newsics.com
1971ರಲ್ಲಿ ‘ವಂಶವೃಕ್ಷ’ ಸಿನಿಮಾ ಬಿಡುಗಡೆ ಆಯಿತು. ಎಸ್ಎಲ್ ಭೈರಪ್ಪ ಅವರು ಬರೆದ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿ ಆ ಸಿನಿಮಾ ಸಿದ್ಧವಾಗಿತ್ತು. ವಿಷ್ಣುವರ್ಧನ್ ಅವರು ನಟಿಸಿದ್ದ ಆ ಚಿತ್ರವನ್ನು ಬಿ.ವಿ. ಕಾರಂತ್ ಮತ್ತು ಗಿರೀಶ್ ಕಾರ್ನಾಡ್ ಅವರು ನಿರ್ದೇಶನ ಮಾಡಿದ್ದರು.
‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯನ್ನು ಆಧರಿಸಿ ಅದೇ ಹೆಸರಿನಲ್ಲಿ ಸಿನಿಮಾ ಮೂಡಿಬಂತು. ಆ ಚಿತ್ರ 1977ರಲ್ಲಿ ಬಿಡುಗಡೆ ಆಯಿತು. ಗಿರೀಶ್ ಕಾರ್ನಾಡ್ ಹಾಗೂ ಬಿ.ವಿ. ಕಾರಂತ್ ಅವರು ನಿರ್ದೇಶನ ಮಾಡಿದ್ದರು. ಬಾಲಿವುಡ್ ನಟ ನಸೀರುದ್ಧೀನ್ ಶಾ ಅವರು ಅಭಿನಯಿಸಿದ್ದರು.
ಟಿಎನ್ ಸೀತಾರಾಮ್ ಅವರು ‘ಮತದಾನ’ ಸಿನಿಮಾಗೆ ನಿರ್ದೇಶನ ಮಾಡಿದ್ದರು. ಭೈರಪ್ಪ ಅವರು ಬರೆದ ‘ಮತದಾನ’ ಕಾದಂಬರಿ ಆಧರಿಸಿ ಆ ಸಿನಿಮಾ ಸಿದ್ಧವಾಯಿತು. 2001ರಲ್ಲಿ ತೆರೆಕಂಡ ಆ ಚಿತ್ರದಲ್ಲಿ ಅನಂತ್ ನಾಗ್, ತಾರಾ, ದೇವರಾಜ್ ಮುಖ್ಯ ಭೂಮಿಕೆ ನಿಭಾಯಿಸಿದ್ದರು.
ಎಸ್ಎಲ್ ಭೈರಪ್ಪ ಅವರು ಬರೆದ ‘ನಾಯಿ ನೆರಳು’ ಕಾದಂಬರಿಯನ್ನು ಆಧರಿಸಿ ಅದೇ ಶೀರ್ಷಿಕೆಯಲ್ಲಿ ಗಿರೀಶ್ ಕಾಸರವಳ್ಳಿ ಅವರು ಸಿನಿಮಾ ನಿರ್ದೇಶನ ಮಾಡಿದರು. ಪವಿತ್ರಾ ಲೋಕೇಶ್ ಅವರು ಪ್ರಮುಖ ಪಾತ್ರ ಮಾಡಿದ್ದರು. 2006ರಲ್ಲಿ ‘ನಾಯಿ ನೆರಳು’ ಸಿನಿಮಾ ತೆರೆಕಂಡಿತು.
‘ಗೃಹಭಂಗ’, ‘ದಾಟು’ ಕಾದಂಬರಿಗಳನ್ನು ಆಧರಿಸಿ ಟಿವಿ ಸೀರಿಯಲ್ ಮಾಡಲಾಯಿತು. ಅಲ್ಲದೇ, ಎಸ್ಎಲ್ ಭೈರಪ್ಪ ಅವರು ಬರೆದ ‘ಪರ್ವ’ ಕಾದಂಬರಿಯನ್ನು ಆಧರಿಸಿ ಪ್ರಕಾಶ್ ಬೆಳವಾಡಿ ನಾಟಕ ನಿರ್ದೇಶಿಸಿದರು. ಈ ನಾಟಕ ಹಲವಾರು ಬಾರಿ ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ.
ಡಾ.ಎಸ್.ಎಲ್. ಭೈರಪ್ಪ ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತಾದ್ಯಂತ ಸಾಹಿತ್ಯಾಸಕ್ತರಿಗೆ ಚಿರಪರಿಚಿತ ಹೆಸರು. ಕನ್ನಡ ಕಾದಂಬರಿ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.
ಭೀಮಕಾಯ(1952), ಬೆಳಕು ಮೂಡಿತು(1959), ಧರ್ಮಶ್ರೀ – (1961), ದೂರ ಸರಿದರು(1967), ಮತದಾನ (1965), ವಂಶವೃಕ್ಷ(1965), ಜಲಪಾತ (1967), ನಾಯಿ ನೆರಳು (1968), ತಬ್ಬಲಿಯು ನೀನಾದೆ ಮಗನೆ(1968), ಗೃಹಭಂಗ(1970), ನಿರಾಕರಣ-(1971), ಗ್ರಹಣ-(1972), ದಾಟು (1973), ಅನ್ವೇಷಣ(1976), ಪರ್ವ(1979), ನೆಲೆ (1983), ಸಾಕ್ಷಿ (1986) ಅಂಚು-(1990), ತಂತು (1993), ಸಾರ್ಥ(1998), ಮಂದ್ರ(2001), ಆವರಣ(2007), ಕವಲು (2010), ಯಾನ (2014) ಉತ್ತರಕಾಂಡ-(2017).
ಭೈರಪ್ಪ ಅವರಿಗೆ 2010ರಲ್ಲಿ ಸರಸ್ವತಿ ಸಮ್ಮಾನ್, 2015ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್, 2016ರಲ್ಲಿ ಪದ್ಮಶ್ರೀ, ಮತ್ತು 2023ರಲ್ಲಿ ಪದ್ಮಭೂಷಣ ಪ್ರಶಸ್ತಿಗಳು ಲಭಿಸಿವೆ. ಭೈರಪ್ಪನವರ ಕಾದಂಬರಿಗಳು ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿದ್ದು, ಅನೇಕ ಸಾರ್ವಜನಿಕ ಚರ್ಚೆಗಳಿಗೆ ಕಾರಣವಾಗಿವೆ.
94 ವರ್ಷದ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರು ಒಬ್ಬ ಪ್ರಸಿದ್ಧ ಕನ್ನಡ ಕಾದಂಬರಿಕಾರ, ತತ್ವಜ್ಞಾನಿ ಮತ್ತು ಲೇಖಕರಾಗಿದ್ದು, 2023ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.