newsics.com
ದೀಪಾವಳಿಯ ನರಕಚತುರ್ದಶಿಯಂದು ಮಾತ್ರ ಯಮರಾಜನಿಗೆ ಪೂಜೆ ಸಲ್ಲಿಸಲಾಗುತ್ತದೆ. ಆಯುಷ್ಯ, ಒಳಿತಿಗಾಗಿ ನರಕ ಚತುರ್ದಶಿಯಂದು ಯಮ ದೇವರ ಪೂಜೆಯನ್ನು ಮಾಡಲಾಗುತ್ತದೆ. ನರಕ ಚತುರ್ದಶಿಯಂದು ಯಮನ ಆರಾಧನೆ ನಡೆಯುತ್ತದೆ.
ನರಕ ಚತುರ್ದಶಿಯ ಆಚರಣೆಯಲ್ಲಿ ಪ್ರಮುಖವಾಗಿರುವುದು ಯಮನ ಪೂಜೆ. ದೀರ್ಘಾಯುಷ್ಯ ಮತ್ತು ಪಾಪ ಕರ್ಮಗಳ ನಿವಾರಣೆಗೆ ಈ ದಿನ ಯಮನಿಗೆ ದೀಪ ಹಚ್ಚಿ ಬೆಳಗುವ ಮೂಲಕ ಪ್ರಾರ್ಥನೆ ಸಲ್ಲಿಸಲಾಗುತ್ತದೆ.
ನರಕ ಚತುರ್ದಶಿಯಂದು ಹಚ್ಚುವ ಈ ದೀಪ ಅತ್ಯಂತ ಮಹತ್ವ ಹೊಂದಿದ್ದು, ಯಮ ದೀಪ ಹಚ್ಚುವಾಗ ಕೆಲ ವಿಧಿ-ವಿಧಾನಗಳನ್ನು ಅನುಸರಿಸಲೇಬೇಕು.
ದೀಪ ಹಚ್ಚುವ ಸಮಯ
ನರಕ ಚತುರ್ದಶಿಯಂದು ಯಮ ದೇವರಿಗೆ ಸಂಜೆ ಹೊತ್ತು ದೀಪ ಹಚ್ಚುವುದು ಅತ್ಯಂತ ಮಂಗಳಕರವಾಗಿದೆ. ಈ ಬಾರಿ ಅಕ್ಟೋಬರ್ 31ರಂದು ನೀವು ಸಂಜೆ 5:30 ರಿಂದ 6:45 ರವರೆಗೆ ಈ ಯಮದೀಪ ಹಚ್ಚುವುದು ಒಳ್ಳೆಯದು.
ದೀಪ ಹಚ್ಚುವ ಸ್ಥಳ
ಯಮ ದೀಪವನ್ನು ಮನೆಯ ಮುಂಬಾಗಿಲಲ್ಲಿ ದಕ್ಷಿಣಾಭಿಮುಖವಾಗಿ ಇಡುವುದು ವಾಡಿಕೆ. ವೈದಿಕ ಜ್ಯೋತಿಷ್ಯದಲ್ಲಿ, ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎನ್ನಲಾಗಿದೆ. ಹೀಗಾಗಿ ಈ ದಿಕ್ಕಿನಲ್ಲಿ ದೀಪ ಬೆಳಗುವುದು ನಿಮಗೆ ಆಯುಷ್ಯ, ನೆಮ್ಮದಿ, ಅದೃಷ್ಟವನ್ನು ಕರುಣಿಸುತ್ತದೆ.
ದೀಪವನ್ನು ಮನೆಯ ಹೊರಗೆ, ಮುಂಭಾಗದ ಬಾಗಿಲಿನ ಬಳಿ ಇಡುವುದು ಮನೆಯನ್ನು ಕೆಟ್ಟ ಶಕ್ತಿಗಳು ಮತ್ತು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ.
ಯಮನಿಗೆ ದೀಪ ಹಚ್ಚುವಾಗ ಮಣ್ಣಿನ ದೀಪಗಳನ್ನು ಆರಿಸಿಕೊಳ್ಳಬೇಕು. ಈ ದೀಪಕ್ಕೆ ನೀವು ಸಾಸಿವೆ ಎಣ್ಣೆ ಅಥವಾ ಎಳ್ಳಿನ ಎಣ್ಣೆಯನ್ನು ಹಾಕಿ ದೀಪ ಬೆಳಗಿಸಬೇಕು.
ಸಾಸಿವೆ ಎಣ್ಣೆ ಅಥವಾ ಎಳ್ಳಿನ ಎಣ್ಣೆಯು ಹಿಂದಿನಿಂದ ಆಚರಣೆಯಲ್ಲಿವೆ ಮತ್ತು ಇವು ಹೆಚ್ಚು ಹೊತ್ತು ದೀಪ ಉರಿಯಲು ಸಹಾಯ ಮಾಡುತ್ತವೆ. ಆದ್ದರಿಂದ ಇವೆರಡನ್ನು ದೀಪಕ್ಕೆ ಬಳಸೋದು ಉತ್ತಮ.
ಹತ್ತಿ ಬತ್ತಿಯನ್ನೇ ಬಳಸಬೇಕು. ಕೆಲವರು ಬಾಳೆ ಮರದಿಂದ ಮಾಡಿದ ದಾರವನ್ನು ಸಹ ಬಳಸುತ್ತಾರೆ, ಇದು ಕೂಡ ಒಳ್ಳೆಯದು.
ಪ್ರಾರ್ಥನೆ
ದೀಪ ಬೆಳಗಿಸಿ ಭಕ್ತಿಯಿಂದ ಯಮನ ಆರಾಧನೆ, ಪೂಜೆ ಮಾಡಬೇಕು. ಸಮೃದ್ಧಿ, ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಯಮರಾಯನಿಗೆ ಪ್ರಾರ್ಥನೆ ಸಲ್ಲಿಸಬೇಕು.
ಮೃತ್ಯುನಾ ಪಾಶಹಸ್ತೇನ ಕಾಲಃ ಕಾರಯಾಣಃ ಸ್ಮೃತಃ
ಯಮಾಯ ಧರ್ಮರಾಜಾಯ ಮೃತ್ಯವೇ ಚ ಅಂತಕಾಯ ಚ
ದೀಪ ಹಚ್ಚಿ ಈ ಮಂತ್ರವನ್ನು ಜಪಿಸಿ ಯಮನ ಆಶೀರ್ವಾದ ಪಡೆಯಬಹುದು. ದೀಪಾವಳಿಯ ಸಮಯದಲ್ಲಿ ಸಂಪತ್ತು ಮತ್ತು ಯಶಸ್ಸಿನ ದೇವತೆಯಾದ ಲಕ್ಷ್ಮಿ ಪೂಜೆಯನ್ನು ಮಾಡುವುದರಿಂದ ದೀಪಾವಳಿಗೂ ಮುನ್ನ ಮನೆ ಸ್ವಚ್ಛ ಮಾಡಬೇಕು.
ದೀಪ ಹಚ್ಚುವಾಗ ಮನೆಯ ಸ್ವಚ್ಛತೆ ಜತೆ ಮನೆಯಲ್ಲಿ ಶಾಂತಿ ನೆಲೆಸಿರುವಂತೆ ನೋಡಿಕೊಳ್ಳಬೇಕು. ವಾದ ಮಾಡುವುದು, ಕೋಪಗೊಳ್ಳುವುದು ಅಥವಾ ನಕಾರಾತ್ಮಕ ನಡವಳಿಕೆಯನ್ನು ತೋರಿಸಬಾರದು.