https://youtube.com/shorts/1QBsT4fM7Oc?si=2UevBtM7l5058Pmp
Subscribe ನ್ಯೂಸಿಕ್ಸ್ ಕನ್ನಡ
newsics.com
ಚಾಮರಾಜನಗರ: ಶಿವರಾತ್ರಿ ಜಾತ್ರೆಯ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದೆ.
ಅರಣ್ಯ ಇಲಾಖೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಭಕ್ತರ ಸುರಕ್ಷತೆಗಾಗಿ ಜಿಲ್ಲಾಡಳಿತವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ.
ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತಸಾಗರವೇ ಹರಿದುಬರುತ್ತಿದೆ.
ಆದರೆ, ದಟ್ಟ ಅರಣ್ಯದ ನಡುವೆ ಸಾಗುವ ಪಾದಯಾತ್ರಿಗಳ ಮೇಲೆ ಮತ್ತೆ ಚಿರತೆ ದಾಳಿ ನಡೆಸಿರುವುದು ಭಕ್ತರಲ್ಲಿ ಆತಂಕ ಮೂಡಿಸಿದೆ.
ಅದೃಷ್ಟವಶಾತ್ ಅರಣ್ಯ ಇಲಾಖೆಯ ಸಮಯಪ್ರಜ್ಞೆಯಿಂದ ಪಾದಯಾತ್ರೆ ಹೊರಟಿದ್ದ ಬಾಲಕನೊಬ್ಬ ಚಿರತೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.
ಮಹದೇಶ್ವರ ಬೆಟ್ಟದ ಪಾದಯಾತ್ರೆಯ ಹಾದಿಯಲ್ಲಿ ಬಾಲಕನೊಬ್ಬನ ಮೇಲೆ ಚಿರತೆ ಹಠಾತ್ ದಾಳಿ ನಡೆಸಿದೆ. ತಕ್ಷಣವೇ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ ‘ಏರ್ ಗನ್’ ಮೂಲಕ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಏರ್ ಗನ್ನ ಭೀಕರ ಶಬ್ದಕ್ಕೆ ಹೆದರಿದ ಚಿರತೆ ಬಾಲಕನನ್ನು ಬಿಟ್ಟು ಕಾಡಿನೊಳಗೆ ಓಡಿ ಹೋಗಿದೆ.
ಸದ್ಯ ಈ ಭಾಗದಲ್ಲಿ ಅರಣ್ಯ ಇಲಾಖೆ ತೀವ್ರ ನಿಗಾ ವಹಿಸಿದ್ದು, ಪಾದಯಾತ್ರಿಗಳಿಗೆ ಕಾಡಿನ ಒಳಗಿನ ‘ಬಸವನ ಹಾದಿ’ಯ ಬದಲು ರಸ್ತೆಯ ಮಾರ್ಗದಲ್ಲಿ ಸಾಗುವಂತೆ ಸೂಚನೆ ನೀಡಲಾಗಿದೆ. ಈ ಚಿರತೆಯನ್ನು ಸೆರೆಹಿಡಿಯಲು ಇಲಾಖೆ ಪ್ಲಾನ್ ಮಾಡಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಏಳಗಳ್ಳಿ ಗ್ರಾಮ ಹಾಗೂ ಸಂಗಮದ ಮೂಲಕ ಸಾವಿರಾರು ಭಕ್ತರು ಕಾವೇರಿ ನದಿ ದಾಟಿ ಚಾಮರಾಜನಗರ ಜಿಲ್ಲೆಯನ್ನು ಪ್ರವೇಶಿಸುತ್ತಿದ್ದಾರೆ. ಸಾವಿರಾರು ಭಕ್ತರು ಏಕಕಾಲದಲ್ಲಿ ನದಿ ದಾಟುತ್ತಿರುವ ದೃಶ್ಯ ಯಾವುದೋ ಕುಂಭಮೇಳದಂತೆ ಭಾಸವಾಗುತ್ತಿದೆ.
ಭಕ್ತರ ಅನುಕೂಲಕ್ಕಾಗಿ ಕಾವೇರಿ ನೀರಾವರಿ ನಿಗಮವು ನದಿಯಲ್ಲಿ ನೀರಿನ ಮಟ್ಟವನ್ನು ಕಡಿಮೆ ಮಾಡಿದ್ದು, ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಭಕ್ತರನ್ನು ಸುರಕ್ಷಿತವಾಗಿ ನದಿ ದಾಟಿಸುತ್ತಿದ್ದಾರೆ.
ವನ್ಯಜೀವಿಗಳ ದಾಳಿಯ ಭೀತಿ ಇರುವುದರಿಂದ ಚಾಮರಾಜನಗರ ಜಿಲ್ಲಾಧಿಕಾರಿ ಶ್ರೀರೂಪಾ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ.
ವಾಹನ ಸಂಚಾರ ನಿರ್ಬಂಧ: ಮಹದೇಶ್ವರ ಬೆಟ್ಟಕ್ಕೆ ಮುಂದಿನ ಮೂರು ದಿನಗಳ ಕಾಲ ಬೈಕ್ ಮತ್ತು ತ್ರಿಚಕ್ರ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಸಮಯದ ಮಿತಿ:
ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಅರಣ್ಯ ಮಾರ್ಗದಲ್ಲಿ ಪಾದಯಾತ್ರೆಗೆ ಅವಕಾಶ ನೀಡಲಾಗಿದೆ. ಸಂಜೆಯ ನಂತರ ಅರಣ್ಯ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಗುಂಪು ಪ್ರಯಾಣ ಕಡ್ಡಾಯ:
ಚಿರತೆ ಮತ್ತು ಹುಲಿಗಳ ಸಂಚಾರವಿರುವುದರಿಂದ ಭಕ್ತರು ಒಬ್ಬೊಬ್ಬರೇ ಓಡಾಡಬಾರದು. ಅರಣ್ಯ ವ್ಯಾಪ್ತಿಯಲ್ಲಿ ಮೂತ್ರ ವಿಸರ್ಜನೆ ಅಥವಾ ಬಹಿರ್ದೆಸೆಗೆ ಹೋಗುವಾಗಲೂ ಗುಂಪಾಗಿಯೇ ಇರಬೇಕು ಎಂದು ಎಚ್ಚರಿಕೆ ನೀಡಲಾಗಿದೆ.
ಸಂಜೆಯಾದ ಮೇಲೆ ನದಿ ದಡದಲ್ಲಿ ಉಳಿಯುವ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗಿನ ಹಾದಿಯಲ್ಲಿ ಗಸ್ತು ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ.
ಪ್ರತಿ ಹಂತದಲ್ಲೂ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ವನ್ಯಜೀವಿಗಳ ಆತಂಕದ ನಡುವೆಯೂ ‘ಮಾದಪ್ಪ’ನ ದರ್ಶನ ಪಡೆಯಲು ಭಕ್ತರು ಜಯಘೋಷ ಹಾಕುತ್ತಾ ಸಾಗುತ್ತಿದ್ದಾರೆ.