https://youtube.com/shorts/j6ilMdnEwVU?si=zmhmirtwo-4Y6IAU
Subscribe ನ್ಯೂಸಿಕ್ಸ್ ಕನ್ನಡ
newsics.com
ಸಿದ್ದಾಪುರದಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಜ್ಯೋತಿಷಿ ಕಮಲಾಕರ ಭಟ್ ಮತ್ತು ಸುಚಿತ್ರಾ ಹಿನ್ನೆಲೆ ಬಗೆದಷ್ಟೂ ಬಯಲಾಗುತ್ತಿವೆ.
ಸಾಮಾನ್ಯ ವ್ಯಕ್ತಿಯಾಗಿ ವೀಳ್ಯದೆಲೆ ಮತ್ತು ಕಡ್ಲೆಪುರಿ ಮಾರಾಟ ಮಾಡುತ್ತಿದ್ದ ಕಮಲಾಕರ ಭಟ್ ಕೋಟ್ಯಧಿಪತಿ ಜ್ಯೋತಿಷಿಯಾಗಿದ್ದು ಹೇಗೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.
ಕಮಲಾಕರ ಭಟ್ ಅವರ ಮೂಲ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ. 2005ರ ಮೊದಲು, ಅವರು ತಮ್ಮ ಊರು ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಡ್ಲೆಪುರಿ ಮತ್ತು ವೀಳ್ಯದೆಲೆಯನ್ನು ಮಾರಾಟ ಮಾಡುತ್ತಿದ್ದರು. ಆರ್ಥಿಕವಾಗಿ ಹಿಂದುಳಿದಿದ್ದ ಅವರು, ಇದ್ದಕ್ಕಿದ್ದಂತೆ 2005ರಲ್ಲಿ ಊರಿನಿಂದ ನಾಪತ್ತೆಯಾಗುತ್ತಾರೆ. ನಂತರ ಅವರು ಕೇರಳಕ್ಕೆ ತೆರಳಿ ಅಲ್ಲಿ ಜ್ಯೋತಿಷ್ಯ ಹಾಗೂ ವಶೀಕರಣ ಶಾಸ್ತ್ರವನ್ನು ಕಲಿತರೆಂದು ಹೇಳಲಾಗುತ್ತಿದೆ. ಕಲಿಕೆ ನಂತರ ಗ್ರಾಮಕ್ಕೆ ಮರಳಿ ಜ್ಯೋತಿಷ್ಯ ವೃತ್ತಿಯನ್ನು ಆರಂಭಿಸುತ್ತಾರೆ. ಆರಂಭದಲ್ಲಿ ಅಷ್ಟೇನೂ ಹೆಸರು ಮಾಡದಿದ್ದರೂ, ನಂತರ ಅವರು ಬೆಂಗಳೂರಿಗೆ ತೆರಳಿದ ಮೇಲೆ ಅವರ ಜೀವನದ ದಿಕ್ಕೇ ಬದಲಾಯಿತು.
ಬೆಂಗಳೂರಿನಲ್ಲಿ ಕೆಲವು ಟಿವಿ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ತಮ್ಮ ಪ್ರಚಾರವನ್ನು ಮಾಡಿಕೊಂಡ ಕಮಲಾಕರ ಭಟ್, ಅಲ್ಪಾವಧಿಯಲ್ಲೇ ಅಪಾರ ಜನಪ್ರಿಯತೆ ಗಳಿಸಿದರು. ಸುಮಾರು 10 ರಿಂದ 15 ವರ್ಷಗಳ ಅವಧಿಯಲ್ಲಿ ಅವರು ಕೋಟ್ಯಂತರ ರೂಪಾಯಿ ಸಂಪಾದಿಸಿ, ಬರಿಗೈಯಿಂದ ಕೋಟ್ಯಾಧಿಪತಿಯಾಗಿ ಬೆಳೆದರು. ಅವರ ಈ ಅಸಾಮಾನ್ಯ ಮತ್ತು ಅತಿ ವೇಗದ ಸಂಪಾದನೆಯು ಸಾರ್ವಜನಿಕರಲ್ಲಿ ಹಾಗೂ ಅವರ ಭಕ್ತರಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಹಣವನ್ನು ಕೇವಲ ಜ್ಯೋತಿಷ್ಯದ ಮೂಲಕವೇ ಗಳಿಸಲಾಯಿತೇ ಅಥವಾ ಬೇರೆ ಯಾವುದೇ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದರೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ.
ಕಮಲಾಕರ ಭಟ್ ಬೆಂಗಳೂರು, ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ತಮ್ಮ ಕಚೇರಿಗಳನ್ನು ತೆರೆದಿದ್ದರು. ಪ್ರತಿ ಕಚೇರಿಯಲ್ಲಿ 10 ರಿಂದ 15 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಅವರು ಕಚೇರಿ ನಡೆಸುತ್ತಿದ್ದ ಕಟ್ಟದ ಮಾಲೀಕರೂ ಮಾಹಿತಿ ನೀಡಿದ್ದಾರೆ. ತಿಂಗಳಿಗೆ ಸುಮಾರು ಮೂರರಿಂದ ನಾಲ್ಕು ಲಕ್ಷ ರೂಪಾಯಿಗಳನ್ನು ತಮ್ಮ ಕಚೇರಿ ನಿರ್ವಹಣೆ ಮತ್ತು ಸಿಬ್ಬಂದಿ ವೇತನಕ್ಕಾಗಿ ಖರ್ಚು ಮಾಡುತ್ತಿದ್ದರು ಎಂಬುದೂ ತಿಳಿದುಬಂದಿದೆ. ಇಷ್ಟು ದೊಡ್ಡ ಪ್ರಮಾಣದ ಖರ್ಚುಗಳನ್ನು ನಿಭಾಯಿಸಲು ಅವರಿಗೆ ತಿಂಗಳ ಆದಾಯ ಎಲ್ಲಿಂದ ಬರುತ್ತಿತ್ತು ಎಂಬ ಬಗ್ಗೆ ಈಗ ಚರ್ಚೆಯಾಗುತ್ತಿದೆ.
ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ತಾತ್ಕಾಲಿಕ ಬ್ರೇಕ್, ಸಂಸದ ತೇಜಸ್ವಿ ಸೂರ್ಯ ಹೇಳಿದ್ದೇನು?