newsics.com
ಹಾಸನ: ಸಕಲೇಶಪುರ ತಾಲ್ಲೂಕಿನ ಆಚಂಗಿ-ದೊಡ್ಡಸಾಗರ ಬಳಿ ರೈಲ್ವೆ ಹಳಿ ಮೇಲೆ ಭೂಕುಸಿತ ಉಂಟಾಗಿ ಬೆಂಗಳೂರು-ಮಂಗಳೂರು ನಡುವಿನ ರೈಲುಗಳ ಸಂಚಾರ ಸ್ಥಗಿತವಾಗಿದೆ. ಯಶವಂತಪುರ-ಕಾರವಾರ ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಶುಕ್ರವಾರ ವ್ಯತ್ಯಯವುಂಟಾಗಿದೆ.
ಕಳೆದ ಒಂದು ವಾರದ ಹಿಂದೆ ಇದೇ ಜಾಗದಲ್ಲಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿತ್ತು. ಮಣ್ಣು ತೆರವು ಕಾರ್ಯಾಚರಣೆ ಮುಗಿದು ರೈಲ್ವೆ ಸಂಚಾರ ಆರಂಭವಾದ ಬಳಿಕ ಇದೀಗ ಮತ್ತೆ ಮಣ್ಣು ಕುಸಿದು ಯಶವಂತಪುರ-ಕಾರವಾರ ಎಕ್ಸ್ಪ್ರೆಸ್ ರೈಲು ಕಳೆದ ಎರಡು ಗಂಟೆಯಿಂದ ಬಾಳ್ಳುಪೇಟೆ ಬಳಿ ನಿಂತಿದೆ.
ವರಮಹಾಲಕ್ಷ್ಮೀ ಹಬ್ಬಕ್ಕೆ ತೆರಳುತ್ತಿದ್ದ ಪ್ರಯಾಣಿಕರು ರೈಲು ಸಂಚಾರ ಸ್ಥಗಿತವಾಗಿದ್ದರಿಂದ ನೂರಾರು ಪ್ರಯಾಣಿಕರು ಪರದಾಡಿದ್ದಾರೆ. ಘಟನಾ ಸ್ಥಳಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದು ಪರಿಶೀಲನೆ ಮಾಡಿದ್ದಾರೆ.
ಜುಲೈ 26 ರಂದು ಹಾಸನ ಜಿಲ್ಲೆಯ ಎಡಕುಮೇರಿ ಹಾಗೂ ಕಡಗರವಳ್ಳಿ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿ 12 ರೈಲುಗಳು ರದ್ದುಗೊಂಡಿತ್ತು. ಬಳಿಕ ಇದನ್ನು ಸಮರೋಪಾದಿಯಲ್ಲಿ ಹಗಲು ರಾತ್ರಿ ಶ್ರಮವಹಿಸಿ ರೈಲ್ವೆ ವಲಯವು ಸರಿಪಡಿಸಿತ್ತು. ಆಗಸ್ಟ್ 8 ರಿಂದ ಮತ್ತೆ ರೈಲು ಸೇವೆ ಆರಂಭಗೊಂಡಿತ್ತು. ಇದಾಗಿ ಎರಡೇ ದಿನಕ್ಕೆ ಮತ್ತೆ ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಬಳ್ಳುಪೇಟೆ ಬಳಿ ಗುಡ್ಡ ಕುಸಿದು ರೈಲ್ವೆ ಹಳಿ ಮೇಲೆ ಬಿದ್ದಿತ್ತು. ಇದರಿಂದಾಗಿ ಈಗ ಮತ್ತೆ ರೈಲು ಸೇವೆ ಬಾಧಿತವಾಗಿತ್ತು. ಆದರೆ ಇದೀಗ ಮತ್ತೆ ಭೂಕುಸಿತ ಪುನರಾವರ್ತನೆಯಾಗಿದ್ದು, ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.