newsics.com
ಬಾಗಲಕೋಟೆ: ರಾಜ್ಯದಲ್ಲಿ ಇದೀಗ ವಕ್ಫ್ (Waqf) ಆಸ್ತಿ ವಿವಾದ ಭಾರೀ ಸದ್ದು ಮಾಡುತ್ತಿದೆ. ವಿಜಯಪುರದಿಂದ ಆರಂಭವಾದ ವಿವಾದ ರಾಜ್ಯಾದ್ಯಂತ ಹಬ್ಬಿದೆ.
ರೈತರ ಜಮೀನಿನಿಂದ ಆರಂಭವಾದ ಈ ವಕ್ಫ್ ಆಸ್ತಿ ವಿವಾದ ಬಳಿಕ ಮಠಕ್ಕೆ ಹಾಗೂ ಹಿಂದೂ ದೇವಾಲಯಗಳಿಗೂ ನೋಟಿಸ್ ನೀಡುವ ಮೂಲಕ ಆತಂಕ ಹೆಚ್ಚಿಸಿತ್ತು.
ಇದೀಗ, ಬಾಗಲಕೋಟೆಯ ಸರ್ಕಾರಿ ಕಚೇರಿಯ ಜಾಗದ ಪಹಣಿಯಲ್ಲೂ ವಕ್ಫ್ ಎಂದು ಉಲ್ಲೇಖವಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಬಾಗಲಕೋಟೆಯಲ್ಲಿ ಸರಕಾರಿ ಕಚೇರಿ ಜಾಗದ ಪಹಣಿಯಲ್ಲಿ ವಕ್ಪ್ ಆಸ್ತಿ ಎಂದು ಉಲ್ಲೇಖಿಸಲಾಗಿದೆ. ಬಾದಾಮಿ ಪಟ್ಟಣದ ಮಲಪ್ರಭಾ ಎಡದಂಡೆ ಕಾಲುವೆ ಇಂಜಿನಿಯರಿಂಗ್ ಕಚೇರಿ ಹಾಗೂ ನಿರ್ಮಾಣ ಹಂತದ ಮಿನಿ ವಿಧಾನಸೌಧ ಕಟ್ಟಡದ ಪಹಣಿಯಲ್ಲಿ ವಕ್ಪ್ ಆಸ್ತಿ ಎಂದು ನಮೂದು ಮಾಡಲಾಗಿದೆ. ಕಬ್ಜದಾರರು, ಸ್ವಾಧೀನದಾರರ ಕಾಲಂ ನಂ 9ರಲ್ಲಿ ವಕ್ಪ್ ಆಸ್ತಿ ಎಂದು ಉಲ್ಲೇಖಿಸಲಾಗಿದೆ.
ಸರ್ವೆ ನಂ 192 ರಲ್ಲಿನ ಮಿನಿ ವಿಧಾನಸೌಧ, ಮಲಪ್ರಭಾ ಎಡದಂಡೆ ಕಾಲುವೆ ಇಂಜಿನಿಯರಿಂಗ್ ವಿಭಾಗದ ಕಚೇರಿಯ ಜಾಗದ ಪಹಣಿಯಲ್ಲಿ ವಕ್ಫ್ ಎಂದು ನಮೂದಿಸಲಾಗಿದೆ. ಇದರ ಬೆನ್ನಲ್ಲೆ ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಂಪೇನ್ ಕೂಡ ಆರಂಭವಾಗಿದ್ದು, ‘ಪ್ರತಿಯೊಬ್ಬ ರೈತರು ಹಾಗೂ ಕಮರ್ಷಿಯಲ್ ನಿವೇಶನ ಉಳ್ಳವರು ಪಹಣಿ ಚೆಕ್ ಮಾಡಿಕೊಳ್ಳಿ, ಯಾವ ಜಾಗದಲ್ಲಿ ವಕ್ಪ್ ಬೋರ್ಡ್ ಹೆಸರು ದಾಖಲಾಗಿರುತ್ತದೆಯೋ ದೇವರೇ ಬಲ್ಲ’ ಎಂದು ಕ್ಯಾಂಪೇನ್ ಆರಂಭವಾಗಿದೆ.
