newsics.com
ಪಾವಗಡ(ತುಮಕೂರು): ಆಂಬುಲೆನ್ಸ್ ಸಿಗದೆ ವೃದ್ದನ ಮೃತದೇಹವನ್ನು ಆತನ ಮಕ್ಕಳು ಬೈಕ್ ನಲ್ಲಿ ಕೊಂಡೊಯ್ದ ಹೃದಯವಿದ್ರಾವಕ ಘಟನೆ ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ದಳವಾಯಿಹಳ್ಳಿ ಗ್ರಾಮದ ಗುಡುಕಲ್ಲು ಹೊನ್ನೂರಪ್ಪ (80 ವರ್ಷ) ಅವರನ್ನು ವೈ.ಎನ್.ಹೋಸಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿದೆ. ತಪಾಸಣೆ ವೇಳೆ ವ್ಯಕ್ತಿಯು ಮೃತಪಟ್ಟಿರುವುದು ದೃಢವಾಗಿದೆ. ನಂತರ ಮೃತ ಹೊನ್ನೂರಪ್ಪರ ಶವವನ್ನು ಸಾಗಿಸಲು ಆಂಬುಲೆನ್ಸ್ ಗಾಗಿ ಹುಡುಕಾಟ ನಡೆಸಲಾಗಿದೆ.
ವೈದ್ಯರ ಬಳಿ ಈ ಬಗ್ಗೆ ಚರ್ಚಿಸಲಾಗಿದ್ದು, ಕಾನೂನು ರೀತ್ಯ 108 ವಾಹನದಲ್ಲಿ ಶವ ಸಾಗಿಸಲು ಸಾಧ್ಯವಿಲ್ಲ ಎಂಬ ವಿಚಾರ ಗೊತ್ತಾಗಿದೆ.
ವಿಧಿ ಇಲ್ಲದೆ ಹೊನ್ನೂರಪ್ಪನ ಮಕ್ಕಳು ತಮ್ಮ ತಂದೆಯ ಮೃತದೇಹವನ್ನು ತಮ್ಮ ದ್ವಿಚಕ್ರ ವಾಹನದಲ್ಲೇ ಕೂರಿಸಿಕೊಂಡು ಗ್ರಾಮಕ್ಕೆ ತೆರಳಿದ್ದಾರೆ.
ವೈ.ಎನ್.ಹೊಸಕೋಟಯ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು 34 ಹಳ್ಳಿಯ ಹದಿನೈದು ಸಾವಿರ ಜನ ಸೇರಿದಂತೆ ಆಂಧ್ರಪ್ರದೇಶ ಜನರು ಇಲ್ಲಿಗೆ ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಬರುತ್ತಾರೆ. ಪ್ರತಿನಿತ್ಯ ಸುಮಾರು 200-250 ರೋಗಿಗಳು ಭೇಟಿ ನೀಡುತ್ತಾರೆ. ಈ ಹಿಂದೆ ಇದ್ದ ಆಂಬುಲೆನ್ಸ್ ಸೇವೆ ನಿಂತು ವರ್ಷಗಳೇ ಕಳೆದಿವೆ.