newsics.com
ಕಾಕಿನಾಡ (ಆಂಧ್ರಪ್ರದೇಶ): ಮಕ್ಕಳ ಶಾಲೆಯ ದುಬಾರಿ ಫೀಸ್ ಕಟ್ಟಲಾಗದ ತಂದೆಯೊಬ್ಬ ಬೇಸರಗೊಂಡು ತನ್ನಿಬ್ಬರು ಪುಟಾಣಿ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಆಂಧ್ರಪ್ರದೇಶದ ಕಾಕಿನಾಡದ ಸುಬ್ಬಾರಾವ್ ನಗರದಲ್ಲಿ ನಡೆದಿದೆ.
ಮೃತ ಮಕ್ಕಳನ್ನು ಜೋಶಿಲ್ (7 ವರ್ಷ), ನಿಖಿಲ್ (6) ಎಂದು ಗುರುತಿಸಲಾಗಿದೆ. ಜೋಶಿಲ್ ಎಂಬಾತ ಒಂದನೇ ತರಗತಿಯಲ್ಲಿ ಓದುತ್ತಿದ್ದು, ನಿಖಿಲ್ ಯುಕೆಜಿಯಲ್ಲಿ ಓದುತ್ತಿದ್ದ. ಇವರಿಬ್ಬರನ್ನು ಕೊಂದ ತಂದೆ ವಾನಪಳ್ಳಿ ಚಂದ್ರಕಿಶೋರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾಕಿನಾಡದ ವಕಲಪುಡಿ ಎಂಬಲ್ಲಿರುವ ಕೇಂದ್ರ ಸರ್ಕಾರದ ಒಎನ್ ಜಿಸಿ ಕಚೇರಿಯಲ್ಲಿ ಅಸಿಸ್ಟಂಟ್ ಅಕೌಂಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕಾಕಿನಾಡ ನಗರದ ಸುಬ್ಬಾ ರಾವ್ ನಗರದಲ್ಲಿರುವ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಾಗಿದ್ದರು.
ಕಳೆದ ವರ್ಷ, ಇಬ್ಬರೂ ಮಕ್ಕಳಿಗೂ 2 ಲಕ್ಷ ರೂ. ಶುಲ್ಕ ಕಟ್ಟಿದ್ದ ಚಂದ್ರಕಿಶೋರ್ ಅವರು, ಈ ವರ್ಷ ಆರ್ಥಿಕ ತೊಂದರೆಗೆ ಸಿಲುಕಿ ಫೀಸ್ ಕಟ್ಟಲಾರದೆ ಒದ್ದಾಡುತ್ತಿದ್ದರು.
ಇದೇ ವಿಚಾರಕ್ಕೆ ಚಂದ್ರಕಿಶೋರ್ ಹಾಗೂ ಅವರ ಪತ್ನಿ ತನುಜಾ ಅವರೊಂದಿಗೆ ನಿತ್ಯವೂ ಜಗಳವಾಗುತ್ತಿತ್ತು. ಇದರಿಂದ ಬೇಸತ್ತ ಚಂದ್ರಕಿಶೋರ್, ತನ್ನ ಮಕ್ಕಳನ್ನು ಬಕೆಟ್ನಲ್ಲಿ ಮುಳುಗಿಸಿ ಕೊಂದಿದ್ದಾನೆ ಎಂದು ಹೇಳಲಾಗಿದೆ.
ಈ ಘಟನೆ ಪತ್ನಿ ತನಜು ಮನೆಯಲ್ಲಿರಲಿಲ್ಲ. ಅವರು ಹೊರಗಡೆ ಹೋಗಿದ್ದರು. ಅವರು ಮನೆಗೆ ಬರುವಷ್ಟರಲ್ಲಿ ಹಗ್ಗದಿಂದ ಮಕ್ಕಳ ಕೈಕಾಲು ಕಟ್ಟಿದ ಚಂದ್ರಕಿಶೋರ್ ಇಬ್ಬರೂ ಮಕ್ಕಳನ್ನು ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಂದಿದ್ದಾರೆ.
ನಂತರ ಬೇಸರಗೊಂಡು ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೊರಗಡೆಯಿಂದ ಬಂದ ಪತ್ನಿ ತನುಜಾ ಅವರು, ಬಾಗಿಲು ಬಡಿದಿದ್ದು ಬಾಗಿಲು ಯಾರೂ ತೆಗೆದಿಲ್ಲ. ಬಾಗಿಲು ತಟ್ಟಿ ಸಾಕಾಗಿ ಬೆಡ್ ರೂಂ ಕಿಟಕಿಯಿಂದ ಬಂದು ಇಣುಕಿ ನೋಡಿದಾಗ ಅಲ್ಲಿ ಪತಿ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ಆಗ, ಅಕ್ಕಪಕ್ಕದ ಮನೆಯವರನ್ನು ಕೂಗಿ ಕರೆದ ತನುಜಾ, ಅವರ ನೆರವಿನಿಂದ ಬಾಗಿಲು ಒಡೆದು ಹೋಗಿ ನೋಡಿದಾಗ ಮಕ್ಕಳೂ ಸತ್ತು ಬಿದ್ದಿರುವುದು ಕಂಡುಬಂದಿದೆ.
ಚಂದ್ರಕಿಶೋರ್ ಡೆತ್ ನೋಟ್ ಬರೆದಿಟ್ಟಿದ್ದಾರೆ. ಅದರಲ್ಲಿ, ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಮಕ್ಕಳು ಒತ್ತಡದಲ್ಲಿ ಸಿಲುಕಿದ್ದಾರೆ. ಇದರಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಆದ್ದರಿಂದ ಅವರ ಜೀವನವನ್ನು ಮುಗಿಸಿದ್ದೇನೆ. ನನ್ನ ಜೀವನವನ್ನೂ ಮುಗಿಸಿಕೊಳ್ಳುತ್ತಿದ್ದೇನೆ’ ಎಂದು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದೇ ದಿನ ಎರಡು ಕಡೆ ಮಂಗಳಮುಖಿಯರ ಅಟ್ಟಹಾಸ, ಜತೆಗಿದ್ದವಳನ್ನೇ ಬೆತ್ತಲೆಗೊಳಿಸಿ, ಕೂದಲು ಕತ್ತರಿಸಿ ಕ್ರೌರ್ಯ
ಔರಂಗಜೇಬನ ಸಮಾಧಿ ವಿವಾದ: ನಾಗ್ಪುರ ಉದ್ವಿಗ್ನ, ಹಲವೆಡೆ ಬೆಂಕಿ, ಕಲ್ಲು ತೂರಾಟ