ಧರಣಿ ಸ್ಥಳದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಜಮೀರ್ ಬಂದು ಹೋದ ಮೇಲೆ ದಿಢೀರ್ ಆಗಿ ರೈತರ ಜಮೀನಿನಲ್ಲಿ ವಕ್ಫ್ ನೋಂದಣಿಯಾಗಿವೆ. ಜಮೀರ್ ಡಿಸಿ, ಎಸಿಗೆ ಧಮ್ಕಿ ಹಾಕಿದ್ದಾರೆ. ನನ್ನನ್ನು ಸಿಎಂ ಕಳಿಸಿದ್ದಾರೆ ಎಂದು ಧಮ್ಕಿ ಹಾಕಿದ್ದಾರೆ. ಜಮೀರ್ ಬಂದು ಹೋದ ಮೇಲೆ ಕ್ಯಾನ್ಸರ್ ರೋಗ ಬಂದ ಪರಿಸ್ಥಿತಿ ಉಂಟಾಗಿದೆ ಎಂದು ಸಚಿವರ ವಿರುದ್ಧ ಆರೋಪ ಮಾಡಿದರು.
ಢವಳಗಿ ಮಠದ 19 ಎಕರೆ ಇವತ್ತು ಖಬರಸ್ತಾನ್ ಆಗಿದೆ. ದಾನ ಮಾಡಿದ ಜಾಗ ಈಗ ವಕ್ಫ್ ಆಗಿದೆ. ವಕ್ಫ್ ವ್ಯಾಪ್ತಿ ಹೆಚ್ಚಾಗುತ್ತಾ ಹೋಗಿದೆ, ರಾಜ್ಯದಲ್ಲೂ ವಕ್ಫನ ಜಾಗ ವಿಸ್ತಾರವಾಗ್ತಿದೆ. 1 ಲಕ್ಷ ಎಕರೆ ಇದ್ದದ್ದು 6 ಲಕ್ಷ ದಾಟುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿ ಕಚೇರಿಯಿಂದ ನೋಟಿಸ್ ಹೋಗ್ತಿವೆ. ಜಿಲ್ಲಾಡಳಿತದಿಂದ ರೈತರ ಬಳಿ ದಾಖಲೆ ಕೇಳ್ತಿದ್ದಾರೆ. ಇಷ್ಟು ಆಸ್ತಿ ಸೇರಿಸಿ ಎಂದು ಮುಖ್ಯ ಕಾರ್ಯದರ್ಶಿಗಳಿಂದ ಆದೇಶ ಬಂದಿದೆ ಎಂದು ಯತ್ನಾಳ್ ದೂರಿದರು.
ಮುಸ್ಲಿಂ ಎಜೆಂಟ್ ಪಕ್ಷಗಳು ದೇಶದಲ್ಲಿವೆ, ಅವು ಈಗ ನಮ್ಮನ್ನ ಪ್ರಶ್ನೆ ಕೇಳ್ತಿವೆ. ರೈತರನ್ನ ಕೇಳದೆ ವಕ್ಫ್ ಹೆಸರು ಸೇರ್ಪಡೆಯಾಗಿವೆ. ಇಂಡಿಯಲ್ಲಿ ರಾತ್ರೋರಾತ್ರಿ ಇಡೀ ಊರು ವಕ್ಫ್ ಆಗಿತ್ತು, ನಾನು ಕಾಲ್ ಮಾಡಿದ ಮೇಲೆ ಬೆಳಗ್ಗೆ ವಕ್ಫ್ ಹೆಸರು ಕ್ಲೀಯರ್ ಮಾಡಿದ್ದಾರೆ. ಇದು ಸಿದ್ದರಾಮಯ್ಯ ಹಾಗೂ ಜಮೀರ್ ಷಡ್ಯಂತ್ರ. ಕುರುಬರ ಸ್ವಾಮೀಜಿಗಳೇ ಸಿದ್ದರಾಮಯ್ಯ ವರ್ತನೆಗೆ ಶಾಕ್ ಆಗಿದ್ದಾರೆ. ಕುರುಬರ ದೇಗುಲಗಳನ್ನೂ ವಕ್ಪ್ ಮಾಡಿದ್ದಾರೆ ಎಂದರು.