newsics.com
ಬೆಂಗಳೂರು: ನಗರದಲ್ಲಿ ಮಳೆ ಬಿಟ್ಟೂಬಿಡದೆ ರಾದ್ದಾಂತ ಸೃಷ್ಟಿಸುತ್ತಿದ್ದರೆ, ಕಮ್ಮನಹಳ್ಳಿ ಬಳಿಯ ಬಾಬುಸಾ ಪಾಳ್ಯದಲ್ಲಿ (ಬಾಬುಸಾಹೇಬ್ ಪಾಳ್ಯ) ನಿರ್ಮಾಣ ಹಂತದ ಕಟ್ಟಡ ಕುಸಿದಿದ್ದು, ಐವರು ಅಸುನೀಗಿದ್ದಾರೆ ಎನ್ನಲಾಗಿದೆ. ಈವರೆಗೆ ಮೂವರ ಶವ ಹೊರತೆಗೆಯಲಾಗಿದೆ.
ಕಟ್ಟಡದ ಅವಶೇಷಗಳಿಡಿ 17ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎನ್ನಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ.
ಹೆಣ್ಣೂರು ಸಮೀಪ ಇರುವ ಬಾಬುಸಾಬ್ ಪಾಳ್ಯದಲ್ಲಿ ಈ ಘಟನೆ ನಡೆದಿದೆ.
ಕಟ್ಟಡ ಕಾಮಗಾರಿಯ ವೇಳೆಗೆ 17 ಜನಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಪರಿಹಾರ ಕಾರ್ಯಾಚರಣೆ ತಂಡ ಭೇಟಿ ನೀಡಿ ಅವಶೇಷಗಳನ್ನು ತೆಗೆಯುವ ಕೆಲಸ ನಡೆಯುತ್ತಿದೆ. ನಾಲ್ಕು ಅಗ್ನಿಶಾಮಕ ಸ್ಟೇಷನ್ಗಳಿಂದ ರಕ್ಷಣಾ ಕಾರ್ಯಕ್ಕೆ ಸಿಬ್ಬಂದಿ ರವಾನಿಸಲಾಗಿದೆ.
ಆರು ಅಂತಸ್ತಿನ ನಿರ್ಮಾಣ ಹಂತದ ಅಪಾರ್ಮೆಂಟ್ ಕಟ್ಟಡದ ನಿರ್ಮಾಣ ಕೆಲಸ ನಡೆಯುತ್ತಿತ್ತು. ಬಹುತೇಕ ಕಟ್ಟಡ ನಿರ್ಮಾಣ ಮಾಡಿ, ಪೇಂಟಿಂಗ್ ಕೆಲಸ ನಡೆಯುತ್ತಿತ್ತು ಎಂದು ವರದಿಯಾಗಿದೆ.
ಕಟ್ಟಡ ಕುಸಿತದ ವೇಳೆ ಬಚಾವ್ ಆಗಿ ಬಂದ ಕಾರ್ಮಿಕ ಕಣ್ಣೀರಿಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಘಟನೆ ಭೀಕರತೆಯನ್ನು ಗಾಯಾಳು ವ್ಯಕ್ತಿ ಬಿಚ್ಚಿಟ್ಟಿದ್ದಾರೆ. ಘಟನೆ ವೇಳೆ ತಲೆಗೆ ಪೆಟ್ಟು ಬಿದ್ದಿದೆ. ರಕ್ತ ಸಿಕ್ತವಾಗಿಯೇ ಆ ಸ್ಥಳದಿಂದ ಹೊರಬಂದಿದ್ದಾನೆ.