newsics.com
ತುಮಕೂರು: ಮುತ್ತುರಾಯಸ್ವಾಮಿ ಜಾತ್ರೆಯಲ್ಲಿ ಮಾಡಿದ್ದ ಆಹಾರ ಸೇವಿಸಿ ಮೂವರು ಮಹಿಳೆಯರು ಮೃತಪಟ್ಟು, 18 ಮಂದಿ ಅಸ್ವಸ್ಥಗೊಂಡ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಬುಳ್ಳಾಸಂದ್ರ ಗ್ರಾಮದಲ್ಲಿ ನಡೆದಿದೆ.
ಜಾತ್ರೆಯಲ್ಲಿ ಮಾಡಿದ್ದ ಆಹಾರ ಸೇವಿಸಿದ ನಂತರ ವಾಂತಿ, ಭೇದಿ ಕಾಣಿಸಿಕೊಂಡು ಮೂವರು ಮಹಿಳೆಯರು ಮೃತಪಟ್ಟಿದ್ದು, ಅಸ್ವಸ್ಥರಾದ 18 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಿಮ್ಮಕ್ಕ(90), ಹಿರಿಯಮ್ಮ(80), ಕಾಟಮ್ಮ(40) ಮಧುಗಿರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬುಳ್ಳಾಸಂದ್ರ ಗ್ರಾಮದ ಮುತ್ತುರಾಯಸ್ವಾಮಿ, ಕರಿಯಮ್ಮ ದೇವಿ, ಭೂತಪ್ಪ ಸ್ವಾಮಿ ದೇವರಿಗೆ ಹರಿಸೇವೆ ಏರ್ಪಡಿಸಿದ್ದು, ಆರತಿ ಬೆಳಗಿದ ಹೆಣ್ಣು ಮಕ್ಕಳು ಪ್ರಸಾದವಾಗಿ ಹೆಸರುಬೇಳೆ ಪಾಯಸ, ಅನ್ನ ಸಾಂಬಾರ್ ಸೇವಿಸಿ ಮನೆಗೆ ಮರಳಿದ ಬಳಿಕ ಕೆಲವರಿಗೆ ವಾಂತಿ ಭೇದಿ ಕಾಣಿಸಿಕೊಂಡಿತ್ತು. ಗ್ರಾಮದ ಶಾಲೆಯಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆದು ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.