ್ರಶ್ನಿಸಬಲ್ಲ ಎಂಬುದನ್ನು ರವಿ ಸಾಬೀತುಪಡಿಸಿದ್ದಾರೆ.
₹32,000 ಶುಲ್ಕ ಕೇಳಿದ್ದು ಅಧಿಕಾರಿಗಳ ಕುತಂತ್ರವಿರಬಹುದು. ರೈತನನ್ನು ಹಾದಿ ತಪ್ಪಿಸುವ ಸ್ಕೆಚ್ ಇರಬಹುದು. ಆದರೆ ರವಿ ತನ್ನ ಹಸುವನ್ನೇ ತ್ಯಾಗ ಮಾಡಿ ಭ್ರಷ್ಟರಿಗೆ ಪಾಠ ಕಲಿಸಲು ಮುಂದಾಗಿದ್ದಾರೆ. ಅವರ ಈ ಹೋರಾಟಕ್ಕೆ ನಾವು ಬೆಂಬಲ ನೀಡಬೇಕು.
https://www.newsics.com/2026/04/17/16-people