newsics.com
ಕೊಪ್ಪಳ: ದಲಿತರ ಮೇಲಿನ ದೌರ್ಜನ್ಯ ಕೇಸ್ ಗೆ ಸಂಬಂಧಿಸಿದಂತೆ 99 ಅಪರಾಧಿಗಳಿಗೆ ಜಾಮೀನು ಸಿಕ್ಕರೂ ರಿಲೀಸ್ ಭಾಗ್ಯ ಇಲ್ಲ ಎಂಬಂತಾಗಿದೆ.
ಹೌದು, ಪ್ರಕರಣದಲ್ಲಿ ಬರೋಬ್ಬರಿ 101 ಆರೋಪಿಗಳಿಗೆ ಕೋರ್ಟ್ ಶಿಕ್ಷೆ ವಿಧಿಸಿತ್ತು. ಅದರಲ್ಲಿ 98 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅಟ್ರಾಸಿಟಿ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ್ದು, ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಧಾರವಾಡ ಹೈಕೋರ್ಟ್ ಪೀಠ 99 ಅಪರಾಧಿಗಳಿಗೆ ಜಾಮೀನು ಮಂಜೂರು ಮಾಡಿದೆ. ಆದರೆ ಜಾಮೀನಿಗೆ ವಿಧಿಸಿರುವ ಷರತ್ತು ಪೂರೈಸಲು ಸಾಧ್ಯವಾಗದೇ ಕುಟುಂಬಗಳು ಪರದಾಡುತ್ತಿವೆ. ಹೀಗಾಗಿ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯ ಇಲ್ಲದಂತಾಗಿದೆ.
ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ 2014ರ ಆ.28 ರಂದು, ದಲಿತರ ಮೇಲೆ ದೌರ್ಜನ್ಯ ನಡೆದಿತ್ತು. ಈ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಕೊಪ್ಪಳದ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ 2024ರ ಅ.24ರಂದು ಬರೋಬ್ಬರಿ 101 ಆರೋಪಿಗಳನ್ನು ಅಪರಾಧಿಗಳು ಎಂದು ಆದೇಶ ಹೊರಡಿಸಿತ್ತು. ಜೊತೆಗೆ 98 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಕೊಪ್ಪಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಜೈಲುಪಾಲಾಗಿದ್ದವರ ಕುಟುಂಬಸ್ಥರು ಧಾರವಾಡ ಹೈಕೋರ್ಟ್ಗೆ ಮೊರೆ ಹೋಗಿದ್ದರು. ಧಾರವಾಡ ಹೈಕೋರ್ಟ್ ಪೀಠ ಜೀವಾವಧಿ ಶಿಕ್ಷೆಗೊಳಗಾಗಿದ್ದ ಎ1 ಆರೋಪಿ ಮಂಜುನಾಥ ಹೊರತುಪಡಿಸಿ, ಉಳಿದೆಲ್ಲರಿಗೂ ಜಾಮೀನು ನೀಡಿ ಆದೇಶ ಹೊರಡಿಸಿದೆ. ಜಾಮೀನು ಸಿಕ್ಕಿರುವುದು ಅಪರಾಧಿಗಳ ಕುಟುಂಬಸ್ಥರ ಸಂತಸ ಇಮ್ಮಡಿಗೊಳಿಸಿದೆ. ಆದರೆ ಜಾಮೀನಿಗೆ ವಿಧಿಸಿರುವ ಷರತ್ತುಗಳು ಅನೇಕ ಕುಟುಂಬಗಳನ್ನು ಕಂಗಾಲಾಗಿಸಿದೆ.