newsics.com | ನ್ಯೂಸಿಕ್ಸ್
ಮೈಸೂರು: ಶನಿವಾರ ರಾತ್ರಿ ನಿಧನರಾದ ಭಾರತದ ಕೋಗಿಲೆ, ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ (ಶಿಷ್ಟಾಲಯ ಶ್ರೀರಂಗಂ ಜಾನಕಿ) ಅವರ ಅಂತ್ಯಕ್ರಿಯೆಯು ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆಯ ಕಣಿಯನಹುಂಡಿ ಗ್ರಾಮದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿತು.
ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿದ್ದು, ಮೈಸೂರು ಜಿಲ್ಲಾಡಳಿತದ ವತಿಯಿಂದ ಪೊಲೀಸ್ ಗೌರವವನ್ನು ಸಲ್ಲಿಸುವ ಮೂಲಕ ಗಾನಕೋಗಿಲೆಗೆ ಭಾವಪೂರ್ಣ ವಿದಾಯ ಹೇಳಲಾಯಿತು.
ಕೌಟುಂಬಿಕ ಹಿನ್ನೆಲೆಯಲ್ಲಿ ಜಾನಕಿ ಅವರ ಕುಟುಂಬವು ಇತ್ತೀಚಿನ ವರ್ಷಗಳಲ್ಲಿ ಸಾಲು ಸಾಲು ಆಘಾತಗಳನ್ನು ಎದುರಿಸಿತ್ತು. ಜಾನಕಿ ಅವರ ಪತಿ ರಾಮಪ್ರಸಾದ್ ಅವರು 1997ರಲ್ಲೇ ನಿಧನರಾಗಿದ್ದರು. ತದನಂತರ, ಅವರ ಏಕೈಕ ಪುತ್ರ ಮುರಳಿ ಕೃಷ್ಣ ಅವರು ಕೂಡ ಈ ವರ್ಷದ (2026) ಜನವರಿ 22 ರಂದು ದಿಢೀರ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು. ಕುಟುಂಬದಲ್ಲಿ ಪುರುಷ ವಾರಸುದಾರರು ಇಲ್ಲದ ಕಾರಣ, ಮುರಳಿ ಕೃಷ್ಣ ಅವರ ಪುತ್ರಿ (ಎಸ್. ಜಾನಕಿ ಅವರ ಮೊಮ್ಮಗಳು) ಅಪ್ಸರಾ ಅವರು ಕುಟುಂಬದ ಪರವಾಗಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ, ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಎಸ್. ಜಾನಕಿ ಅವರ ವೈವಾಹಿಕ ಜೀವನವು ಅತ್ಯಂತ ಆದರ್ಶಮಯವಾಗಿತ್ತು. ವೇದಿಕೆಯೊಂದರಲ್ಲಿ ಹಾಡುತ್ತಿದ್ದಾಗ ಜಾನಕಿ ಅವರನ್ನು ಮೊದಲ ಬಾರಿಗೆ ನೋಡಿದ್ದ ರಾಮಪ್ರಸಾದ್, ನಂತರ ಕುಟುಂಬದವರ ಮೂಲಕ ಸ್ನೇಹಿತರಾಗಿ, ಆ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. 1956ರಲ್ಲಿ ಜಾನಕಿ ಅವರು ತಮ್ಮ 18ನೇ ವಯಸ್ಸಿನಲ್ಲಿ ರಾಮಪ್ರಸಾದ್ ಅವರನ್ನು ವಿವಾಹವಾದರು. ಜಾನಕಿ ಅವರು ಪ್ರೀತಿಯಿಂದ ‘ರಾಮು’ ಎಂದು ಕರೆಯುತ್ತಿದ್ದ ಪತಿ ರಾಮಪ್ರಸಾದ್, ತಮ್ಮ ಜೀವಿತಾವಧಿಯ ಕೊನೆಯವರೆಗೂ ಜಾನಕಿ ಅವರ ಸಂಗೀತ ವೃತ್ತಿಗೆ ಹೆಗಲಿಗೆ ಹೆಗಲಾಗಿ ನಿಂತು ಪ್ರೋತ್ಸಾಹಿಸಿದ್ದರು. 1997ರಲ್ಲಿ ಪತಿ ನಿಧನರಾಗುವವರೆಗೂ ಈ ದಂಪತಿ ಚಿತ್ರರಂಗದಲ್ಲೇ ಅತ್ಯಂತ ಮಾದರಿ ಜೋಡಿಯಾಗಿ ಬದುಕಿದ್ದರು.
ಈ ದಂಪತಿಯ ಏಕೈಕ ಪುತ್ರ ಮುರಳಿ ಕೃಷ್ಣ ಅವರು ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ತೀವ್ರ ಆಸಕ್ತಿ ಹೊಂದಿದ್ದರಲ್ಲದೆ, ಭರತನಾಟ್ಯವನ್ನೂ ಕರಗತ ಮಾಡಿಕೊಂಡಿದ್ದರು. ಅವರು ಚೆನ್ನೈ ಮೂಲದ ನರ್ತಕಿ ಉಮಾ ಅವರನ್ನು ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ಆದರೆ, ಕಾಲಕ್ರಮೇಣ ದಾಂಪತ್ಯದಲ್ಲಿ ಬಿರುಕು ಮೂಡಿ ವಿಚ್ಛೇದನ ಪಡೆದಿದ್ದ ಮುರಳಿ ಕೃಷ್ಣ, ತಾಯಿ ಜಾನಕಿ ಅವರ ಜೊತೆಯಲ್ಲೇ ವಾಸವಾಗಿದ್ದರು. ದುರದೃಷ್ಟವಶಾತ್, ಇದೇ ವರ್ಷದ ಆರಂಭದಲ್ಲಿ ಮುರಳಿ ಕೃಷ್ಣ ಅವರು ಮೃತಪಟ್ಟಿದ್ದು ಜಾನಕಿ ಅವರಿಗೆ ತೀವ್ರ ಆಘಾತವನ್ನುಂಟು ಮಾಡಿತ್ತು.
ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ಸಾವಿರಾರು ಮಧುರ ಗೀತೆಗಳನ್ನು ಹಾಡಿ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದ ಎಸ್ ಜಾನಕಿ ಅವರು 2017ರ ಅಕ್ಟೋಬರ್ 28ರಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಧಿಕೃತವಾಗಿ ಹಾಡುವುದಕ್ಕೆ ವಿದಾಯ ಹೇಳಿದ್ದರು. ಮಲಯಾಳಂ ಚಿತ್ರ ’10 ಕಲ್ಪನಕಳ್’ ಚಿತ್ರದ ‘ಅಮ್ಮ ಪೂವಿನುಂ’ ಎಂಬ ಜೋಗುಳ ಗೀತೆ ಇವರ ಕಂಠದಲ್ಲಿ ಮೂಡಿಬಂದ ಕೊನೆಯ ಹಾಡಾಗಿತ್ತು. ಪತಿಯ ನಿಧನದ ನಂತರ ಮೈಸೂರಿನ ಭೋಗಾದಿಯಲ್ಲಿ ಪುತ್ರ ಮುರಳಿ ಕೃಷ್ಣ ಅವರೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿದ್ದ ಜಾನಕಿ ಅವರು, ಪುತ್ರನ ಅಗಲಿಕೆಯ ಕೆಲವೇ ತಿಂಗಳುಗಳಲ್ಲಿ ತಾವೂ ಸಹ ಇಹಲೋಕ ತ್ಯಜಿಸಿದ್ದಾರೆ.