newsics.com
ಮೈಸೂರು; ತವರು ಜಿಲ್ಲಾ ಕೇಂದ್ರವಾದ ಮೈಸೂರಿನ ಮಹಾರಾಜ ಮೈದಾನದಲ್ಲಿ ಶನಿವಾರ ನಡೆದ ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅರ್ಧದಲ್ಲಿಯೇ ನಿರ್ಗಮಿಸಿದ್ದಕ್ಕೆ ಸಿಎಂ ಸಿದ್ದರಾಮಯ್ಯನವರು ವೇದಿಕೆಯಲ್ಲಿಯೇ ಬಹಿರಂಗವಾಗಿ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು.
ತಮ್ಮ ಭಾಷಣ ಆರಂಭಿಸುತ್ತಿದ್ದAತೆ ವೇದಿಕೆಯಲ್ಲಿ ಕುಳಿತ್ತಿದ್ದವರ ಹೆಸರು ಹೇಳುತ್ತಿದ್ದರು. ಆಗ ಒಬ್ಬರು ಸಿಎಂ ಬಳಿ ಬಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೆಸರೇಳುವಂತೆ ತಿಳಿಸಿದರು. ಇದರಿಂದ ಸಿಟ್ಟಾದ ಸಿದ್ದರಾಮಯ್ಯ, ವೇದಿಕೆಯಲ್ಲಿರುವವರ ಹೆಸರನ್ನು ಮಾತ್ರ ಹೇಳುತ್ತೇವೆ, ಬರದಿದ್ದರೆ, ಮನೆಗೆ ಹೋದವರಿಗೆ, ಮನೆಯಲ್ಲಿ ಕುಳಿತವರ ಹೆಸರನ್ನು ಹೇಳಲ್ಲ. ಡಿ.ಕೆ.ಶಿವಕುಮಾರ್ ಅವರು ಇಲ್ಲಿಗೆ ಬಂದು ಮಾತನಾಡಿ, ಬೆಂಗಳೂರಿನಲ್ಲಿ ಕೆಲಸವಿದೆ ಎಂದು ಹೇಳಿ ಹೋಗಿದ್ದಾರೆ. ಅವರು ಸಮಾವೇಶ ಮುಗಿಯುವ ತನಕ ಇರಬೇಕಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾಷಣ ಮೊಟಕು; ಸಮಾವೇಶ ಬೆಳಗ್ಗೆ ೧೧ ಗಂಟೆಗೆ ಆರಂಭವಾಗಬೇಕಾಗಿತ್ತು. ಆದರೆ ಬರೋ ಬರೀ ಎರಡುವರೆ ಗಂಟೆಗಳ ಕಾಲ ತಡವಾಗಿ ಆರಂಭವಾಯಿತು. ಸಮಾವೇಶಕ್ಕೆಂದು ಬಂದಿದ್ದ ಜನರ ಕಾಯುವಿಕೆಯ ತಾಳ್ಮೆ ಕೂಡ ಹೊರಟು ಹೋಗಿತ್ತು. ಸಿಎಂ ಸಿದ್ದರಾಮಯ್ಯನವರು ಭಾಷಣ ಮಾಡಲು ನಿಂತಾಗ ಮಧ್ಯಾಹ್ನ ೩ ಗಂಟೆಯಾಗಿತ್ತು. ಎಲ್ಲರಿಗೂ ಹೊಟ್ಟೆ ಚುರುಗುಟ್ಟುತ್ತಿದ್ದರಿಂದ ಜನರು ಸಮಾವೇಶದಿಂದ ಎದ್ದು ಹೋಗುತ್ತಿದ್ದರು. ಇದನ್ನು ನೋಡಿದ ಸಿದ್ದರಾಮಯ್ಯ ೨೦ ರಿಂದ ೨೫ ನಿಮಿಷ ಕೂರುವಂತೆ ಮನವಿ ಮಾಡಿದರೂ, ಕೆಲವರು ಎದ್ದು ಹೋಗುತ್ತಿದ್ದಕ್ಕೆ ಗರಂ ಆಗಿ, ನಿಮಗೋಸ್ಕರ ಈ ಕಾರ್ಯಕ್ರಮ ಮಾಡುತ್ತಿದ್ದೇವೆ ನೀವೇ ಎದ್ದು ಹೋದರೆ ಹೇಗೆ ಎಂದು ಪ್ರಶ್ನಿಸಿದರಲ್ಲದೆ, ಸುದೀರ್ಘ ಭಾಷಣವನ್ನು ಮೊಟಕು ಮಾಡಿದರು.