ಬಾಲಿವುಡ್ ನಟಿ ಜಾನ್ವಿ ಕಪೂರ್ 2018ರಿಂದ ಸತತವಾಗಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಲವು ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡರೆ, ಇನ್ನು ಕೆಲವು ವಿಫಲವಾಗಿವೆ. ಆದರೂ, ತಮ್ಮ ನಟನೆ ಮತ್ತು ಸೌಂದರ್ಯದಿಂದ ಲಕ್ಷಾಂತರ ಜನರ ಹೃದಯ ಗೆದ್ದಿದ್ದಾರೆ. ಆದರೆ, ಅವರ ಈ ಪಯಣ ಅಷ್ಟು ಸುಲಭವಾಗಿರಲಿಲ್ಲ. ಒಂದು ಸಮಯದಲ್ಲಿ ತಾನು ಖಿನ್ನತೆಗೆ ಒಳಗಾಗಿದ್ದೆ ಎಂದು ಅವರೇ ಹೇಳಿಕೊಂಡಿದ್ದಾರೆ..
ಇತ್ತೀಚೆಗೆ ಪಾಡ್ಕಾಸ್ಟ್ ಒಂದರಲ್ಲಿ ಮಾತನಾಡಿದ ಜಾನ್ವಿ, ‘ಧಡಕ್’ ಬಿಡುಗಡೆಯಾದ ನಂತರ ತಾನು ಖಿನ್ನತೆಗೆ ಜಾರಿದ್ದೆ ಎಂದು ಹೇಳಿದ್ದಾರೆ. ಜನ ತನ್ನನ್ನು ಇಷ್ಟಪಡುವುದಿಲ್ಲ ಎಂದು ಅವರಿಗೆ ಅನಿಸಿತ್ತಂತೆ.
ಜಾನ್ವಿ, ‘ಯಾರೇ ನನ್ನ ಮೊದಲ ಸಿನಿಮಾ ‘ಧಡಕ್’ ಬಗ್ಗೆ ಮಾತನಾಡಿದರೂ, ನಾನು ಅದರಲ್ಲಿ ಚೆನ್ನಾಗಿ ನಟಿಸಿದ್ದೆ ಮತ್ತು ಸಿನಿಮಾ ಹಿಟ್ ಆಯಿತು ಎನ್ನುತ್ತಾರೆ. ಆದರೆ ನನ್ನ ನೆನಪುಗಳು ಬೇರೆಯೇ ಇವೆ. ಆ ಸಮಯದಲ್ಲಿ ನಾನು ಖಿನ್ನತೆಯಲ್ಲಿದ್ದೆ. ನಾನು ಮುಗಿದು ಹೋದೆ, ಜನ ನನ್ನನ್ನು ದ್ವೇಷಿಸುತ್ತಾರೆ ಎಂದು ಅನಿಸಿತ್ತು’ ಎಂದು ಹೇಳಿದ್ದಾರೆ. ತಾಯಿ ಶ್ರೀದೇವಿ (Sridevi) ಅವರ ನಿಧನದ ನಂತರ ತಾನು ಭಾವನಾತ್ಮಕವಾಗಿ ತುಂಬಾ ದುರ್ಬಲಳಾಗಿದ್ದೆ ಎಂದು ನಟಿ ಹೇಳಿದ್ದಾರೆ.
ತಾಯಿಯಿಂದ ಸಿಗುತ್ತಿದ್ದ ಆತ್ಮವಿಶ್ವಾಸವನ್ನು ಈಗ ಪ್ರೇಕ್ಷಕರಿಂದ ನಿರೀಕ್ಷಿಸುತ್ತಿದ್ದೆ. ಆದರೆ, ಎಲ್ಲ ಕಡೆಯಿಂದ ನಿರೀಕ್ಷಿತ ಪ್ರತಿಕ್ರಿಯೆ ಸಿಗದಿದ್ದಾಗ, ನೆಗೆಟಿವ್ ವಿಷಯಗಳತ್ತ ಮಾತ್ರ ಗಮನ ಹರಿಸಲು ಶುರುಮಾಡಿದೆ ಎಂದಿದ್ದಾರೆ. ‘ನಾನು ಕೇವಲ ನೆಗೆಟಿವ್ ವಿಷಯಗಳ ಮೇಲೆ ಗಮನ ಹರಿಸುತ್ತಿದ್ದೆ. ‘ಧಡಕ್’ ಒಂದು ಯಶಸ್ವಿ ಚಿತ್ರ ಎಂಬುದು ನನಗೆ ಅರ್ಥವಾಗಲೇ ಇಲ್ಲ. ನಾನು ಚೆನ್ನಾಗಿ ನಟಿಸಿಲ್ಲ, ಜನ ನನ್ನನ್ನು ಇಷ್ಟಪಡುವುದಿಲ್ಲ ಎಂದೇ ಭಾವಿಸಿದ್ದೆ’ ಎಂದು ಜಾನ್ವಿ ಹೇಳಿದ್ದಾರೆ.
ಬೆಳಗ್ಗೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದಿದ್ದ ಯುವತಿಯೇ ರಾತ್ರಿ ಉಲ್ಟಾ!