newsics.com / ನ್ಯೂಸಿಕ್ಸ್
ಚೆನ್ನೈ(ತಮಿಳುನಾಡು): ಇಲ್ಲಿನ ತಿರುವಳ್ಳೂರಿನಲ್ಲಿರುವ ಸೀಗಡಿ ಸಂಸ್ಕರಣಾ ಕಾರ್ಖಾನೆಯಲ್ಲಿ ಭಾನುವಾರ ಮಧ್ಯಾಹ್ನ ಅಮೋನಿಯಾ ಅನಿಲ ಸೋರಿಕೆಯಾಗಿ, ಏಳು ಮಹಿಳಾ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಸುಮಾರು 60ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಈ ಪೈಕಿ 40 ಮಂದಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಿರುವಳ್ಳೂರಿನ ಪೆರಿಯಪಾಳಯಂ ಬಳಿಯ ಕನ್ನಿಗೈಪೈರ್ ಗ್ರಾಮದಲ್ಲಿ ಖಾಸಗಿ ಸೀಗಡಿ ರಫ್ತು ಕಾರ್ಖಾನೆ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಇದ್ದಕ್ಕಿದ್ದಂತೆ ಅಮೋನಿಯಾ ಅನಿಲ ಸೋರಿಕೆಯಾಗಿದೆ. ಕೆಲವೇ ನಿಮಿಷಗಳಲ್ಲಿ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಒಬ್ಬರ ಮೇಲೊಬ್ಬರಂತೆ ಕುಸಿದು ಬಿದ್ದಿದ್ದಾರೆ ಎಂದು ವರದಿಯಾಗಿದೆ.
ಸಾರ್ವಜನಿಕರ ಸಹಾಯದಿಂದ ಅಸ್ವಸ್ಥ ಕಾರ್ಮಿಕರನ್ನು ಕೂಡಲೇ ಇಲ್ಲಿನ ಎರಡು ಸ್ಥಳೀಯ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿದ್ದಾಗಲೇ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತುರ್ತು ಪರಿಸ್ಥಿತಿಯ ಬಗ್ಗೆ ತಿಳಿದ ನಂತರ ಅರಕ್ಕೋಣಂನಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್)ಯ 4ನೇ ಬೆಟಾಲಿಯನ್ನಿನ ಪ್ರಧಾನ ಕಚೇರಿ ತಕ್ಷಣವೇ ತನ್ನ ತಂಡವನ್ನು ಘಟನಾ ಸ್ಥಳಕ್ಕೆ ಕಳುಹಿಸಿದೆ.
ಜಿಲ್ಲಾಡಳಿತದ ಮನವಿ ಮತ್ತು ಎನ್ಡಿಆರ್ಎಫ್ 4ನೇ ಬೆಟಾಲಿಯನ್ನ ಹಿರಿಯ ಕಮಾಂಡೆಂಟ್ ಅಖಿಲೇಶ್ ಕುಮಾರ್ ಅವರ ನಿರ್ದೇಶನದಂತೆ ವಿಶೇಷ ರಾಸಾಯನಿಕ, ಜೈವಿಕ, ವಿಕಿರಣಶೀಲ ಮತ್ತು ಪರಮಾಣು (ಸಿಬಿಆರ್ಎನ್) ಪ್ರತಿಕ್ರಿಯಾ ತಂಡವನ್ನು ಸಂಕಷ್ಟಪೀಡಿತ ಸ್ಥಳಕ್ಕೆ ತಕ್ಷಣ ರವಾನಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚೆನ್ನೈನಿಂದ 30 ಎನ್ಡಿಆರ್ಎಫ್ ಸಿಬ್ಬಂದಿ ಇರುವ ರಕ್ಷಣಾ ತಂಡವು ತುರ್ತು ಕಾರ್ಯಾಚರಣೆಗಳನ್ನು ಕೈಗೆತ್ತಿಕೊಳ್ಳಲು ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇ), ಅನಿಲ ಪತ್ತೆ ಸಾಧನಗಳು ಹಾಗು ವಿಶೇಷ ಸಿಬಿಆರ್ಎನ್ ರಕ್ಷಣಾ ಸಾಧನಗಳೊಂದಿಗೆ ಈಗಾಗಲೇ ಸ್ಥಳ ತಲುಪಿವೆ ಎಂದು ಹೇಳಿದ್ದಾರೆ.
ಈ ತಂಡ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವುದು, ಅಪಾಯಕಾರಿ ವಲಯವನ್ನು ಪ್ರತ್ಯೇಕಿಸುವುದು, ಅನಿಲ ಸೋರಿಕೆಯ ಪರಿಣಾಮಗಳ ನಿರ್ಣಯ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಹಾಗು ಹೆಚ್ಚಿನ ಅಪಾಯಗಳನ್ನು ತಡೆಗಟ್ಟಲು ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ತಿಳಿದುಬಂದಿದೆ.
Person dies of swine flu ರಾಜ್ಯದಲ್ಲಿ ಹಂದಿ ಜ್ವರಕ್ಕೆ ಓರ್ವ ಬಲಿ: ಯಲ್ಲಾಪುರದಲ್ಲಿ ತೀವ್ರ ಆತಂಕ
NEET PM ಏರ್ಪೋರ್ಟ್ನಲ್ಲೇ 45 ನಿಮಿಷ ಕಾದು ನೀಟ್ ಅಭ್ಯರ್ಥಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಮೋದಿ!