ರಜನಿಕಾಂತ್ ನಟನೆಯ ‘ಜೈಲರ್’ ಚಿತ್ರದಲ್ಲಿ ತೆಲುಗು ನಟ ಪವನ್ ಕಲ್ಯಾಣ್ ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ ಎಂದು ಗುಲ್ಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿಯಿಲ್ಲ. ಇದೇ ಚಿತ್ರದಲ್ಲಿ ಶಾರುಖ್ ಖಾನ್ ಗೆಸ್ಟ್ ಅಪಿಯರೆನ್ಸ್ ಮಾಡ್ತಾರೆ ಎಂದು ಸುದ್ದಿ ಆಗಿತ್ತು. ಅದು ಸುಳ್ಳು ಎನ್ನಲಾಗ್ತಿದೆ. ಕಿಂಗ್ ಖಾನ್ ಅವರನ್ನು ಸಂಪರ್ಕಿಸಿದ್ದು ನಿಜ ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗುತ್ತಿಲ್ಲ ಎನ್ನಲಾಗ್ತಿದೆ.
ಸದ್ಯ ರಾಜಕೀಯರಂಗದಲ್ಲಿ ಸಕ್ರಿಯರಾಗಿರುವ ಪವನ್ ಕಲ್ಯಾಣ್ ಯಾವುದೇ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ಜನಸೇವೆಯಲ್ಲಿ ಹೆಚ್ಚು ಸಮಯ ವ್ಯಯಿಸುತ್ತಿರುವುದರಿಂದ ಸಿನಿಮಾಗಳಲ್ಲಿ ನಟಿಸುವಷ್ಟು ಪುರಸೊತ್ತು ಇಲ್ಲ ಎನ್ನಲಾಗ್ತಿದೆ. ಈಗಾಗಲೇ ಕೆಲ ನಿರ್ದೇಶಕರು ಅವರನ್ನು ಸಂಪರ್ಕಿಸಿ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಯಾವುದಕ್ಕೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.
ಅಂದಹಾಗೆ 2 ವರ್ಷಗಳ ಹಿಂದೆ ‘ಜೈಲರ್’ ಚಿತ್ರದಲ್ಲಿ ಬಾಲಕೃಷ್ಣ ಅವರನ್ನು ಅತಿಥಿ ಪಾತ್ರದಲ್ಲಿ ತೋರಿಸಲು ನೆಲ್ಸನ್ ಪ್ರಯತ್ನಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಹಾಗಾಗಿ ಸೀಕ್ವೆಲ್ನಲ್ಲಿ ಬಾಲಯ್ಯ ಅಬ್ಬರಿಸುತ್ತಾರೆ ಎನ್ನುವ ಮಾತುಗಳು ಕೇಳಿಬಂತು. ಸಂಭಾವನೆ ವಿಚಾರಕ್ಕೆ ಬಾಲಕೃಷ್ಣ ನಟಿಸುತ್ತಿಲ್ಲ ಎನ್ನುವ ಊಹಾಪೋಹ ಕೇಳಿಬಂತು. ಬಳಿಕ ಅದೇ ಪಾತ್ರ ಶಾರುಖ್ ಖಾನ್ ಮಾಡ್ತಾರೆ ಎನ್ನಲಾಗಿತ್ತು. ಆದರೆ ಈ ಪವನ್ ಕಲ್ಯಾಣ್ ಹೆಸರು ಕೇಳಿಬರ್ತಿದೆ.
ಇತ್ತೀಚೆಗೆ ಪವನ್ ನಟಿಸಿದ ಸಿನಿಮಾಗಳೆಲ್ಲಾ ಸೋತಿವೆ. ಒಂದೇ ವರ್ಷದ ಅಂತರದಲ್ಲಿ ‘ಹರಿಹರ ವೀರಮಲ್ಲು’, ‘OG’ ಹಾಗೂ ‘ಉಸ್ತಾದ್ ಭಗತ್ ಸಿಂಗ್’ ಚಿತ್ರಗಳು ತೆರೆಗೆ ಬಂದಿತ್ತು. ಭಾರೀ ಓಪನಿಂಗ್ ಸಿಕ್ಕರೂ ಮಿಶ್ರಪ್ರತಿಕ್ರಿಯೆ ಕಾರಣಕ್ಕೆ ಸಿನಿಮಾಗಳು ಗೆಲ್ಲಲಿಲ್ಲ. 4 ವರ್ಷಗಳ ಹಿಂದೆ ಪವನ್ ಒಪ್ಪಿಕೊಂಡಿದ್ದ ಸಿನಿಮಾಗಳಿವು. ಆಂಧ್ರ ಚುನಾವಣೆ ಹಿನ್ನೆಲೆಯಲ್ಲಿ ಅರ್ಧಕ್ಕೆ ನಿಲ್ಲಿಸಿಬಿಟ್ಟಿದ್ದರು. ಚುನಾವಣೆಯಲ್ಲಿ ಗೆದ್ದು ಆಂಧ್ರ ಡಿಸಿಎಂ ಪಟ್ಟ ಅಲಂಕರಿಸಿದ ಒಂದು ವರ್ಷದ ಬಳಿಕ ಮತ್ತೆ ಸಿನಿಮಾಗಳಲ್ಲಿ ಪವನ್ ನಟಿಸಿದರು.
ಅರ್ಧಕ್ಕೆ ನಿಲ್ಲಿಸಿದ್ದ ಸಿನಿಮಾಗಳನ್ನು ಕಂಪ್ಲೀಟ್ ಮಾಡಿ ಬಿಡುಗಡೆಗೆ ಬೆಂಬಲಿಸಿದ್ದರು. ಸದ್ಯ ಯಾವುದೇ ಸಿನಿಮಾ ಒಪ್ಪಿಕೊಳ್ಳದ ಪವರ್ ಸ್ಟಾರ್ ಈಗ ರಜನಿಕಾಂತ್ ಜೊತೆ ‘ಜೈಲರ್’-2 ಚಿತ್ರದಲ್ಲಿ ನಟಿಸ್ತಾರಾ? ಎನ್ನುವ ಅನುಮಾನ ಕಾಡ್ತಿದೆ. ಸೂಪರ್ ಸ್ಟಾರ್ ಹಾಗೂ ಪವರ್ ಸ್ಟಾರ್ ತೆರೆ ಹಂಚಿಕೊಂಡರೆ ಅಭಿಮಾನಿಗಳಿಗೆ ಹಬ್ಬವೇ ಸರಿ. ಆದರೆ ಅದು ಅಷ್ಟು ಸುಲಭವಲ್ಲ.
ನೆಲ್ಸನ್ ನಿರ್ದೇಶನದ ‘ಜೈಲರ್’-2 ಸಿನಿಮಾ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಶಿವಣ್ಣ ಹಾಗೂ ಮೋಹನ್ ಲಾಲ್ ಮತ್ತೆ ರಜನಿಕಾಂತ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಪವನ್ ಕಲ್ಯಾಣ್ ಕೂಡ ಕೈಜೋಡಿಸಿದರೆ ಬಾಕ್ಸಾಫೀಸ್ ಶೇಕ್ ಆಗುವುದು ಗ್ಯಾರಂಟಿ.
ಸೆಪ್ಟೆಂಬರ್ ವೇಳೆಗೆ ‘ಜೈಲರ್’-2 ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಆ ಬಳಿಕ ಕಮಲ್ ಹಾಸನ್ ಜೊತೆ ತಲೈವಾ ಕೈಜೋಡಿಸಲಿದ್ದಾರೆ. ಆ ಚಿತ್ರಕ್ಕೂ ನೆಲ್ಸನ್ ಆಕ್ಷನ್ ಕಟ್ ಹೇಳಲಿದ್ದಾರೆ. ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಇರಲಿದೆ.