newsics.com
ಉತ್ತರ ಕನ್ನಡ: ಧಾರ್ಮಿಕ, ಪ್ರವಾಸಿ ಕ್ಷೇತ್ರ ಗೋಕರ್ಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಅದ್ದೂರಿಯಾಗಿ ನಡೆಯುತ್ತದೆ. ಈ ಹಬ್ಬಕ್ಕೆ ಗ್ರಾಮೀಣ ಸಂಸ್ಕೃತಿಯ ಸಂಕೇತವಾದ ಪೆಟ್ಟೆ ಹೊಡೆಯುವ ಆಚರಣೆ ಮತ್ತಷ್ಟು ಮೆರಗು ನೀಡುತ್ತಿದೆ. ಇನ್ನು ನಾಳೆ ಪೆಟ್ಲೆ ಹಬ್ಬ ನಡೆಯಲಿದ್ದು, ಹಸಿರು ಪಟಾಕಿ ಸದ್ದು ಜೋರಾಗಿದೆ.
ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಮಲೆನಾಡಿನಲ್ಲಿ ಪೆಟ್ಲು ಆಟದ ಮೂಲಕನೂ ನೆನಪಿಸುತ್ತಾರೆ. ಹೌದು, ಸಾಂಪ್ರದಾಯಿಕ ಪಟಾಕಿಯಾದ ಇದನ್ನು ಥೇಟ್ ಪಿಸ್ತೂಲಿನಂತೆ ಉಪಯೋಗಿಸುತ್ತಾರೆ. ಇದನ್ನ ಪೆಟ್ಲು, ಪೆಟ್ಲ, ಪೇಟ್ಲ ಅಂತಲೂ ಕರೆಯುತ್ತಾರೆ. ಮೊದಲು ಬಿದಿರನ್ನು ಕತ್ತರಿಸಿ ಅದನ್ನು ಕೊಳಲಿನ ಆಕಾರದಲ್ಲಿ ತುದಿಗೆರೆಡು ತೂತು ಮಾಡುತ್ತಾರೆ. ನಂತರದಲ್ಲಿ ಮತ್ತೊಂದು ಬಿದಿರನ್ನು ಸೀರ ಕಡ್ಡಿಯ ಹಾಗೆ ಮಾಡಿ ತುದಿಗೆ ಮೊದಲು ತಯಾರಿಸಿದ ಬಿದಿರಿನ ಮಾದರಿಯಲ್ಲೇ ಅಷ್ಟೇ ಅಳತೆಯದ್ದೇ ಹಿಡಿಕೆಯನ್ನು ತಯಾರಿಸುತ್ತಾರೆ. ನಂತರ ಅದರಲ್ಲಿ ಜುಮ್ಮನಕಾಯಿಯನ್ನು ಹಾಕಿ ಹೊಡೆಯುತ್ತಾರೆ. ಹಾಗೆ ಹೊಡೆಯುವ ಸಾಮಾನ್ಯ ಪಟಾಕಿ ಶಬ್ದಕ್ಕಿಂತ ಜೋರಾಗಿರುತ್ತದೆ.
50 ವರ್ಷ ವಯಸ್ಸಿನ ತುಕಾರಾಮ್ ಹುಲಸ್ವಾರ್ ಅವರು ಇದನ್ನು ತಯಾರಿಸುತ್ತಾರೆ. ಮೂಲ ಗೋಕರ್ಣದ ನಿವಾಸಿಯಾದ ಇವರು ಕಳೆದ 14 ವರ್ಷದಿಂದ ಈ ಆಟಿಕೆ ತಯಾರಿಸುತ್ತಿದ್ದಾರೆ. ಒಂದು ಪೆಟ್ಲುಗೆ 150 ರೂಪಾಯಿ, ಜುಮ್ಮನಕಾಯಿ ಗೊಂಚಲೊಂದಕ್ಕೆ 20 ರೂಪಾಯಿ ದರ ಇದೆ. ಅರ್ಧ ಗಂಟೆಯಲ್ಲೇ ಪೆಟ್ಲೆ ಮಾಡಿ ಮುಗಿಸುವ ಇವರು ಹಬ್ಬದ ಆಚೀಚೆ ದಿನಗಳಲ್ಲಿ ಸಾವಿರಕ್ಕೂ ಹೆಚ್ಚಿನ ಪೆಟ್ಲೆಗಳನ್ನು ತಯಾರಿಸುತ್ತಾರೆ.